ಮಾಹಿತಿ ನೀಡಿ, ವಿದ್ಯುತ್‌ನಿಂದಾಗುವ ಪ್ರಾಣಹಾನಿ ತಪ್ಪಿಸಿ: ಜೆ.ಎನ್.ಗಣೇಶ್

2 years ago

ಬಳ್ಳಾರಿ: ವಿದ್ಯುತ್ ಸಮಸ್ಯೆಯಾದಾಗ ರೈತರು ತಾಳ್ಮೆ ವಹಿಸಿದರೆ ವಿದ್ಯುತ್‌ನಿಂದ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದು ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್  ಹೇಳಿದರು.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕುರುಗೋಡು ಉಪವಿಭಾಗ ವತಿಯಿಂದ ಕುರುಗೋಡು ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹಾಗೂ ಸಾರ್ವಜನಿಕರು ಯಾವುದೇ ರೀತಿ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಕಂಡುಬಂದಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ಅವಸರದ ಅವಘಡದಿಂದ ಪ್ರಾಣಹಾನಿಯಾಗುವ ಸಂಭವವಿರುತ್ತದೆ ಎಂದರು.

ವಿದ್ಯುತ್ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕಾಗಿ ಜೆಸ್ಕಾಂ ವತಿಯಿಂದ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸೇರಿದಂತೆ ವಾಟ್ಸಪ್ ಮತ್ತಿತರೆ ತುರ್ತು ಸಂಪರ್ಕ ಸಂಖ್ಯೆಗಳಿಗೆ ಕರೆಮಾಡಬೇಕು. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ 24*7 ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಮತ್ತು ಸಹಾಯವಾಣಿ ಸಂಖ್ಯೆ 9769368959 ಕ್ಕೆ ಎಸ್‌ಎಮ್‌ಎಸ್ ಮಾಡಬಹುದು ಅಥವಾ ವಾಟ್ಸ್ಆಪ್ ಸಹಾಯವಾಣಿ ಸಂಖ್ಯೆ 9480847593 ಕ್ಕೆ ಫೋಟೋ ಮತ್ತು ವಿಡೀಯೊ ಮೂಲಕ ದೂರು ನೀಡಿದರೆ ಜೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರೆ ಎಂದರು.

ಯಾವುದೇ ಸಮಸ್ಯೆ ಕಂಡುಬಂದರೂ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೆ ಅವರು ಸಮಸ್ಯೆ ಬಗೆಹರಿಸುತ್ತಾರೆ. ಇದರಿಂದ ನೀವು ಸುರಕ್ಷಿತವಾಗಿರುವುದರ ಜತೆಗೆ ನಿಮ್ಮ ಸುತ್ತ ಇರುವವರನ್ನೂ ಸುರಕ್ಷಿತವಾಗಿರಿಸಬೇಕು ಎಂದರು.

ವಿದ್ಯುತ್ ಸರಕ್ಷತಾ ಕ್ರಮಗಳ ಕುರಿತು ಜೆಸ್ಕಾಂ ಸಿಬ್ಬಂದಿ ನಾಟಕ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ಜತೆಗೆ ವಿದ್ಯುತ್ ಸುರಕ್ಷತಾ ಮುಂಜಾಗೃತ ಕ್ರಮಗಳ ಸೂಚನಾ ಫಲಕಗಳ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕುರುಗೋಡು ಜೆಸ್ಕಾಂ ವಿಭಾಗದ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

Leave a Reply