ಪ್ರಣಾಳಿಕೆ ರಚನೆಯಲ್ಲಿ ಅವಕಾಶ ನೀಡಿರುವುದು ‘ಕರ್ನಾಟಕ ಮಾದರಿ ಆಡಳಿತ’ಕ್ಕೆ ಗೌರವ: ಸಿದ್ದರಾಮಯ್ಯ

2 years ago

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ಯಲ್ಲಿ ನನ್ನನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮನ್ನು ಪ್ರಣಾಳಿಕೆ ಸಮಿತಿ ಸದಸ್ಯರನ್ನಾಗಿಸಿ ಕಾಂಗ್ರೆಸ್ ನೇಮಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಸರ್ಕಾರದ  ‘ಕರ್ನಾಟಕ ಮಾದರಿ’ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನ ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಈ ‘ಕರ್ನಾಟಕ ಮಾದರಿ ಆಡಳಿತ’ಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ, ಜನತೆಗೆ ನಾವು ನೀಡುವ ವಚನವಾಗಿದ್ದು ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು ಎಂದು ಹೇಳಿದ್ದಾರೆ.

ಹಿಂದಿನ ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು – ಸಮಬಾಳು’ನೀಡುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆಯನ್ನು ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡಾ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡಾ ಕರ್ನಾಟಕ ಮಾದರಿ ಆಡಳಿತದ ಅನುಕೂಲಗಳನ್ನು ಪಡೆಯುವಂತಾಗಲಿ ಎಂದು ಹಾರೈಸಿದ್ದಾರೆ. 

ನನ್ನ ಎಲ್ಲ ಯೋಚನೆ-ಯೋಜನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವ ಪಕ್ಷದ ಹಿರಿಯರಾದ ಸೋನಿಯಾ ಗಾಂಧಿ ಮತ್ತು Rahul Gandhi  ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Leave a Reply