ಹೊರಗುತ್ತಿಗೆ ನೌಕರರಿಗೆ ಸರ್ಕಾರವೇ ನೇರವಾಗಿ ಸಂಬಳವನ್ನು ನೀಡುವ ವ್ಯವಸ್ಥೆ ಮಾಡಿ

1 year ago

ರಾಜ್ಯದಲ್ಲಿ ಹತ್ತಾರು ಸಾವಿರ ನೌಕರರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸವನ್ನ ಮಾಡುತ್ತಿದ್ದಾರೆ .ಇವರುಗಳಿಗೆ ಸರ್ಕಾರ ಕೊಡುವ ಸಂಬಳದ ಬಹಳಷ್ಟು ಪಾಲು ಏಜೆನ್ಸಿಗಳು ಎಂದರೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಸರ್ಕಾರ ಇವರಿಗೆ 24 ರಿಂದ 30 ಸಾವಿರ ರೂಪಾಯಿ ತನಕ ಸಂಬಳವನ್ನು ನಿಗದಿಪಡಿಸಿದ್ದಾರೆ. ಆದರೆ ಏಜೆನ್ಸಿಗಳು ಇವರಿಗೆ 16000 ದಿಂದ 22000 ಈ ರೀತಿಯಲ್ಲಿ ಸಂಬಳವನ್ನು ಕೊಡುತ್ತಿದ್ದಾರೆ. ಉಳಿದ ಮೊತ್ತವನ್ನು ಅವರು ತಮ್ಮ ನಿರ್ವಹಣೆಯ ವೆಚ್ಚವೆಂದು ತೆಗೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರವೇ ಹೊರಗುತ್ತಿಗೆ ನೌಕರರಿಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನ ಪಾವತಿಸಿದರೆ ಸರ್ಕಾರ ಕೊಡುವ ಸಂಪೂರ್ಣ ಸಂಬಳದ ಮೊತ್ತ ಅವರ ಕೈ ಸೇರುತ್ತದೆ .ಇಲ್ಲದಿದ್ದರೆ ಅವರಿಗೆ ಸರಿಯಾದ ರೀತಿಯಲ್ಲಿ ಸಂಬಳ ದೊರೆಯುವುದಿಲ್ಲ.

ಹೊರಗುತ್ತಿಗೆ ನೌಕರರು ಸಹ ರಾಜ್ಯ ಸರ್ಕಾರಿ ಶಾಶ್ವತ ನೌಕರ ರೀತಿಯಲ್ಲಿಯೇ ಅಷ್ಟೇ ಪ್ರಮಾಣದಲ್ಲಿ ಒಂದು ಮಾತು ಹೇಳಬೇಕೆಂದರೆ ಅವರಿಗಿಂತ ಹೆಚ್ಚಿನ ಕೆಲಸವನ್ನ ಇವರೇ ಮಾಡುತ್ತಾರೆ. ಆದರೆ ಇವರಿಗೆ ಸಂಬಳ ಮಾತ್ರ ಕಡಿಮೆ. ಇತ್ತೀಚಿನ ದಿನಗಳಲ್ಲಿ ದುಬಾರಿಯಾದಂತಹ ಬೆಲೆಗಳು ಮತ್ತು ಎಲ್ಲ ಪದಾರ್ಥಗಳ ಬೆಲೆಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೊಡುವ ಸಂಬಳದ ಪಾಲಿನಲ್ಲೂ ಇವರಿಗೆ ಅನ್ಯಾಯವಾದರೆ, ಇದನ್ನು ಒಪ್ಪುವುದಾದರೂ ಹೇಗೆ ಆದುದರಿಂದ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಕೂಡಲೇ ಈ ವಿಚಾರದಲ್ಲಿ ಸೂಕ್ತವಾದಂತಹ ನಿರ್ಧಾರವನ್ನು ಕೈಗೊಂಡು ಮುಂದಿನ ದಿನಗಳಲ್ಲಾದರೂ ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಸಂಬಳವನ್ನು ನೇರವಾಗಿ ಇವರ ಖಾತೆಗಳಿಗೆ ಹಾಕುವಂತಹ ಕೆಲಸವನ್ನ ಮಾಡಬೇಕು.

ನೌಕರರನ್ನ ಸರ್ಕಾರದ ಇಲಾಖೆಗಳಿಗೆ ನಿಯೋಜಿಸುವಂತಹ ಕಂಪನಿಗಳಿಗೆ ಮತ್ತು ಏಜೆನ್ಸಿಗಳಿಗೆ ಸರ್ಕಾರದ ನೌಕರರ ಸಂಬಳದ ಪಾಲು ಹೋಗುವುದನ್ನ ತಪ್ಪಿಸಬೇಕಾಗಿದೆ. ಇದು ಒಂದು ರೀತಿಯಲ್ಲಿ ಮಧ್ಯವರ್ತಿಗಳ ಶೋಷಣೆಯಲ್ಲಿ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ ಎಂದು ಹೇಳಿದರು ಸಹ ತಪ್ಪಾಗುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply