ಬಿಜೆಪಿಯಿಂದ ಗಮನ ಬೇರೆಡೆ ಸೆಳೆಯಲು ಮತಾಂತರ ಅಸ್ತ್ರ ಪ್ರಯೋಗ: ಎಚ್.ಸಿ.ಮಹದೇವಪ್ಪ

4 years ago

ಬಿಜೆಪಿಯಿಂದ ಗಮನ ಬೇರೆಡೆ ಸೆಳೆಯಲು ಮತಾಂತರ ಅಸ್ತ್ರ ಪ್ರಯೋಗ: ಎಚ್.ಸಿ.ಮಹದೇವಪ್ಪ

ಬೆಂಗಳೂರು: ಅಭಿವೃದ್ಧಿಯ ವಿಷಯದಲ್ಲಿ ಸೊನ್ನೆ ಸುತ್ತಿದ ಬಳಿಕ ಇದೀಗ ಬಿಜೆಪಿಗರು ಜನರ ಗಮನವನ್ನು ಬೇರೆಡೆ ತಿರುಗಿಸಲು ಹಿಂದೂ ಧರ್ಮ, ಮತಾಂತರ ಎಂಬ ಚರ್ಚೆಯನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಸರಣಿ ಟ್ವೀಟ್ ಮೂಲಕ ಆಡಳಿತಾರೂಢ ಬಿಜೆಪಿ ಮತಾಂತರ ಮಸೂದೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಸರಿಯಾಗಿ ಆಡಳಿತ ಮಾಡಲು ಬರದೇ ಹೋದರೂ ಕೂಡಾ ಹಿಂದುತ್ವದ ಕೆಸರಿನಲ್ಲಿ ಉರುಳಾಡುತ್ತಿರುವ ಇವರ ಕೈಯಲ್ಲಿರುವ ಅಧಿಕಾರವು ಜನರ ಬದುಕನ್ನು ಅಪಾಯಕ್ಕೆ ನೂಕಿದೆ! ಎಂದಿದ್ದಾರೆ.

ಈ ದಿನ ಒಂದೊಂದು ತರಕಾರಿ ಬೆಲೆ 100 ರೂಪಾಯಿಯ ಗಡಿ ದಾಟಿದ್ದು, ಹೆಚ್ಚಿದ ಪೆಟ್ರೋಲ್ ಡೀಸೆಲ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆಯಿಂದಾಗಿ ಜನ ಸಾಮಾನ್ಯರು ಬದುಕುವುದು ಹೇಗೆ ಎಂಬ ಆತಂಕವನ್ನು ಸತತವಾಗಿ ಎದುರಿಸುತ್ತಿದ್ದಾರೆ. ಇಲ್ಲಿ ಹಿಂದೂಗಳು ಮಾತ್ರವಲ್ಲದೆ ಎಲ್ಲ ಧರ್ಮೀಯರೂ ಸಹ ತೊಂದರೆಯಲ್ಲಿರುವುದು ಗೊತ್ತಿಲ್ಲದ ಸಂಗತಿ ಏನಲ್ಲ ಎಂದು ಅವರು ವಾಸ್ತವ ಸಂಗತಿಯನ್ನು ಜನರೆದುರು ಇಡುವ ಯತ್ನ ಮಾಡಿದ್ದಾರೆ.

ಹೀಗಿರುವಾಗ ಬೆಲೆ ಏರಿಕೆ ಕಡಿಮೆ ಮಾಡಿ, ಉತ್ತಮ ಆಡಳಿತ ನಡೆಸಬೇಕಾದ ಅನಿವಾರ್ಯತೆ ಇದ್ದಾಗಲೂ ಕೂಡಾ ಮತಾಂತರ, ಧರ್ಮ ಎಂದುಕೊಂಡು ಬೊಗಳೆ ಬಿಡುತ್ತಿರುವ @BJP4Karnataka ಪಕ್ಷದವರು ಸಾರ್ವಜನಿಕ ಸೇವೆಯಲ್ಲಿ ಇರಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟಕ್ಕೂ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ, ಅದು ಸಂವಿಧಾನ ಬಾಹಿರವಾದ ಸಂಗತಿ ಎಂಬ ವಿಷಯ ಗೊತ್ತಿದ್ದರೂ ಹೀಗೆ ಅಜ್ಞಾನಿಗಳಂತೆ ವರ್ತಿಸುವ ಬಿಜೆಪಿಗರಿಗೆ ಬಾಬಾ ಸಾಹೇಬರ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.

ಅಷ್ಟಕ್ಕೂ ತಮ್ಮ ಅಮಾನವೀಯ ಆಚರಣೆಗಳ ಮೂಲಕ ಬಾಬಾ ಸಾಹೇಬರಂತಹ ಮಹಾನ್ ಮಾನವತಾ ವಾದಿಯನ್ನೇ ಹಿಂದೂ ಧರ್ಮದ ಒಳಗೆ ಉಳಿಸಿಕೊಳ್ಳಲು ಆಗದಂತಹ ಇವರು ಹಿಂದೂ ಧರ್ಮ ಉಳಿಸುತ್ತಾರೆ ಎಂಬುದು ಶತಮಾನದ ಜೋಕ್! ಈ ಅಧರ್ಮೀಯರಿಗೆ ಅವರ ಧರ್ಮ ಸುಧಾರಣೆಗಿಂತಲೂ ಶ್ರೇಷ್ಠತೆಯ ಅಹಂಕಾರವೇ ದೊಡ್ಡದು, ಅಮಾನವೀಯತೆ, ಅಸಮಾನತೆ, ಅಸ್ಪೃಶ್ಯತೆಯ ಆಚರಣೆಯೇ ಮನೆ ದೇವರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply