ದ.ಕ.ಜಿಲ್ಲೆಯಲ್ಲಿ ಬಿಜೆಪಿ ಸೋಲು ನಿಶ್ಚಿತ: ಸಿಪಿಐಎಂ

2 years ago

ಮಂಗಳೂರು: ಕಳೆದ 33 ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡದೆ ಜಾತಿ ಧರ್ಮದ ಹೆಸರಿನಲ್ಲಿ ಜಿಲ್ಲೆಯ ಸೌಹಾರ್ದತೆಯನ್ನು ನಾಶ ಮಾಡಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ದ.ಕ.ಜಿಲ್ಲೆಯಾದ್ಯಂತ CPIM ಪಕ್ಷ ಹಮ್ಮಿಕೊಂಡಿದ್ದ ‘ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂಬ ಮಹಾಭಿಯಾನದಲ್ಲಿ ಜಿಲ್ಲೆಯ ಸಾವಿರಾರು ಜನತೆ ಬಹಿರಂಗವಾಗಿ ಬಿಜೆಪಿಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಗಾಲನ್ನು ಹಾಕಿ ಉದ್ಯೋಗ ಸೃಷ್ಟಿಸದೆ ಯುವಜನರ ಬಾಳನ್ನು ಹಾಳು ಮಾಡಿದ ಬಿಜೆಪಿ ಯಾವುದೇ ಕಾರಣಕ್ಕೂ ಈ ಬಾರಿ ಗೆಲ್ಲಬಾರದು. ನಮಗೆ ಅಭಿವೃದ್ಧಿ ಮತ್ತು ನೆಮ್ಮದಿಯ ಬದುಕು ಮುಖ್ಯ ಎಂದು ಜಿಲ್ಲೆಯ ಸಾಮಾನ್ಯ ಜನತೆ ಅಭಿಪ್ರಾಯ ಪಟ್ಟಿರುವುದು ಜನತೆಯ ಮಹಾಭಿಯಾನದಲ್ಲಿ ಪ್ರತಿಫಲನಗೊಂಡಿದೆ ಎಂದು ಸಿಪಿಐಎಂ ಹೇಳಿದೆ.

ಸ್ವಾತಂತ್ರ್ಯ ದೊರೆತ ಬಳಿಕದ ಮೊದಲ ನಾಲ್ಕು ದಶಕಗಳಲ್ಲಿ ನಿಜಕ್ಕೂ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ನಡೆದು ಸಾವಿರಾರು ಯುವಜನರಿಗೆ ಉದ್ಯೋಗ ಲಭಿಸಿ ನೆಮ್ಮದಿಯ ಬದುಕನ್ನು ಕಾಣುವಂತಾಗಿದೆ. ಆದರೆ ಬಿಜೆಪಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಕೋಮು ಧ್ರುವೀಕರಣಗೊಂಡು ಜಿಲ್ಲೆಯ ಸೌಹಾರ್ದತೆಯನ್ನೇ ನಾಶ ಪಡಿಸಲಾಗಿದೆ. ನಮಗೆ ಮತ್ತೆ ಸೌಹಾರ್ದತೆಯ ನಾಡು ಬೇಕು. ಎಲ್ಲರೂ ಒಂದಾಗಿ ನಿಂತು ಬಾಳುವ ಸಮಾಜ ನಮ್ಮದಾಗಬೇಕು. ಶಿಕ್ಷಣ ಆರೋಗ್ಯ ಉದ್ಯೋಗ ಸರ್ವ ಜನತೆಗೆ ಸಿಗುವಂತಾಗಬೇಕೆಂಬ ಜಿಲ್ಲೆಯ ಸಾಮಾನ್ಯ ಜನರ ಆಶಯ ಮಹಾಭಿಯಾನದಲ್ಲಿ ವ್ಯಕ್ತಗೊಂಡಿದೆ ಎಂದು ಸಿಪಿಎಐಎಂ ಹೇಳಿದೆ.

ದ.ಕ.ಜಿಲ್ಲೆಯಾದ್ಯಂತ ಸುಮಾರು 192 ತಂಡಗಳಲ್ಲಿ 1,174 ಕಮ್ಯುನಿಸ್ಟ್ ಕಾರ್ಯಕರ್ತರು ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕರಪತ್ರ ಹಂಚಿಕೆ ಹಾಗೂ ಬಿಜೆಪಿ ಮಾಡಿದಂತಹ ಮಹಾಮೋಸಗಳನ್ನು ಸವಿವರವಾಗಿ ವಿವರಿಸುವಾಗ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ, ಮೋದಿ ಸರಕಾರದ ಬಣ್ಣಬಣ್ಣದ ಮಾತುಗಳಿಗೆ ನಾವು ನಿಜಕ್ಕೂ ಬಲಿಯಾಗಿದ್ದೇವೆ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಜನತೆಯ ಮಹಾಭಿಯಾನದಲ್ಲಿ CPIM ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಡಾ.ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟು, ಪದ್ಮಾವತಿ ಶೆಟ್ಟಿ, ಸದಾಶಿವದಾಸ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು, ಜಯಂತ ನಾಯಕ್, ಕೃಷ್ಣಪ್ಪ ಸಾಲ್ಯಾನ್ ಮುಂತಾದ ಜಿಲ್ಲಾ ತಾಲೂಕು ಹಾಗೂ ಸ್ಥಳೀಯ ಮಟ್ಟದ ನಾಯಕರು ತಂಡಗಳಿಗೆ ನೇತೃತ್ವವನ್ನು ಕೊಟ್ಟು ಮುನ್ನಡೆಸಿದ್ದಾರೆ.

Leave a Reply