ಮಹನೀಯರ ಜಯಂತಿಗಳು ಒಂದೇ ಸಮುದಾಯಗಳಿಗೆ ಮಾತ್ರ ಸಿಮೀತವಲ್ಲ: ಸಾಜಿದ್ ಮುಲ್ಲಾ

1 year ago

ಕಾರವಾರ: ಪ್ರಸಕ್ತ ಸಾಲಿನ ಶಿವಯೋಗಿ ಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಅಗತ್ಯ ಸಿದ್ದತೆ ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ.14 ರಂದು ಶಿವಯೋಗಿ ಸಿದ್ದರಾಮ ಜಯಂತಿ, ಜ.19 ರಂದು ಮಹಾಯೋಗಿ ವೇಮನ ಜಯಂತಿ, ಜ.21 ರಂದು ಜಯಂತಿ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಈ ಎಲ್ಲಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯಾ ದಿನದಂದು ಬೆಳಗ್ಗೆ 10.30 ಕ್ಕೆ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಜಯಂತಿಗಳನ್ನು ಅಗತ್ಯ ಸಿದ್ದತೆ ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.

ಮಹನೀಯರ ಜಯಂತಿಗಳು ಒಂದೇ ಸಮುದಾಯಗಳಿಗೆ ಮಾತ್ರ ಸಿಮೀತವಲ್ಲ. ಅವರು ನಡೆದು ಬಂದ ಹಾದಿ ಮತ್ತು ಸಾಧನೆಗಳನ್ನು ಎಲ್ಲ ಸಮುದಾಯದವರ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಈ ಮಹನೀಯರ ಜೀವನ ಸಾಧನೆ ಕುರಿತು ಸಾಹಿತಿಗಳಿಂದ ಅಥವಾ ಶಿಕ್ಷಕರಿಂದ ಉಪನ್ಯಾಸ ಕೊಡಿಸಬೇಕು ಎಂದರು.

ಶಿವಯೋಗಿ ಸಿದ್ದರಾಮ ಜಯಂತಿ ಹಾಗೂ ಮಹಾಯೋಗಿ ವೇಮನ ಜಯಂತಿ ರಜೆ ದಿನದಲ್ಲಿ ಬಂದಿರುವುದರಿಂದ ಎಲ್ಲಾ ಅಧಿಕಾರಿಗಳಿಗೆ ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಅಂಬಿಗರ ಚೌಡಯ್ಯ ಜಯಂತಿಯಲ್ಲಿ ವಚನ ಸಾಹಿತ್ಯದಲ್ಲಿ ಸಾಧನೆ ಮಾಡಿದ ಮೀನುಗಾರ ಸಮುದಾಯದವರಿಗೆ ಸನ್ಮಾನ ಮಾಡಲು ತಿಳಿಸಿದರು. ವಚನ ಸಾಹಿತಿಗಳಿಂದ ಹಾಡುಗಳ ಕಾರ್ಯಕ್ರಮವನ್ನು ಏರ್ಪಡಿಸಲು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ ಮಾತನಾಡಿ ಕಾರ್ಯಕ್ರಮದ ರೂಪ ರೇಷಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್.ವಿ ಗಿರೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿನ್ಮಯ್ಯ ಮಲ್ಲಪುರ ಮಠ್, ಅಂಬಿಗರ ಚೌಡಯ್ಯ ಅಧ್ಯಯನ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ನಾಗೇಶ್ ಸುಬ್ಬಯ್ಯ ಗಂಗೆ ಮನೆ, ಎಲ್ಲಾ ಸಮುದಾಯದ ಮುಖಂಡರು, ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

Leave a Reply