ಅಂತರ್ಜಲ ಮರುಪೂರಣಕ್ಕೆ ಹೊಸ ನೀತಿ ಜಾರಿಗೆ ಚಿಂತನೆ: ಎನ್ ಎಸ್ ಬೋಸರಾಜು

2 years ago

ಬೆಂಗಳೂರು: ದಿನೇದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ವೃದ್ದಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಂತರ್ಜಲ ಮರುಪೂರಣಕ್ಕೆ ಇಂಬು ನೀಡಲು ಹೊಸ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಾರೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನುಉದ್ಘಾಟಿಸಿ ಮಾತನಾಡಿದ ಅವರು, ದಶಕಗಳಿಂದ ನಾವು ನಮ್ಮ ಕೈಗಾರಿಕೆಗಳೂ, ಕೃಷಿ ಮತ್ತು ದೈನಂದಿನ ಬಳಕೆಗೆ ಹೆಚ್ಚಾಗಿ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದೇವೆ. ಆದರೆ, ನಗರೀಕರಣ ಹಾಗೂ ಅರಣ್ಯನಾಶದಿಂದ ಅಂತರ್ಜಲದ ಲಭ್ಯತೆ ದಿನೇ ದಿನೇ ಕುಸಿಯುತ್ತಿದೆ. ಅಂತರ್ಜಲದ ಮೇಲಿನ ಶೋಷಣೆ ಹೆಚ್ಚಾಗುತ್ತಿದ್ದು ಅದನ್ನ ಮರುಪೂರಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಕಡಿಮೆಯಾಗುತ್ತಿವೆ ಎಂದರು.

ಹೆಚ್ಚುತ್ತಿರುವ ನಗರೀಕರಣದಿಂದ ನೈಸರ್ಗಿಕವಾಗಿ ಆಗುತ್ತಿದ್ದ ಮರುಪೂರಣವೂ ಕಡಿಮೆಯಾಗುತ್ತಾ ಸಾಗಿದೆ. ಈ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಇಂದು ಕಾರ್ಯತತ್ಪರರಾಗಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

ಈ ಬಾರಿಯ ಬರ ನಮ್ಮೆಲ್ಲರಲ್ಲಿ ನೀರಿನ ಮಹತ್ವದ ಅರಿವನ್ನು ಸಾಕಷ್ಟು ಮೂಡಿಸಿದೆ. ಅಂತರ್ಜಲದ ಮೇಲಿನ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಂತರ್ಜಲದ ಸದ್ಬಳಕೆ, ಮಳೆ ನೀರು ಕೊಯ್ಲು ಪದ್ದತಿಯ ಅಳವಡಿಕೆ ಮತ್ತು ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಬೇಕಾಗಿದೆ. ಎಲ್ಲರೂ ಒಗ್ಗೂಡುವ ಮೂಲಕ ಸುಸ್ಥಿರ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಾಗಿದೆ ಎಂದರು.

ಈ ಹಿನ್ನಲೆಯಲ್ಲಿ ನಮ್ಮ ಅಂತರ್ಜಲ ನಿರ್ದೇಶನಾಲಯದ ಅಡಿಯಲ್ಲಿ ಅಂತರ್ಜಲ ಮರುಪೂರಣಕ್ಕೆ ಇಂಬು ನೀಡುವಂತಹ ಹೊಸ ನೀತಿಯನ್ನು ಹೊರತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ರಾಜ್ಯದ ರೈತರ ಹಾಗೂ ಜನರ ಹಿತಾಸಕ್ತಿ ಗೆ ಬದ್ಧವಾಗಿರುವ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದಕ್ಕೆ ಬದ್ಧವಾಗಿದೆ. ಮುಖ್ಯಮಂತ್ರಿಗಳೂ ಈ ಬಗ್ಗೆ ಒಲವು ತೋರಿಸಿದ್ದಾರೆ ಎಂದರು.

Leave a Reply