ಧರ್ಮಸ್ಥಳ ಫೈಲ್ಸ್: ಎಸ್‌ಐಟಿ ತನಿಖೆಯ ಬಗ್ಗೆ ಸರ್ಕಾರ ಯಾವುದೇ ಡೈರೆಕ್ಷನ್ಸ್ ಕೊಡುವುದಿಲ್ಲ: ಪರಮೇಶ್ವರ್

8 months ago

ಬೆಂಗಳೂರು: ಧರ್ಮಸ್ಥಳದಲ್ಲಿ‌ ಬುಧವಾರ ನಡೆದ ಗುಂಪು ಘರ್ಷಣೆ ಕುರಿತಂತೆ ಸಮಗ್ರ ವರದಿ ನೀಡಲು ಗೃಹಸಚಿವ ಪರಮೇಶ್ವರ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಬುಧವಾರ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಯಾಕಾಗಿದೆ, ಯಾರು ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದರು. 

ಅಸಹಜ ಸಾವುಗಳ ಆರೋಪ ಕುರಿತಂತೆ ಅಲ್ಲಿನ ಜನಸಮುದಾಯ ಎಸ್‌ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್‌ಐಟಿ ರಚಿಸಿದ್ದೇವೆ ಎಂದರು.

ಅನಾಮಿಕ ವ್ಯಕ್ತಿ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ 164 ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ಮಾಡಿದ್ದೇವೆ ಎಂದರು.

ಧರ್ಮಸ್ಥಳದಲ್ಲಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ಇತ್ತು. ಅದರ ಪ್ರಕಾರ 13 ಸ್ಥಳಗಳನ್ನು ತೆಗೆದಿದ್ದಾರೆ. 6ನೇ ಸ್ಥಳದಲ್ಲಿ ಗಂಡಸಿನ ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ನೀವೆಲ್ಲ ವರದಿ ಮಾಡಿದ್ದೀರಿ. 13ನೇ ಸ್ಥಳಕ್ಕೆ ಹೋದಾಗ ಏನೂ ಸಿಕ್ಕಿಲ್ಲ. ಇದನ್ನು ಹೊರತುಪಡಿಸಿ ಗುಡ್ಡದಲ್ಲಿ ಒಂದಷ್ಟು ಮೂಳೆಗಳು ಸಿಕ್ಕಿದ್ದು, ಎಫ್‌ಎಸ್‌ಎಲ್ ಗೆ ಕಳಿಸುವ ಕೆಲಸ ಎಸ್‌ಐಟಿ ಮಾಡಿದೆ ಎಂದರು.

ಇದರ ಹಿನ್ನೆಲೆಯಲ್ಲಿ ಅಥವಾ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ಘರ್ಷಣೆಯಾಗಿದೆ. ದೂರು, ಪ್ರತಿದೂರು ಕೊಟ್ಟಿದ್ದಾರೆ. ಎಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಅದನ್ನ ತನಿಖೆ ಮಾಡುತ್ತಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್‌ಐಟಿ ಹಾಗೂ ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದರು.

ಧರ್ಮಸ್ಥಳದ ವಿಚಾರದಲ್ಲಿ ಯಾರೋ ಹೇಳಿಕೆ ಕೊಡುತ್ತಾರೆ. ಅದು ನಮಗೆ ಮುಖ್ಯವಲ್ಲ. ಎಸ್‌ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು. ಆ ಕೆಲಸವನ್ನು ಎಸ್‌ಐಟಿ ಮಾಡುತ್ತದೆ. ಅವರನ್ನು ಈಗಲೇ ಪ್ರಶ್ನೆ ಮಾಡಿದರೆ ತನಿಖೆಗೆ ಅರ್ಥ ಬರುವುದಿಲ್ಲ ಎಂದರು.

ಎಸ್‌ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇವರೆ ಎಲ್ಲ ಸಲಹೆ ಕೊಡುತ್ತಾರೆ. ರೆಡಾರ್ ತರಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ ರೀತಿ ತನಿಖೆ ಮಾಡಲು ಆಗುತ್ತದೆಯೇ? ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡುತ್ತಾರೆ. ಎಸ್‌ಐಟಿ ತನಿಖೆಯ ಬಗ್ಗೆ ಸರ್ಕಾರ ಯಾವುದೇ ಡೈರೆಕ್ಷನ್ಸ್ ಕೊಡುವುದಿಲ್ಲ ಎಂದರು.

Leave a Reply