ಕಂದಾಯ ಇಲಾಖೆಯಲ್ಲಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ: ಕೃಷ್ಣ ಬೈರೇಗೌಡ

2 years ago

ಬೆಂಗಳೂರು: ರಾಜ್ಯದಲ್ಲಿ 1890ರಲ್ಲಿ ಬ್ರಿಟೀಷರ ಕಾಲದಲ್ಲಿ ಕೊನೆಯ ಬಾರಿ ಸರ್ವೇ ಕೆಲಸ ಆಗಿತ್ತು. ಆದರೆ, ತದನಂತರ ಸರ್ವೇ ಕೆಲಸ ಆಗಿಲ್ಲ. ಇದೀಗ ರಾಜ್ಯಾದ್ಯಂತ ಮರು-ಸರ್ವೇ ಕೆಲಸ ಆರಂಭಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1,000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ 21 ತಾಲೂಕುಗಳಲ್ಲಿ ಮರು-ಸರ್ವೇ ಕೆಲಸ ಚಾಲ್ತಿಯಲ್ಲಿದೆ. ಸರ್ವೇ ಕೆಲಸ ಸಂಪೂರ್ಣವಾಗಿ ಮುಗಿದು ಮಾಹಿತಿಗಳು ಡಿಜಿಟಲೀಕರಣಗೊಳ್ಳದೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಅದಕ್ಕೆ ಮಾನವ ಸಂಪನ್ಮೂಲದ ಅಗತ್ಯವೂ ಇದೆ ಎಂದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದಾಗ ಕೂಡಲೇ ಅವರು 1000 ಜನ ಪರವಾನಗಿ ಭೂಮಾಪಕರ ನೇಮಕಾತಿಗೆ ಒಪ್ಪಿಗೆ ಸೂಚಿಸಿದರು. ಇದಲ್ಲದೆ, 364 ಸರ್ಕಾರಿ ಭೂ ಮಾಪಕರು ಹಾಗೂ 27 ಜನ ಎಡಿಎಲ್‌ಆರ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಮುಗಿದು ಎಲ್ಲಾ ಭೂ ಮಾಪಕರೂ ಕಾರ್ಯೋನ್ಮುಖರಾಗಲಿದ್ದಾರೆ ಎಂದರು.

ಇದರ ಜೊತೆಗೆ ಸರ್ವೇ ಇಲಾಖೆಯಲ್ಲಿ 541 ನೇರ ನೇಮಕಾತಿ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗೂ ಕಳೆದ ಎರಡು ತಿಂಗಳಿನಿಂದ ಚರ್ಚಿಸಿ ಮುಖ್ಯಮಂತ್ರಿಗಳಿಂದ ಹಾಗೂ ಹಣಕಾಸು ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದೆ. ಒಟ್ಟಾಗಿ ಸರ್ವೇ ಇಲಾಖೆಗೆ ಹೆಚ್ಚುವರಿ 2500 ನೌಕರರು ನೇಮಕವಾದಂತಾಗುತ್ತದೆ ಎಲ್ಲರೂ ಒಟ್ಟಾಗಿ ಸರ್ವೇ ಕೆಲಸಗಳನ್ನು ಮುಗಿಸಬೇಕಿದೆ ಎಂದರು.

Leave a Reply