ರೌಡಿಶೀಟರ್ ಸುಹಾಸ್ ಶೆಟ್ಟಿ ಹಂತಕರ ಬಗ್ಗೆ ಖಚಿತ ಮಾಹಿತಿ ದೊರಕಿದೆ: ಜಿ.ಪರಮೇಶ್ವರ್

12 months ago

ಬೆಂಗಳೂರು: ಮಂಗಳೂರಿನಲ್ಲಿ ನಡೆದಿರುವ ಹಿಂದುತ್ವ ಪರ ಮುಖಂಡ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹಂತಕರ ಬಗ್ಗೆ ಖಚಿತ ಮಾಹಿತಿ ದೊರಕಿದ್ದು ಯಾವುದೇ ಕ್ಷಣದಲ್ಲಿ ಅವರ ಬಂಧನ ಸಾಧ್ಯತೆ ಇದೆ ಎಂದು ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಕಾನೂನು ವ್ಯವಸ್ಥೆಗೆ ಭಂಗಬಾರದಂತೆ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಮೇಲ್ನೋಟಕ್ಕೆ ಇದೊಂದು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಘಟನೆ ಎಂಬಂತೆ ಕಂಡುಬರುತ್ತದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆದಷ್ಟು ಶೀಘ್ರ ಹಂತಕರನ್ನು ಬಂಧಿಸಲಾಗುವುದು ಎಂದರು.

ಕರಾವಳಿ ಮಾತ್ರವಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಶಾಂತಿ ಕದಡಲು ಯಾರೇ ಯತ್ನಿಸಿದರೂ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ರಾಜ ಇಲ್ಲ ಎಂದರು.

ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಆದರೂ ತನಿಖೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗಾಗಿ ಹಿರಿಯ ಪೊಲೀಸ್‌ ಅಧಿಕಾರಿಯನ್ನು ಕಳುಹಿಸಿದ್ದೇವೆ ಎಂದರು.

ಸಿಎಂ ಸಿದ್ದರಾಮಯ್ಯ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಯಾರೇ ಆದ್ರೂ ಮನಷ್ಯರ ಪ್ರಾಣ ಮುಖ್ಯ ಎಂದರು.

ಮೃತ ವ್ಯಕ್ತಿ ರೌಡಿಶೀಟರ್ ಅಂತ ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಶೀಘ್ರ ಆರೋಪಿಗಳ ಪತ್ತೆಗೆ ಕ್ರಮವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಎಂದರು.

ಪಹಲ್ಗಾಮ್‌ ದಾಳಿ ವೇಳೆ 26 ಜನ ಮೃತಪಟ್ಟರು‌. ಪಹಲ್ಗಾಮ್‌‌ಗೆ ಪ್ರಧಾನಮಂತ್ರಿ ಹೋಗಿದ್ದಾರ?. ಆ ಘಟನೆಗೆ ಭದ್ರತಾ ವೈಫಲ್ಯ ಕಾರಣ ಅಲ್ಲವಾ? ನೂರಾರು ಪ್ರವಾಸಿಗರು ಹೋಗುವ ಜಾಗದಲ್ಲಿ ಪೊಲೀಸರು ಇಲ್ಲ, ಸೆಕ್ಯೂರಿಟಿ ಕೂಡ ಇಲ್ಲ ಏಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು,ಸುಹಾಸ್‌‍ ಶೆಟ್ಟಿ ಹತ್ಯೆಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಕರ್ನಾಟಕ ರಾಜ್ಯ ಶಾಂತಿಯಿಂದಿದೆ. ಶಾಂತಿಯಿಂದ ಇರುವುದಕ್ಕೆ ಬಿಜೆಪಿಯವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹತ್ಯೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ನಾವು ತಲೆಹಾಕಲು ಹೋಗುವುದಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಮಂಗಳೂರಿನ ಪೊಲೀಸರು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಈ ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

Leave a Reply