ಕಚ್ಚುವ ಚಾಳಿ ಹೊಂದಿರುವ ಪ್ರಾಣಿಗಳನ್ನು ಕೂಡಿಹಾಕಬೇಕು: ಮುನೀರ್ ಕಾಟಿಪಳ್ಳ

1 year ago

ಮಾನ್ಯ ಯು ಟಿ ಖಾದರ್ ಅವರೆ, “ಪ್ರಾಣಿ (ನಾಯಿ) ಕಚ್ಚಿದರೆ ನಾವು ವಾಪಾಸ್ ಕಚ್ಚಲು ಆಗುವುದಿಲ್ಲ” ಒಪ್ಪುತ್ತೇವೆ. ಆದರೆ, ಸಿಕ್ಕಸಿಕ್ಕವರನ್ನು ಕಚ್ಚುವ, ಅಟ್ಟಿಸಿಕೊಂಡು ಹೋಗುವ ಪ್ರಾಣಿಗಳನ್ನು ಅದರ ಪಾಡಿಗೆ ಬಿಡಲು ಆಗುವುದಿಲ್ಲ. ಕಚ್ಚುವ ಚಾಳಿ ಹೊಂದಿರುವ ಪ್ರಾಣಿಗಳನ್ನು ಕೂಡಿಹಾಕಬೇಕು, ಪಳಗಿಸಬೇಕು, ಬುದ್ದಿ ಕಲಿಸಬೇಕು. ಸರಿ ದಾರಿಗೆ ಬರಲಿಲ್ಲ ಅಂದರೆ, ನಾಗರಿಕ ಸಮಾಜದಿಂದ ಪ್ರತ್ಯೇಕಗೊಳಿಸಬೇಕು‌.ಇದು ವ್ಯವಸ್ಥೆ(ಸರಕಾರ)ಯ ಜವಾಬ್ದಾರಿ. ಇಷ್ಟು ವಿಷಯ ಸಭಾಪತಿಗಳೂ ಆಗಿರುವ ತಮಗೆ ತಿಳಿದಿದೆ ಎಂದು ಭಾವಿಸುವೆ.

ದಿಗಂತ್ ನಾಪತ್ತೆ ಪ್ರಕರಣದಲ್ಲಿ ಫರಂಗಿಪೇಟೆ ಬಂದ್ ಮಾಡಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಬಿಜೆಪಿ ಶಾಸಕರುಗಳು, ಬಜರಂಗ ದಳದ ಮುಖಂಡರುಗಳು, ಕುತ್ತಾರು ಕೊರಗಜ್ಜನ ಸನ್ನಿಧಾನದಲ್ಲಿ ಮುಸ್ಲಿಂ ವಿರೋಧಿ ಕೊಳಕು ಭಾಷಣ ಮಾಡಿದ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಪೊಲೀಸ್ ಇಲಾಖೆ ಮೌನ ವಹಿಸಿರುವುದನ್ನು ತಾವು ಸಮರ್ಥಿಸಿದ್ದೀರಿ. ಸುಮೋಟೊ ಪ್ರಕರಣ ಹೂಡಿದರೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ನಿಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದೀರಿ. (ಜನಪರ ಸಂಘಟನೆಗಳು ಹೆದ್ದಾರಿ ಸಮಸ್ಯೆಗಳು, ಪ್ಯಾಲೆಸ್ತೀನ್ ನಲ್ಲಿ ಶಾಂತಿಗೆ ಆಗ್ರಹಿಸಿ ಶಾಂತಿಯುತ ಸಭೆ ನಡೆಸಿದಾಗ ಮಂಗಳೂರು ಪೊಲೀಸ್ ಕಮೀಷನರ್ ಸು ಮಟೊ ಮೊಕದ್ದಮೆ ಹಾಕಿದ ಸಂದರ್ಭ ನೀವು ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡದ್ದನ್ನು ಈ ಸಂದರ್ಭ ನೆನಪಿಸಿಕೊಳ್ಳುವೆ) ಹಾಗೆಯೆ, ದ್ವೇಷ ಭಾಷಣಕಾರರ ವಿರುದ್ಧ ಪ್ರತಿಭಟನೆ ಮಾಡುವ ಅಗತ್ಯ ಇಲ್ಲ, ಇದರಿಂದ ಮತ್ತಷ್ಟು ವಿಭಜನೆ ಆಗುತ್ತದೆ.

ಕೋಮುವಾದಿಗಳನ್ನು ಬಯ್ಯುವುದು ಜಾತ್ಯಾತೀತತೆ (ಕೋಮುವಾದದ ವಿರುದ್ಧ ಧ್ವನಿ ಎತ್ತುವುದು) ಅಲ್ಲ, ಪರಸ್ಪರ ಜೋಡಿಸುವುದು ಜಾತ್ಯಾತೀತತೆ ಎಂದು ಹೇಳುವ ಮೂಲಕ ಕೋಮುವಾದ/ಕೋಮುವಾದಿಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವ ಸೆಕ್ಯುಲರ್ ಮೂಮೆಂಟ್ ಗಳು, ಜನಪರ ಸಂಘಟನೆಗಳನ್ನು ನಕಾರಾತ್ಮಕವಾಗಿ ಬಿಂಬಿಸಿದ್ದೀರಿ. ಕೋಮುವಾದಿ ಕೃತ್ಯಗಳು, ಅಲ್ಪಸಂಖ್ಯಾತರ  ಮೇಲಿನ ದಾಳಿಗಳ ಸಂದರ್ಭ ಮೌನವಾಗಿ ಇರಿ ಎಂದು ಎಚ್ಚರಿಕೆ ನೀಡಿದ್ದೀರಿ. (ಬಹುಷಃ ಉತ್ತರ ಪ್ರದೇಶದ ಮಾದರಿ) ಇದು ಆಘಾತಕಾರಿ. ದ್ವೇಷ ಭಾಷಣಗಳ ವಿರುದ್ದ ಕಾನೂನು ಕ್ರಮವೂ ಇಲ್ಲ, ನಾಗರಿಕರಿಗೆ ಪ್ರತಿಭಟಿಸುವ ಅವಕಾಶವೂ ಇಲ್ಲ. ಎಲ್ಲವೂ ಏಕಮುಖ, ಕೋಮು ಸಂಘಟನೆಗಳಿಗೆ ಇದು ಪೂರ್ಣ ಸ್ವಾತಂತ್ರ್ಯವಲ್ಲದೆ ಮತ್ತೇನಲ್ಲ.

ಕಾನೂನು ಕ್ರಮಗಳನ್ನು ಕೈಗೊಂಡರೆ ನ್ಯಾಯಾಲಯದಲ್ಲಿ ಅದಕ್ಕೆ ಬೆಂಬಲ ಸಿಗುವುದಿಲ್ಲ ,(ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ನೀವು ಮರೆತಿದ್ದೀರಿ) ಅದಕ್ಕಾಗಿ ಮೊಕದ್ದಮೆ ಹೂಡಿಲ್ಲ ಎಂದು ಹೇಳುವ ನೀವು, ಕೋಮುವಾದದ ರಾಜಕಾರಣಕ್ಕೆ ಪರ್ಯಾಯವಾದ ಕಾರ್ಯಕ್ರಮಗಳನ್ನಾದರು ಹಮ್ಮಿಕೊಂಡು ಕೋಮುವಾದಿ ಶಕ್ತಿಗಳಿಗೆ ಜಾತ್ಯಾತೀತ ಮುಖಾಮುಖಿಗೆ ಮುಂದಾಗುವುದಿಲ್ಲ ಯಾಕೆ ? ಮೌನವೇ ಕೋಮುವಾದದ ರಾಜಕಾರಣಕ್ಕೆ ಸಶಕ್ತ ಪರ್ಯಾಯ ಎಂದು ನೀವು ಭಾವಿಸುತ್ತೀರಾ ? ಹಾಗಾದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ಅಸೆಂಬ್ಲಿ ಕ್ಷೇತ್ರದಲ್ಲಿ 11 ಕ್ಷೇತ್ರಗಳನ್ನು ಕೋಮುವಾದಿ ಶಕ್ತಿಗಳು ಗೆಲುವು ಸಾಧಿಸಲು ಸಾಧ್ಯವಾದದ್ದು ಹೇಗೆ? ಉಡುಪಿ ಜಿಲ್ಲೆಯ ಐದರಲ್ಲಿ ಐದು ಕ್ಷೇತ್ರಗಳಲ್ಲೂ ಕೋಮುಶಕ್ತಿಗಳು ದಿಗ್ವಿಜಯ ಸಾಧಿಸಿದರಲ್ಲಾ, ಅಲ್ಲಿ ಕೋಮುವಾದದ ಎದುರಾಗಿ ಮೌನ ಅಲ್ಲದೆ ಇನ್ನೇನಿತ್ತು ! ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸತತ ಹತ್ತು ಚುನಾವಣೆಗಳನ್ನು ಬಿಜೆಪಿ ಗೆಲುವು ಸಾಧಿಸಿದ್ದು ಹೇಗೆ ? ಕೋಮುವಾದದ ಎದುರಾಗಿ ಧ್ವನಿ ಎತ್ತಿದ ಕಾರಣಕ್ಕೆ ಅಂತ ಹೇಳುತ್ತೀರಾ,  ಇದೆಲ್ಲಾ ನಿಮಗೆ ಅರ್ಥ ಆಗದ ಸಂಗತಿ ಅಂತ ನಾವಂತೂ ಭಾವಿಸುವುದಿಲ್ಲ.

ಪ್ರತಿ ದಿನ ದ್ವೇಷ ಭಾಷಣ, ಮುಸ್ಲಿಂ, ಕ್ರೈಸ್ತ ವಿರೋಧಿ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯ “ಬಲಿಷ್ಠ” ಶಾಸಕರುಗಳ ಮಾತು ಬಿಡಿ. ಬಾಡಿಗೆ ಭಾಷಣಕಾರ, ಸುಳ್ಳಿಗೆ ವಿಖ್ಯಾತ ಎಂದು ಜನ ಕೇವಲವಾಗಿ ಕಾಣುವ ಸೂಲಿಬೆಲೆ ಅಂತವರು ನಿಮ್ಮದೇ ಕ್ಷೇತ್ರ ವ್ಯಾಪ್ತಿಯಲ್ಲಿರುವ, ಕೊರಗಜ್ಜನಂತಹ ತುಳುನಾಡಿನ ಸಾಂಸ್ಕೃತಿಕ ನಾಯಕ, ಆರಾಧ್ಯ ದೈವದ ಸನ್ನಿಧಿಯಲ್ಲಿ ನಿಂತು ಜನಾಂಗ ದ್ವೇಷದ ಭಾಷಣವನ್ನು ಪುಂಖಾನುಪುಂಖವಾಗಿ ಮಾಡಿ, ಅದನ್ನು ಬಹಿರಂಗವಾಗಿ ಸಮರ್ಥಿಸುತ್ತಾ ಅಡ್ಡಾಡುತ್ತಿದ್ದರೂ ನಿಮ್ಮ ಪೊಲೀಸರು ಏನೂ ಮಾಡುವುದಿಲ್ಲ, ಬದಲಿಗೆ ಆತ ಹೋದಲ್ಲಿ, ಬಂದಲ್ಲಿ ಪೊಲೀಸ್ ರಕ್ಷಣೆ ಕೊಡುತ್ತಾರೆ ಅಂದರೆ ಏನರ್ಥ ? ನಿಮ್ಮ ಸೂಚನೆ ಇದೆ ಅಂತ ತಾನೆ,  ರಾಜ್ಯ ಸರಕಾರ ಕರಾವಳಿಯನ್ನು ಪೂರ್ತಿಯಾಗಿ ಸಂಘಪರಿವಾರಕ್ಕೆ ಬಿಟ್ಟು ಕೊಟ್ಟಿದೆ ಎಂದು ತಾನೆ?

ಪ್ರಿಯ ಯು ಟಿ ಖಾದರ್ ಅವರೆ, ಈಗಲಾದರು ಎಚ್ಚೆತ್ತುಕೊಳ್ಳಿ. ನಮಗೆ ನಿಮ್ಮ ಮೇಲೆ ವ್ಯಕ್ತಿಗತವೊ, ರಾಜಕೀಯವಾದದ್ದೋ ಅಸಹನೆ ಇಲ್ಲ. ಕೋಮುವಾದಿಗಳನ್ನು ಹಿಮ್ಮೆಟ್ಟಿಸಬೇಕು ಎಂಬ ಸದುದ್ಧೇಶದಿಂದ ಕಳೆದ ಚುನಾವಣೆಗಳಲ್ಲಿ ನಾವೆಲ್ಲ ನಿಮ್ಮ ಜೊತೆ ನಿಂತೆವು. ಈಗ ನಮ್ಮ ನಿರೀಕ್ಷೆಗಳು ಹುಸಿಯಾಗುತ್ತಿರುವುದು, ಬಿಜೆಪಿ ಸರಕಾರದ ಅವಧಿಯಲ್ಲಿ ಇದ್ದಂತೆಯೆ ಈಗಲೂ ಕೋಮುಶಕ್ತಿಗಳು ಬೀದಿಯಲ್ಲಿ ವಿಜೃಂಭಿಸುತ್ತಿರುವುದು ನಮ್ಮಂತವರನ್ನು ವಿಚಲಿತಗೊಳಿಸಿದೆ‌. ಭವಿಷ್ಯದ ದಿನಗಳ ಕುರಿತು ಭೀತಿ ಉಂಟಾಗಿದೆ‌. ಆ ಕುರಿತು ನಿಮ್ಮ ನಡವಳಿಕೆಯ ಕುರಿತು ನಮಗೆ ತಕರಾರು. ಈಗಾಲಾದರು ನೀವು ಎಚ್ಚೆತ್ತುಕೊಳ್ಳಿ, ಕೋಮು ಶಕ್ತಿಗಳ ವಿರುಧ್ಧ ದೃಢವಾಗಿ ನಿಲ್ಲಿ. ನಾವು ನಿಮ್ಮ ಜೊತೆಗಿರುತ್ತೇವೆ. ಹಾಗಲ್ಲದಿದ್ದರೆ, ನಮ್ಮ ಜವಾಬ್ದಾರಿ ಏನಿದೆಯೊ ಆ ದಿಕ್ಕಿನಲ್ಲಿ ಮುನ್ನಡೆಯುತ್ತೇವೆ‌. ಅದು ನಮ್ಮೆಲ್ಲರ ಮೇಲಿನ ಚಾರಿತ್ರಿಕ ಜವಾಬ್ದಾರಿ‌. ನಮಸ್ಕಾರ.

– ಮುನೀರ್ ಕಾಟಿಪಳ್ಳ

Leave a Reply