ಸೈಕಲ್ ಪ್ಯೂರ್ ಅಗರಬತ್ತಿಯಿಂದ  4 ಲಕ್ಷ ರೂ. ನಗದು ಬಹುಮಾನ ವಿತರಣೆ

2 years ago

12ನೇ ವಾರ್ಷಿಕ ವನ್ಯಜೀವಿ ಸೇವಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಅಪ್ರತಿಮ ಕೆಲಸ ಮಾಡಿದ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನಾಲ್ವರು ಗಾರ್ಡ್ ವಾಚರ್ ಗಳಿಗೆ ರೂ. 4,00,000 ನಗದು ಬಹುಮಾನ

ಬೆಂಗಳೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಸೈಕಲ್ ಪ್ಯೂರ್ ಅಗರಬತ್ತಿ ಪ್ರತೀ ವರ್ಷವೂ ಅರಣ್ಯ ಸಂರಕ್ಷರಿಗೆ ಗೌರವ ಸಲ್ಲಿಸುವ ಮಹತ್ವದ ಕಾರ್ಯ ಮಾಡುತ್ತಿದ್ದು, ಈ ಸಲ ಸೆಪ್ಟೆಂಬರ್ 21ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 12ನೇ ವಾರ್ಷಿಕ ವನ್ಯಜೀವಿ ಸೇವಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನಾಲ್ವರು ಅರಣ್ಯ ಸಂರಕ್ಷಕರಿಗೆ ಗೌರವ ಪುರಸ್ಕಾರ ಸಲ್ಲಿಸಿತು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವಾಚರ್ ವೆಂಕಟೇಶ್ (ಕರ್ನಾಟಕ), ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗಾರ್ಡ್ ರಾಘವೇಂದ್ರ ಗೌಡ (ಕರ್ನಾಟಕ), ಕೊಯಮತ್ತೂರು ವನ್ಯಜೀವಿ ಸಂರಕ್ಷಣಾ ವಿಭಾಗದ ಗಾರ್ಡ್ ಎ ಅರುಣ್ ಕುಮಾರ್ (ತಮಿಳುನಾಡು) ಮತ್ತು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ವಾಚರ್ ಸಾಬು ಜಾರ್ಜ್ ( ಕೇರಳ) ಅವರು ವನ್ಯಜೀವಿ ಸಂರಕ್ಷಣಾ ವಿಷಯದಲ್ಲಿ ತೋರಿರುವ ಅಪ್ರತಿಮ ಬದ್ಧತೆಗೆ ತಲಾ ರೂ.1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿಶೇಷವಾಗಿ ದಕ್ಷಿಣ ಭಾರತದ ಕಾಡುಗಳಲ್ಲಿ ಆನೆಗಳ ಸಂರಕ್ಷಣೆ ವಿಚಾರದಲ್ಲಿ ಮಹತ್ತರ ಕೆಲಸ ಮಾಡಿರುವ ಕರ್ನಾಟಕದ ಸುಧೀರ್ ಶೆಟ್ಟಿ ಮತ್ತ ಕೇರಳದ ಎಂ ಎನ್ ಜಯಚಂದ್ರನ್ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.

ಕಾರ್ಯಕ್ರಮದ ಮೂಲಕ ಕೆಎಸ್ಸಿಎ ಟೈಗರ್ ಕಪ್ 2024ರ 12ನೇ ಆವೃತ್ತಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕ್ರಿಕೆಟಿಗರಿಂದ ಸಂರಕ್ಷಣಾ ಕಾರ್ಯ ಎಂಬ ಮಹತ್ತರ ಯೋಜನೆಯ ಭಾಗವಾಗಿ ನಡೆದ ಕೆಎಸ್ಸಿಎ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯು ಬೆಂಗಳೂರಿನಲ್ಲಿ ಏಪ್ರಿಲ್ 22 ರಿಂದ ಮೇ 13ರವರೆಗೆ ನಡೆದಿತ್ತು. ಕ್ರಿಕೆಟಿಗರಿಂದ ಸಂರಕ್ಷಣಾ ಕಾರ್ಯ ಎಂಬ ಯೋಜನೆಯನ್ನು ಭಾರತದ ಕ್ರಿಕೆಟ್ ದಂತಕಥೆಗಳಾದ ಸಂದೀಪ್ ಪಾಟೀಲ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ಸ್ಥಾಪಿಸಿರುವ ಪಬ್ಲಿಕ್ ಟ್ರಸ್ಟ್ ಸಂಸ್ಥೆಯು ಹಮ್ಮಿಕೊಂಡಿದೆ. ಈ ಸಂಸ್ಥೆ ಭಾರತದ ವನ್ಯಜೀವಿ ಸಂರಕ್ಷಣಾ ಕೆಲಸದಲ್ಲಿ ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಜಿ.ಆರ್.ವಿಶ್ವನಾಥ್ ಮತ್ತು ಎನ್.ರಂಗರಾವ್ ಆಂಡ್ ಸನ್ಸ್ ನಿರ್ದೇಶಕ ಕಿರಣ್ ರಂಗಾ ಉಪಸ್ಥಿತರಿದ್ದು, ಅರಣ್ಯ ಸಂರಕ್ಷಕರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಆರ್.ವಿಶ್ವನಾಥ್, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅವಿರತವಾಗಿ ದುಡಿಯುತ್ತಿರುವ ಅರಣ್ಯ ಸೈನಿಕರಿಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ನಾಡಿನ ಶ್ರೀಮಂತ ಜೀವವೈಧ್ಯತೆಯನ್ನು ರಕ್ಷಿಸಲು ಅವರ ಶ್ರಮ, ಶ್ರದ್ಧೆ ಬಹಳ ಮುಖ್ಯ. ಈ ಮಹತ್ತರ ಕಾರ್ಯದಲ್ಲಿ ಅವರ ಜೊತೆ ನಿಲ್ಲುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು.

ಎನ್ ರಂಗರಾವ್ ಆಂಡ್ ಸನ್ಸ್ ನ ನಿರ್ದೇಶಕ ಕಿರಣ್ ರಂಗಾ ಮಾತನಾಡಿ, ಅರಣ್ಯ ಸಂರಕ್ಷಣೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ ಅರಣ್ಯ ಸೈನಿಕರನ್ನು ಗುರುತಿಸುವುದು ಗೌರವದ ಕೆಲಸವಾಗಿದೆ. ಅಪ್ರತಿಮ ಕೆಲಸ ಮಾಡುತ್ತಿರುವ ಅರಣ್ಯ ಸಂರಕ್ಷಕರಿಗೆ ಗೌರವ ಸಲ್ಲಿಸಲು ಎನ್ಆರ್ ಗ್ರೂಪ್ ಹೆಮ್ಮೆ ಪಡುತ್ತದೆ ಎಂದರು. ಈ ಸಂದರ್ಭದಲ್ಲಿ ಕ್ರಿಕೆಟ್ ಕೋಚ್ ಜೋಸೆಫ್ ಹೂವರ್ ಉಪಸ್ಥಿತರಿದ್ದರು.

Leave a Reply