ಲೋಕಾಯುಕ್ತ ತನಿಖೆ ನೆಪ ಮುಂದು ಮಾಡಿ ಮೋದಿ-ಶಾ ಇ.ಡಿ.ಯನ್ನು ಛೂ ಬಿಟ್ಟಿದ್ದಾರೆ

2 years ago

ಮನಿ ಲಾಂಡರಿಂಗ್, ಹಣ ವರ್ಗಾವಣೆ ಪ್ರಕರಣದ ಕುರಿತು ತನಿಖೆ ನಡೆಸುವ ಇ.ಡಿ.ಗೆ ಮುಡಾ ಸೈಟು ಹಂಚಿಕೆಯ ವಿವಾದದಲ್ಲಿ ಮೂಗು ತೂರಿಸುವ ಅಗತ್ಯವೇ ಇರಲಿಲ್ಲ. ಆದರೆ ಇದು ಕೇವಲ ಸಂಸ್ಥೆಯಾಗಿ ಉಳಿದಿಲ್ಲ, ಬಿಜೆಪಿಯ ಸುಪಾರಿ ಸ್ವೀಕರಿಸುವ ಸಂಸ್ಥೆಯಾಗಿರುವ ಕಾರಣಕ್ಕೆ ಲೋಕಾಯುಕ್ತ ತನಿಖೆ ನೆಪ ಮುಂದು ಮಾಡಿ ಮೋದಿ-ಶಾ ಇ.ಡಿ.ಯನ್ನು ಛೂ ಬಿಟ್ಟಿದ್ದಾರೆ.

ಅಂದರೆ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಹಣಿಯಲು ಎಲ್ಲಾ ಬಗೆಯ ಕುತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇಂದು ಮುಡಾ ಹಗರಣ ಕೇವಲ ಸಿದ್ದರಾಮಯ್ಯನವರಿಗೆ ಸಂಬಂಧಿಸಿದ ಹಗರಣವಾಗಿ, ಅವರ ವೈಯಕ್ತಿಕ ವಿಷಯವಾಗಿ ಉಳಿದಿಲ್ಲ. ಅದರಾಚೆಗೆ ಪ್ರಜಾಪ್ರಭುತ್ವದ ಬುಡವನ್ನು ಅಲ್ಲಾಡಿಸುವ, ದ್ವೇಷ ರಾಜಕಾರಣದ ಪ್ರಾಬಲ್ಯವನ್ನು ಇದು ಸಂಕೇತಿಸುತ್ತದೆ.

ಮೋದಿ-ಶಾ-ಆರೆಸ್ಸಸ್ ಇಂದು ಕರ್ನಾಟಕದ ಜನತೆಯ ಪ್ರಜ್ಞೆ ಮತ್ತು ಸಂವಿಧಾನಾತ್ಮಕ ಆಯ್ಕೆಗೆ ನೇರವಾಗಿ ಸವಾಲು ಒಡ್ಡಿದ್ದಾರೆ.

ಮುಡಾ ಹಗರಣದ ನಿಷ್ಪಕ್ಷಪಾತ  ತನಿಖೆ ನಡೆಯಲಿ ಎಂದು ಆಗ್ರಹಿಸುತ್ತಲೇ ಈ ನಿರಂಕುಶ ಪ್ರಭುತ್ವ-ವೈದಿಕಶಾಹಿ ದಾಳಿಯನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಹಿಮ್ಮೆಟ್ಟಿಸಬೇಕಿದೆ.

ಓಬಿಸಿ ಸಮುದಾಯದ ಮುಖಂಡರು ಎರಡನೇ ಬಾರಿ ಮುಖ್ಯಮಂತ್ರಿಯಾಗುವುದನ್ನು ಬಲಿಷ್ಠ ಜಾತಿಗಳು ಸಹಿಸುತ್ತಿಲ್ಲ ಎನ್ನುವುದು ಈ ಪಿತೂರಿಯ ಒಂದು ಮುಖವಾದರೆ ಸಿದ್ದರಾಮಯ್ಯ ಸರ್ಕಾರವನ್ನು ಪತನಗೊಳಿಸುವುದರ ಮೂಲಕ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಓಟಕ್ಕೆ ತಡೆಯೊಡ್ಡುವುದು ಮತ್ತೊಂದು ಮುಖ.

ಇಲ್ಲಿ ಕಾಂಗ್ರೆಸ್ ಎನ್ನುವುದು ಒಂದು ಸಂಕೇತ ಮಾತ್ರ. ಇದರ ಬದಲಿಗೆ ಬೇರೆ ಯಾವುದೇ ಪಕ್ಷವು ಗೆಲುವಿನ ಹಾದಿಯಲ್ಲಿದ್ದರೆ ಅವರಿಗೂ ಇದೇ ಗತಿಯಾಗುವುದರಲ್ಲಿ ಅನುಮಾನವಿಲ್ಲ

ಕರ್ನಾಟಕದ ಜನತೆ ತಾವು ಆಯ್ಕೆ ಮಾಡಿದ ಸರ್ಕಾರವನ್ನು ರಕ್ಷಿಸಬೇಕಾಗಿದೆ. ಇಲ್ಲಿ ಪಕ್ಷ ಯಾವುದು ಎನ್ನುವುದಕ್ಕಿಂತ ನಮ್ಮ ಆಯ್ಕೆಯನ್ನೇ ಸೋಲಿಸುತ್ತಿದ್ದಾರೆ ಎನ್ನುವ ಆತಂಕ ನಮಗೆ ಮುಖ್ಯವಾಗಬೇಕು.

ಮಾರ್ಕ್ಸ್ ಹೇಳಿದ ‘ಇತಿಹಾಸ ಪುನರಾವರ್ತನೆ ಆಗುತ್ತದೆ, ಮೊದಲು ದುರಂತವಾಗಿ, ನಂತರ ಪ್ರಹಸನವಾಗಿ’ ಮಾತುಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ. ಕರ್ನಾಟಕದ ಪಾಲಿಗೆ ದುರಂತದ ಅಧ್ಯಾಯ ಮುಗಿದು ಮೋಶಾ ಜೋಡಿಯ ಪ್ರಹಸನ ಶುರುವಾಗಿದೆ. ಪ್ರಹಸನವನ್ನು ಸೋಲಿಸುವುದು ನಮ್ಮ ಹೊಣೆಗಾರಿಕೆಯಲ್ಲವೇ?

– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply