ಭ್ರಷ್ಟಾಚಾರವೇ ಬಿಜೆಪಿಯ ನಗರಾಡಳಿತದ ಸಾಧನೆ: ಸುನೀಲ್ ಕುಮಾರ್ ಬಜಾಲ್

2 years ago

ಮಂಗಳೂರು: ಮಹಾನಗರ ಪಾಲಿಕೆಯ ಬಿಜೆಪಿಯ ಆಡಳಿತ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಮೂಲಕ ಜನಸಾಮಾನ್ಯರ ದುಡಿಮೆಯ ಹಣವನ್ನು ಹಗಲು ದರೋಡೆ ನಡೆಸಿದೆ ಮತ್ತು ಬೇಕಾಬಿಟ್ಟಿ ಅಭಿವೃದ್ಧಿ ಕಾಮಗಾರಿಯ ಹೆಸರಲ್ಲಿ ಭ್ರಷ್ಟಾಚಾರ ನಡೆಸಲು ದುರ್ಬಳಕೆ ಮಾಡುತ್ತಿದೆ. ಈ ಮೂಲಕ ಬಿಜೆಪಿ ನಗರಾಡಳಿತವನ್ನು ಭ್ರಷ್ಟಾಚಾರದಿಂದಲೇ ಸಾಧಿಸಲು ಹೊರಟಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಬಿಜೆಪಿ ನಗರಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವಿಪರೀತ ಹೆಚ್ಚಳ ಮಾಡಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಇಳಿಸಲು ಮತ್ತು ಕಸವಿಲೇವಾರಿ ಸಹಿತ ಸೆಸ್ ಅನ್ನು ರದ್ದುಗೊಳಿಸಲು ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರು ನಗರದ ಶಾಸಕ ವೇದವ್ಯಾಸ ಕಾಮತ್, ಸಂಸದರಾದ ಬ್ರಿಜೇಶ್ ಚೌಟ ಮತ್ತು ಪಾಲಿಕೆ ಆಡಳಿತದಲ್ಲಿರುವ ಬಿಜೆಪಿ ನಗರವನ್ನು ಸಂಪೂರ್ಣ ಕಡೆಗಣಿಸಿದ್ದು ಒಂದೇ ಒಂದು ಸರಿಯಾದ ಅಭಿವೃದ್ಧಿ ಕಾಮಗಾರಿ ಇವರಿಂದ ಸಾಧ್ಯವಾಗಿಲ್ಲ. ಕಳೆದ ಮೂರು ವರುಷಗಳಿಂದ ನಿಧಾನಗತಿಯ ಕಳಪೆ ಕಾಮಗಾರಿಗಳಾದ ಪಂಪ್ ವೆಲ್ ನಿಂದ ಪಡೀಲ್ ವರೆಗಿನ ಮುಖ್ಯರಸ್ತೆ , ಮಹಾಕಾಳಿಪಡ್ಪು ಬಳಿ ರೈಲ್ವೇ ಕೆಳ ಸೇತುವೆ , ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನೆಲ್ಲಾ ತೆಗೆದು ನೋಡಿದರೆ ಯಾವ ರೀತಿಯ ಅಭಿವೃದ್ಧಿಯನ್ನು ನಡೆಸಿದ್ದಾರೆಂಬುದನ್ನು ಕಾಣಬಹುದು. ಕರ್ನಾಟಕ ರಾಜ್ಯ ಸರಕಾರ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸುವ ಬಿಜೆಪಿ ತನ್ನದೇ ಆಡಳಿತದಲ್ಲಿ ಏರಿಸಿದ ಬೆಲೆಗಳನ್ನು ಇಳಿಸುವ ಕುರಿತು ಯಾಕೆ ಕ್ರಮ ವಹಿಸಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಬಿಕೆ ಇಮ್ತಿಯಾಜ್ ಮಾತನಾಡಿ , ಪಾಲಿಕೆ ಏರಿಸಿದ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಇಳಿಸಲು ನಡೆಸುವ ಈ ಹೋರಾಟ ಕೇವಲ ಸಿಪಿಐಎಂ ಪಕ್ಷದ ಸದಸ್ಯರಿಗೆ ಸೀಮಿತ ಅಲ್ಲ ಇದು ನಗರದ ಸಮಸ್ತ ಜನರಿಗೆ ಅನ್ವಯಿಸುವ ಹೋರಾಟ. ಇಂತಹ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಬಿಜೆಪಿ ದುರಾಡಳಿತವನ್ನು ಸಿಪಿಐಎಂ ಪಕ್ಷ ಕಂಡು ಸುಮ್ಮನಿರೋದಿಲ್ಲ ಅದರ ವಿರುದ್ದ ಜನಾಂದೋಲವನ್ನು ರೂಪಿಸುತ್ತದೆ ಎಂದರು.

ಪ್ರತಿಭಟನೆಯ ನೇತೃತ್ವ ವಹಿಸಿದ ಸಿಪಿಐಎಂ ಪಕ್ಷದ ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಪಾಲಿಕೆ ಆಡಳಿತ ಅವೈಜ್ಞಾನಿಕವಾದ ತೆರಿಗೆ ನೀತಿ ಜಾರಿಗೊಳಿಸಿದೆ ಕಳೆದ ಒಂದು ವರುಷದ ಅವಧಿಯಲ್ಲಿ ಶೇ 20 ರಷ್ಟು ಹೆಚ್ಚಳಮಾಡಿದ್ದಲ್ಲದೆ ಘನ ತ್ಯಾಜ್ಯ ವಿಲೇವಾರಿ ದರವನ್ನು 360 ರಿಂದ 720 ಗೊಳಿಸಿರುವುದು ಹಗಲು ದರೋಡೆಯಲ್ಲದೆ ಮತ್ತಿನ್ನೇನಲ್ಲ. ವಿಪರೀತ ಏರಿಸಿದ ತೆರಿಗೆ ಕೂಡಲೇ ಇಳಿಸಬೇಕು ಮತ್ತು ಸೆಸ್ ಗಳನ್ನು ರದ್ದುಗೊಳಿಸಬೇಕು ಅಲ್ಲಿಯವರೆಗೆ ಸಿಪಿಐಎಂ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಕಾರ್ಪೋರೇಟರ್ ಜಯಂತಿ ಶೆಟ್ಟಿಯವರು ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು CPIM ಮಂಗಳೂರು ನಗರದ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ದೀಪಕ್ ಬಜಾಲ್, ಲೋಕೇಶ್ ಎಂ., ಪ್ರದೀಪ್, ಶಶಿಧರ್ ಶಕ್ತಿನಗರ, ಭಾರತಿ ಬೋಳಾರ, ನಾಗೇಶ್ ಕೋಟ್ಯಾನ್, ಉದಯಚಂದ್ರ ರೈ,ಅಶೋಕ್ ಶ್ರೀಯಾನ್, ಜಗದೀಶ್ ಬಜಾಲ್, ಪ್ರಮೀಳಾ ದೇವಾಡಿಗ, ಮನೋಜ್ ಉರ್ವಾಸ್ಟೋರ್, ನಾಸಿರ್ ಬೆಂಗರೆ, ಯಾಹ್ಯಾ ಬೆಂಗರೆ, ಅಸುಂತ ಡಿಸೋಜ ವಹಿಸಿದ್ದರು.

ಹೋರಾಟದಲ್ಲಿ ಕಾರ್ಮಿಕ ಮುಖಂಡರಾದ ಮುಸ್ತಾಫ, ಅಬ್ದುಲ್ ರೆಹಮಾನ್, ದಲಿತ ಹಕ್ಕುಗಳ ಸಮಿತಿ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಕರಿಯ ಕೆ, ಕ್ರಷ್ಣ ಇನ್ನಾ, ಶೇಖರ್ ವಾಮಂಜೂರು, ಯುವಜನ ಮುಖಂಡರಾದ ಸಾದಿಕ್ ಮುಲ್ಕಿ, ನೌಷಾದ್ ಪಂಜಿಮೊಗರು, ಸಾಮಾಜಿಕ ಚಿಂತಕರಾದ ಪ್ಲೇವಿ ಕ್ರಾಸ್ತಾ ಮುಂತಾದವರು ಹಾಜರಿದ್ದರು.

Leave a Reply