ವೀರನಲ್ಲದ ಬರೀ ಹೆಸರಿನ ಸಾವರ್ಕರ್ – ಒಂದು ವಿಶ್ಲೇಷಣೆ: ಡಾ.ಎಚ್.ಸಿ.ಮಹದೇವಪ್ಪ

4 years ago

ಈತ ಆರಂಭದಲ್ಲಿ ಹೋರಾಟಗಾರ – ನಂತರ ಬ್ರಿಟಿಷರ ಸೇವಕ
ಜೈಲುವಾಸ ಮತ್ತು ಕ್ಷಮಾಪಣಾ ಪತ್ರ ಬರಹ
ಕ್ಷಮಾಪಣಾ ಪತ್ರ 1 & 2
3 ಮತ್ತು 4 ನೇ ಕ್ಷಮಾಪಣಾ ಪತ್ರ:
ಗಾಂಧೀ ಹತ್ಯಾ ಸಂಚುಕೋರ ಸಾವರ್ಕರ್

ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಬ್ರಿಟೀಷರ ಬಳಿ ಕ್ಷಮಾದಾನ ಕೋರಿ ಪತ್ರಗಳನ್ನು ಬರೆಯುತ್ತಿದ್ದ ಸಾವರ್ಕರ್ ಬಗ್ಗೆ ನನಗೆ ಹೇಡಿ ಎಂಬ ಭಾವನೆಗಿಂತ ಹುಲು ಮನುಷ್ಯನೊಬ್ಬ ತನ್ನ ಪ್ರಾಣ ಹೋಗುವುದಕ್ಕೂ ಮುನ್ನ ಅದನ್ನು ಕಾಪಾಡಿಕೊಳ್ಳಲು ಏನಾದರೂ ಮಾಡುವಂತಹ ಸ್ಥಿತಿಯಲ್ಲಿ ಇದ್ದಹಾಗೆ ನನಗೆ ಅನಿಸುತ್ತದೆ.

ಈ ಹಿನ್ನಲೆಯಲ್ಲಿ ನೋಡಿದರೆ ಆತ ಓರ್ವ ಹೇಡಿ ಇದ್ದಿರಬಹುದಾದರೂ ವೀರನಂತೂ ಖಂಡಿತಾ ಅಲ್ಲ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.

1857 ರ ಸಿಪಾಯಿ ದಂಗೆಯ ನಂತರದಲ್ಲಿ ಜನಿಸಿದ ಸಾವರ್ಕರ್ ಹೋರಾಟಕ್ಕಿಂತಲೂ ಹೆಚ್ಚಾಗಿ ಹಲವು ಸ್ವಾತಂತ್ರ್ಯದ ಸ್ಪೂರ್ತಿಗೆ ವಿರುದ್ಧವಾದ ಸಂಗತಿಗಳಲ್ಲೇ ತನ್ನ ಬದುಕನ್ನು ಮುಗಿಸುತ್ತಾರೆ.

ಭಾರತದ ಸ್ವತಂತ್ರ ಚಳುವಳಿಗಾಗಿ ತಾನೇ ಸೈನ್ಯವೊಂದನ್ನು ಕಟ್ಟಿ ಅತ್ತ ಸುಭಾಷ್ ಚಂದ್ರಬೋಸ್ ಅವರು ಹೋರಾಟ ನಡೆಸುತ್ತಿದ್ದರೆ, ಇತ್ತ ಒಂದು ಪಕ್ಷದ ವತಿಯಿಂದ ದೇಶಭಕ್ತನೆಂದು ಕರೆಸಿಕೊಳ್ಳುತ್ತಿರುವ ಸಾವರ್ಕರ್ ಮಾತ್ರ ಸಾವಿರಾರು ಜನ ಭಾರತೀಯರು ಬ್ರಿಟಿಷರ ಸೇನೆಗೆ ಸೇರಿಕೊಳ್ಳಲು ಸಹಾಯ ಮಾಡುತ್ತಿದ್ದ. ಇದೊಂದು ತಂತ್ರಗಾರಿಕೆಯೇನೋ ಎಂಬ ಪ್ರಶ್ನೆ ಮೂಡಿದಾಗಲೆಲ್ಲಾ ಅಲ್ಲಿ ಸೇರಿಕೊಂಡ ಭಾರತೀಯರು ಬ್ರಿಟಿಷರಿಗಿಂತ ಹೆಚ್ಚಾಗಿ ಭಾರತೀಯರನ್ನು ಹಿಂಸಿಸುತ್ತಿದ್ದರೇ ವಿನಃ ಎಂದೂ ಸಹ ಸಾಮಾನ್ಯ ಜನರಿಗೆ ಸಹಾಯವನ್ನು ಮಾಡಲಿಲ್ಲ. ಹೀಗಿದ್ದರೂ ಸಹ ಭಾರತೀಯರನ್ನು ಬ್ರಿಟಿಷ್ ಸೇನೆಗೆ ಸೇರಿಸುವ ಸಾವರ್ಕರ್ ಪ್ರಯತ್ನ ಮುಂದುವರೆದೇ ಇತ್ತು.

ಇದಿಷ್ಟು ಸಾಲದು ಎಂಬಂತೆ ಇಡೀ ಭಾರತವೇ ಏಕತೆಯ ಮಂತ್ರ ಜಪಿಸುತ್ತಾ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರೆ ಸಾವರ್ಕರ್ ಮಾತ್ರ ತನ್ನ ಹಿಂದುತ್ವ ಪ್ರತಿಪಾದನೆಯ ಮೂಲಕ ಚಳುವಳಿಯ ಆಶಯಕ್ಕೆ ವಿರುದ್ಧವಾಗಿ ಕೋಮು ವಿಭಜನೆಯಲ್ಲಿ ತೊಡಗಿದ್ದ.

ಈತ ಆರಂಭದಲ್ಲಿ ಹೋರಾಟಗಾರ – ನಂತರ ಬ್ರಿಟಿಷರ ಸೇವಕ

ತನ್ನ ತಲೆಯಲ್ಲಿ ಸಮಾಜವನ್ನು ವಿಭಜಿಸುವ ಕೆಟ್ಟ ಹಿಂದುತ್ವದ ಕಲ್ಪನೆಯನ್ನು ತುಂಬಿಕೊಳ್ಳುವರೆಗೂ ಸಹ ಸಾವರ್ಕರ್ ಎಂಬ ವ್ಯಕ್ತಿಯು ಬ್ರಿಟಿಷರ ವಿರುದ್ಧ ಹಿಂಸಾತ್ಮಕ ಪ್ರತಿರೋಧವನ್ನು ಒಡ್ಡಿದ್ದ. 1906 ರಲ್ಲಿ ಇಂಗ್ಲೆಂಡಿಗೆ ಕಾನೂನು ಪದವಿಯನ್ನು ವ್ಯಾಸಾಂಗ ಮಾಡಲು ತೆರಳಿದ ಈತ ಅಲ್ಲಿಯೇ ಯುವಕರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಘಟನೆಯನ್ನು ಮಾಡಿದ್ದರು

ಬ್ರಿಟಿಷ್ ವಿರೋಧಿ ನಡವಳಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಸಹಜವಾಗಿಯೇ ಸಾವರ್ಕರ್ ಮೇಲೆ ಬಂಧನ ಹಾಗೂ ಇತ್ಯಾದಿ ಕಠಿಣ ಕ್ರಮಗಳನ್ನು ಜರುಗಿಸಿದರು.

ನೆಹರೂ ಗಾಂಧಿ ಆದಿಯಾಗಿ ಎಲ್ಲರೂ ಸಹ ಹೀಗೆ ಶಿಕ್ಷೆಗಳನ್ನು ಅನುಭವಿಸಿ ಮತ್ತೆ ಮತ್ತೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ಚಳುವಳಿಯನ್ನು ಸಕ್ರಿಯವಾಗಿ ಮುನ್ನಡೆಸುತ್ತಿದ್ದರು.

ಬಹುಶಃ ಬ್ರಿಟಿಷರಿಂದ ಶಿಕ್ಷೆಯನ್ನು ಅನುಭವಿಸಿದ್ದ ಸಾವರ್ಕರ್ ಕೂಡಾ ಗಾಂಧಿ, ನೆಹರೂ ಅವರಂತೆಯೇ ಮತ್ತೆ ಸ್ಚಾತಂತ್ರ್ಯ ಚಳುವಳಿಗೆ ಮರಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅದು ಹಾಗಾಗಲಿಲ್ಲ. ಬದಲಿಗೆ ಸಾವರ್ಕರ್ ಪೂರ್ಣ ಪ್ರಮಾಣದಲ್ಲಿ ಬ್ರಿಟಿಷರ ಬೆಂಬಲಿಗನಾಗಿ ಬದಲಾಗತೊಡಗಿದರು. ಆತನದೇ ಹೇಳಿಕೆಯ ಪ್ರಕಾರ

“ ನಾವು ಬ್ರಿಟಿಷರನ್ನು ದೂರುವುದನ್ನು ಬಿಡಬೇಕು. ಏಕೆಂದರೆ ಇಂದು ಬ್ರಿಟಿಷರು ನಿಯಮಗಳನ್ನು ವಿಧಿಸಿದರೆ ನಾಳೆ ಇನ್ಯಾರೋ ನಮ್ಮ ಮೇಲೆ ನಿಯಮಗಳನ್ನು ವಿಧಿಸುತ್ತಾರೆ. ಇದಕ್ಕೆ ಕೊನೆಯೆಂಬುದಿಲ್ಲ. ಹೀಗಾಗಿ ನಾವೆಲ್ಲರೂ ಸಹ ಅವರ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕು” ಎಂದು ಹೇಳಿದ್ದರು.

ಜೈಲುವಾಸ ಮತ್ತು ಕ್ಷಮಾಪಣಾ ಪತ್ರ ಬರಹ :

1909 ರಲ್ಲಿ ನಾಸಿಕ್ ನ ಕಲೆಕ್ಟರ್ ಆಗಿದ್ದ ಎ.ಎಂ.ಟಿ. ಜಾಕ್ಸನ್ ಅವರ ಹತ್ಯೆ ಮಾಡಲು ಅಭಿನವ್ ಭಾರತ್ ಸೊಸೈಟಿಯ ಸದಸ್ಯನಿಗೆ ಬಂದೂಕು ಪೂರೈಸಿದ್ದ ಅಪರಾಧದ ಮೇಲೆ ಸಾವರ್ಕರ್ ಗೆ ಅಂಡಮಾನ್ ನ ಸೆಲ್ಯುಲಾರ್ ಜೈಲಿನಲ್ಲಿ 50 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸುತ್ತಾರೆ. ಇದೇ ವೇಳೆಯಲ್ಲೇ ಆತ ನಿಜಕ್ಕೂ ದೇಶಭಕ್ತನೇ ಎಂದು ಅನುಮಾನಿಸುವಂತಹ ಘಟನೆಗಳು ಸಂಭವಿಸುತ್ತದೆ.

ಅದರಲ್ಲೂ ಭಾರತದ ಜನತೆಯ ಸ್ವಾತಂತ್ರ್ಯ ವಿರೋಧಿಗಳಾಗಿದ್ದ ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆಯುತ್ತಿದ್ದ ಈತ ಭಾರತದ ಸ್ವಾತಂತ್ರ್ಯ ಹೋರಾಟದ ಘನತೆಯನ್ನು ಬ್ರಿಟಿಷರ ಎದುರು ಕುಗ್ಗುವಂತೆ ಮಾಡಿದರು. ವೈಯಕ್ತಿಕ ಕಾರಣಕ್ಕಾಗಿ ಸಮಷ್ಟಿಯ ಹಿತವನ್ನು ಬಲಿಕೊಟ್ಟು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದ ಸಾವರ್ಕರ್ ಎಂದಾದರೂ ವೀರ ಎನಿಸಿಕೊಳ್ಳಲು ಸಾಧ್ಯವೇ?

ಕ್ಷಮಾಪಣಾ ಪತ್ರ 1 & 2

ಜೈಲು ಸೇರಿದ ಒಂದೇ ತಿಂಗಳಲ್ಲಿ ಶಿಕ್ಷೆಗೆ ಹೆದರಿದ ಸಾವರ್ಕರ್ ಬ್ರಿಟಿಷರಿಗೆ ಮೊದಲ ಕ್ಷಮಾಪಣಾ ಪತ್ರವನ್ನು ಬರೆಯುತ್ತಾರೆ. ಇದು 1911 ರಲ್ಲಿ ತಿರಸ್ಕೃತಗೊಳ್ಳುತ್ತದೆ. ಇದಾದ ನಂತರ 2 ವರ್ಷಗಳ ಕಾಲ ತಾನು ಸಾಧು ಮನುಷ್ಯ ಎಂಬ ಭಾವನೆ ಹುಟ್ಟುವಂತೆ ಜೈಲಿನಲ್ಲಿ ಇದ್ದ ಈತ 1913 ರಲ್ಲಿ ಎರಡನೇ ಕ್ಷಮಾಪಣಾ ಪತ್ರವೊಂದನ್ನು ಬರೆಯುತ್ತಾರೆ. ಈ ಪತ್ರದಲ್ಲಿ

“1919 ರಲ್ಲಿ ಇತರರೊಡನೆ ನನ್ನನ್ನು ಬಂಧಿಸಿದಾಗ ಎಲ್ಲರನ್ನೂ ಬಿಟ್ಟು ನನ್ನನ್ನು ಮಾತ್ರ “ಅಪಾಯಕಾರೀ ಖೈದಿ” ಎಂದು ಪರಿಗಣಿಸಿ 6 ತಿಂಗಳುಗಳ ಕಾಲ ಏಕಾಂತ ಶಿಕ್ಷೆಯನ್ನು ನೀಡಲಾಯಿತು.

ಆದರೆ ಬೇರೆಯವರಿಗೆ ನನಗೆ ನೀಡಿದ  ಶಿಕ್ಷೆಯನ್ನು ನೀವು ನೀಡಲಿಲ್ಲ.  ಆರು ತಿಂಗಳವರೆಗೆ ನನ್ನ ನಡವಳಿಕೆ ಉತ್ತಮವಾಗಿದ್ದರೂ ಸಹ ನೀವು ನನ್ನನ್ನು ಹೊರತು ಪಡಿಸಿ ಎಲ್ಲರನ್ನೂ ಬಿಡುಗಡೆಗೊಳಿಸಿದಿರಿ.  ಅವರಂತೆ ನನ್ನನ್ನೂ ಏಕೆ ಬಿಡುಗಡೆಗೊಳಿಸಲಿಲ್ಲ. ನನಗೇಕೆ ಅನ್ಯಾಯ ಮಾಡುತ್ತಿದ್ದಿರಿ” ಎಂದು ಪ್ರಶ್ನಿಸುತ್ತಾರೆ.

3 ಮತ್ತು 4 ನೇ ಕ್ಷಮಾಪಣಾ ಪತ್ರ:

ಮೊದಲೆರಡು ಮೂರು ವರ್ಷಗಳಲ್ಲೇ ಆ ಜೈಲಿನ ಶಿಕ್ಷೆ ಸಾವರ್ಕರ್ ಗೆ ಸಾಕಾಗಿ ಹೋಗಿರುತ್ತದೆ. ಹೀಗಾಗಿ ಆತ 1913 ರ ಬಳಿಕ ಮತ್ತೊಂದು ಕ್ಷಮಾಪಣಾ ಪತ್ರವನ್ನು ಬ್ರಿಟಿಷರಿಗೆ ಬರೆಯುತ್ತಾರೆ. ಈ ಪತ್ರದಲ್ಲಿ ಅವನು “ ನಾನು ಬ್ರಿಟಿಷ್ ಸರ್ಕಾರಕ್ಕೆ ನಿಷ್ಠನಾಗಿದ್ದು ಇನ್ನು ಮುಂದೆ ಬ್ರಿಟಿಷ್ ಸರ್ಕಾರದ ಪರವಾಗಿ ಇರುತ್ತೇನೆ. ಬ್ರಿಟಿಷ್ ಸರ್ಕಾರ ಬಯಸಿದರೆ ನಾನು ಇಂಗ್ಲೆಂಡಿನಲ್ಲಿ ಸಂಘಟಿಸಿದ ಯುವಕರನ್ನೆಲ್ಲಾ ಬಳಸಿಕೊಂಡು ಬ್ರಿಟಿಷ್ ಸರ್ಕಾರದ ನಿಯಮ ಮತ್ತು ಷರತ್ತುಗಳಿಗೆ ಬದ್ಧನಾಗಿ ಬ್ರಿಟಿಷರಿಗಾಗಿ ದುಡಿಯುತ್ತೇನೆ, ಹೀಗಾಗಿ ನನ್ನನ್ನು ನೀವು ಬಿಡುಗಡೆಗೊಳಿಸಬೇಕು”. ಎಂದು ವಿನಂತಿಸುತ್ತಾರೆ.

ಇನ್ನು 3 ನೇ ಕ್ಷಮಾಪಣಾ ಪತ್ರವೂ ಸಹ ಬ್ರಿಟಿಷರ ಕಸದ ಡಬ್ಬಿಗೆ ಸೇರಿದ್ದರಿಂದ ಮಾರ್ಚ್ 30, 1920 ರಂದು 4 ನೇ ಕ್ಷಮಾಪಣಾ ಪತ್ರವನ್ನು ಸಾವರ್ಕರ್ ಬರೆಯುತ್ತಾರೆ. ಈ ಪತ್ರದಲ್ಲಿ “ ಭಾರತದ ಪ್ರತಿಯೊಬ್ಬ ಬುದ್ದಿವಂತ ಜನರೂ ಸಹ ಭಾರತದ ಒಳಿತಿಗಾಗಿ ಬ್ರಿಟೀಷರನ್ನು ಬೆಂಬಲಿಸುತ್ತೇವೆ ಮತ್ತು ಅವರೊಡನೆ ಸಹಕರಿಸುತ್ತೇವೆ” ಎಂದು ಹೇಳುವ ಈತನಿಗೆ ಬಹುಶಃ ನಮ್ಮ ತ್ಯಾಗಮಯಿ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಖುದಿರಾಮ್ ಬೋಸ್, ರಾಜ್ ಗುರು, ಸುಖ್ ದೇವ್ , ಸಂಗೊಳ್ಳಿ ರಾಯಣ್ಣ ಅಂತಹ ಯುವಕರು ಸಾವರ್ಕರ್ ಎಂಬ ವ್ಯಕ್ತಿಯ ಇಂತಹ ಮಾತಿನ ಪರವಾಗಿ ಖಂಡಿತಾ ಇರಲಿಲ್ಲ. ಹೀಗಾಗಿ ನಿಜವಾದ ಹೋರಾಟಗಾರರ ದೇಶಭಕ್ತಿಯನ್ನೂ ಸಹ ತನ್ನ ಸ್ವಾರ್ಥಕ್ಕಾಗಿ ಭ್ರಷ್ಟಗೊಳಿಸುವಂತಹ ಕೆಟ್ಟ ಪ್ರಯತ್ನವನ್ನು ಸಾವರ್ಕರ್ ಮಾಡಿರುದು ಅತ್ಯಂತ ಸ್ಪಷ್ಟವಾಗಿದೆ.

ಗಾಂಧೀ ಹತ್ಯಾ ಸಂಚುಕೋರ ಸಾವರ್ಕರ್ :

ದೇಶದ ಹಿತಕ್ಕಾಗಿ ಮತ್ತು ಭಾರತೀಯರ ಘನತೆಯುಕ್ತ ಸ್ವಾತಂತ್ರ್ಯದ ಬದುಕಿಗಾಗಿ ತನ್ನ ಶಕ್ತಿ ಮೀರಿ ಹೋರಾಟ ನಡೆಸಿದ ಸರಳ ಸಜ್ಜನಿಕೆಯ ಮಹಾತ್ಮಾ ಗಾಂಧೀ ಅವರನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೊಲ್ಲುವಂತಹ ಹೀನ ಕೃತ್ಯವನ್ನು ಸಾವರ್ಕರ್ ಮಾಡುತ್ತಾನೆ. ಗೋಡ್ಸೆಯಂತಹ ಯುವಕರನ್ನು ದಾರಿ ತಪ್ಪಿಸಿದ ಸಾವರ್ಕರ್ 3 ಮಂದಿ ಯುವಕರನ್ನು ಗಾಂಧಿಯನ್ನು ಕೊಲ್ಲಲು 3 ಬಾರಿ ಕಳಿಸಿ ವಿಫಲರಾಗುತ್ತಾರೆ.

ಇನ್ನು ನಾಲ್ಕನೇ ಬಾರಿಗೆ ಗಾಂಧಿಯವರನ್ನು ಪ್ರಾರ್ಥನಾ ಮಂದಿರದಲ್ಲಿ ಗೋಡ್ಸೆಯ ಕೈಯಲ್ಲಿ ಕೊಲ್ಲಿಸುವ ಮೂಲಕ ಈತ ವಿಕೃತಿಯನ್ನು ಮೆರೆಯುತ್ತಾನೆ. ತಾನೊಬ್ಬ ಹಿಂದುತ್ವದ ಪರಿಪಾಲಕ ಎಂದು ಹೇಳಿಕೊಳ್ಳುತ್ತಿದ್ದ ಸಾವರ್ಕರ್ ಸೈದ್ಧಾಂತಿಕ ಭಿನ್ನತೆಯ ಕಾರಣಕ್ಕಾಗಿ ತನಗಿಂತಲೂ ವಯಸ್ಸಿನಲ್ಲಿ ಒಬ್ಬ ಹಿರಿಯನಾಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿಸುವ ಮೂಲಕ ಹಿಂದುತ್ವದ ಕೆಟ್ಟ ಪರಿಭಾಷೆಗೆ ಮುನ್ನುಡಿ ಬರೆಯುತ್ತಾರೆ

ಆದರೆ ತನ್ನ ಕೊಲೆ ಆ ದಿನ ಘಟಿಸುವ ಸೂಚನೆ ಮೊದಲೇ ಅರಿತಿದ್ದ ಗಾಂಧೀಜಿ “ನನ್ನನ್ನು ಕೊಲ್ಲುವುದರಿಂದ ಅವರಿಗೆ ಸಂತಸ ಸಿಗುವುದಾದರೆ ಕೊಲ್ಲಲಿ ಬಿಡಿ” ಎಂದು ಪೊಲೀಸರಿಗೆ ತಿಳಿಯಪಡಿಸುತ್ತಾರೆ  ಮತ್ತು ಗೋಡ್ಸೆಯ ಬಂದೂಕು ಎದುರಿಗೆ ಬಂದಾಗ ಸಾವರ್ಕರ್ ಅವರಂತೆ ಪ್ರಾಣ ಭಿಕ್ಷೆಗೆ ಅಂಗಲಾಚದೇ ಅಂತಹ ವಯಸ್ಸಿನಲ್ಲಿಯೂ ಸಹ ಧೈರ್ಯವಾಗಿ ಬಂದೂಕಿನ ಗುಂಡಿಗೆ ಎದೆಯೊಡ್ಡುತ್ತಾರೆ, ಅಮರವಾಗುತ್ತಾರೆ.

ಕೊನೆಯದಾಗಿ ಹೇಳಬಹುದಾದರೆ, ಸಾವರ್ಕರ್ ಎಂಬ ವ್ಯಕ್ತಿ ವೀರನಾಗಿರಲಿಲ್ಲ, ಹೇಡಿಯೂ ಆಗಿರಲಿಲ್ಲ, ಬದಲಿಗೆ ಆತ ಮನುಷ್ಯತ್ವವನ್ನು ವಿರೋಧಿಸುತ್ತಿದ್ದ ಮತ್ತು ಮನಸ್ಸಿನಲ್ಲಿ ಸದಾ ಜನಾಂಗೀಯ ದ್ವೇಷವನ್ನು ತುಂಬಿಕೊಂಡಂತಹ  ವ್ಯಕ್ತಿಯಾಗಿದ್ದ. ಆತ ಹೊಂದಿದ್ದ ಭಾವನೆಗಳು ಅಂದಿನ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ ಮತ್ತು ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದವು!

ಇಷ್ಟೆಲ್ಲಾ ಇರುವಾಗ ವ್ಯಕ್ತಿಯ ಸಾಮಾಜಿಕ ಹಿನ್ನಲೆಯ ಕಾರಣಕ್ಕೇ ಆತನನ್ನು ಹೀಗೆ ಅರ್ಹತೆಗಿಂತಲೂ ಹೆಚ್ಚಾಗಿ ಓರ್ವ ತ್ಯಾಗಮಯಿ ಹೋರಾಟಗಾರನನ್ನಾಗಿ ಮಾಡಲಾಗುತ್ತಿದೆ ಎಂಬ ಸಂಗತಿಯು ಎಂತಹವರಿಗೂ ಅರ್ಥವಾಗುತ್ತದೆ!

– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

Leave a Reply