ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಯವರನ್ನು ಶೂಟ್ ಮಾಡುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ನಿನ್ನೆ ಮಧ್ಯರಾತ್ರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ ರಾಠೋಡ್ ಹೇಳಿಕೆ ಹಿನ್ನಲೆಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ಮಣಿಕಂಠ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿ ಮಧ್ಯರಾತ್ರಿ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.
ಇತ್ತ ಮಣಿಕಂಠ ಬಂಧನಕ್ಕಾಗಿ ಕಾಂಗ್ರೆಸ್ ಕೂಡ ಆಗ್ರಹಿಸಿತ್ತು. ಕಲಬುರಗಿ ಎಸ್ ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಇಂದು ಕಲಬುರಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.
ಮಣಿಕಂಠ ಹೇಳಿದ್ದೇನು?
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಣಿಕಂಠ, ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ಲೀಡರ್ ಗಳು ತಿರುಗಾಡಲು ಬಿಡುವುದಿಲ್ಲ ಎಂಬ ಪ್ರಿಯಾಂಕ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದರು. ಭಾರತ ದೇಶ ಉಳಿಸಲು ಮಿಲಿಟರಿ ಸೈನಿಕರು ಗಡಿಗಳಲ್ಲಿ ಹೇಗೆ ನಿಂತಿದ್ದಾರೋ ಅದೇ ರೀತಿ ನಾವು ಸಹ ಸಮಾಜ ಮತ್ತು ಬಡವರ ಸಲುವಾಗಿ ಮಿಲಿಟಿರಿಯಂತೆಯೇ ನಿಂತಿದ್ದೇವೆ.
ನಿಮಗೆ ಎಕೆ-47 ನಿಂದ ಶೂಟ್ ಮಾಡುವುದು ಇದೆಯಾ? ಅಥವಾ ತೋಪ್ನಿಂದ ಶೂಟ್ ಮಾಡೋದಿದೆಯಾ? ನೀವು ಶೂಟ್ ಮಾಡಿ ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್ ಮಾಡೋಕೂ ರೆಡಿ ಇದ್ದೀವಿ ಎಂದಿದ್ದರು. ಮಣಿಕಂಠ ಅವರ ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು.




