ಕರ್ನಾಟಕದಲ್ಲಿ ಹಿಂದಿ ಹೇರಿಕೆ ಸಮರ್ಥನೀಯವಲ್ಲ

2 years ago

ಕರ್ನಾಟಕದಲ್ಲಿ ವ್ಯವಹಾರ ವಹಿವಾಟು ನಡೆಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ, ಖಾಸಗಿ ಬ್ಯಾಂಕುಗಳಲ್ಲಿ, ಅಂಚೆ ಕಚೇರಿಗಳಲ್ಲಿ ಹಾಗೂ ಜೀವವಿಮೆ ಕಚೇರಿಗಳಲ್ಲಿ ಕನ್ನಡವನ್ನು ಬಳಸದೆ ನಿರ್ಲಕ್ಷಿಸುತ್ತಿರುವುದು ಕಳವಳಕಾರಿಯಾಗಿದೆ. ಇದಲ್ಲದೆ ಕನ್ನಡಕ್ಕೆ ಆದ್ಯತೆ ನೀಡುವ ಬದಲಾಗಿ ಹಿಂದಿ ಭಾಷೆಗೆ ಆದ್ಯತೆ ನೀಡುತ್ತಾ, ಹಿಂದಿಯನ್ನು ವ್ಯವಸ್ಥಿತವಾಗಿ ಹೇರುತ್ತಿರುವುದು ಆತಂಕ ಹುಟ್ಟಿಸುವ ಬೆಳವಣಿಗೆಯಾಗಿದೆ.

ಕರ್ನಾಟಕವು 65 ಮಿಲಿಯನ್‌ಗೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ ಹೊಂದಿರುವ ಕನ್ನಡ ಭಾಷೆಯು ಇಂಡಿಯಾ ಒಕ್ಕೂಟದ ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿದೆ. ಫೆಡರಲ್ ರಿಪಬ್ಲಿಕ್ ಆಫ್ ಇಂಡಿಯಾದ ಅಧಿಕೃತ ಭಾಷೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಕರ್ನಾಟಕದ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲೇ ಬಳಸದೆ ನೀವು ತಾತ್ಸಾರ ಮನೋಭಾವ ತೋರುತ್ತಿರುವುದನ್ನು ನಾವು ಖಂಡಿಸುತ್ತೇವೆ. ಬ್ಯಾಂಕುಗಳು ಅಂಚೆ ಕಚೇರಿ ಮುಂತಾದೆಡೆ ಚಲನ್‌ಗಳು, ಅರ್ಜಿ ಫಾರಂಗಳನ್ನು ಹಿಂದಿ, ಇಂಗ್ಲಿಷ್ ನಲ್ಲಿ ಮಾತ್ರ ವಿತರಿಸುವ ಮೂಲಕ ಕನ್ನಡದಲ್ಲಿ ಲಭ್ಯವಿರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡು ಬಳಸಲು ಅವಕಾಶವಿರದಂತೆ ಕೇವಲ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿರುವ ಎಟಿಎಂಗಳನ್ನು ಸ್ಥಾಪಿಸಲಾಗುತ್ತಿದೆ.

ಒಂದೆಡೆ ಕನ್ನಡವನ್ನು ನಿರ್ಲಕ್ಷಿಸಿ ಬದಿಗೆ ತಳ್ಳುವುದು, ಮತ್ತೊಂದೆಡೆ ಕನ್ನಡದ ಸ್ಥಾನವನ್ನು ಹಿಂದಿ ಆಕ್ರಮಿಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತಿದ್ದು, ಅದಕ್ಕೆ ತಕ್ಕನಾಗಿ ಬ್ಯಾಂಕ್, ಅಂಚೆ ಕಚೇರಿಗಳು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳು ವರ್ತಿಸುತ್ತಿರುವ ಬಗ್ಗೆ ಕರ್ನಾಟಕದಲ್ಲಿ ವ್ಯಾಪಕವಾದ ಅಸಮಾಧಾನ ಬೆಳೆಯುತ್ತಿದೆ ಎನ್ನುವುದನ್ನು ತಿಳಿಸಬಯಸುತ್ತೇವೆ.

ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಒದಗಿಸದೆ, ವ್ಯವಹರಿಸದೆ ಇರುವುದು ಮತ್ತು ಹಿಂದಿ ಹೇರಿಕೆ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಧಕ್ಕೆಯುಂಟು ಮಾಡಲಿದೆ. ಇದು ನಮ್ಮ ನಾಡಿನ ಕೋಟ್ಯಂತರ ಜನತೆಯ ಮೂಲಭೂತ ಹಕ್ಕುಗಳ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ನಾವು ಭಾವಿಸುತ್ತೇವೆ.

ಫೆಡರಲಿಸಂ ಆಶಯಗಳನ್ನು ಬಲಪಡಿಸುವಲ್ಲಿ ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿಯೂ ಇದ್ದು, ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡದೆ ಕನ್ನಡದಲ್ಲಿ ವ್ಯವಹರಿಸಲು ಸೂಕ್ತ ಕ್ರಮ ವಹಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ಇಂತಿ ನಿಮ್ಮ ವಿಶ್ವಾಸಿಗಳು

ಎಲ್.ಎನ್. ಮುಕುಂದರಾಜ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ
ಡಾ.ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕರು
ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವರು, ಲೇಖಕರು
ಪಿಚ್ಚಳ್ಳಿ ಶ್ರೀನಿವಾಸ್, ಪ್ರಸಿದ್ಧ ಗಾಯಕರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು
ವ.ಚ. ಚನ್ನೇಗೌಡ, ಮುಖಂಡರು, ಕರ್ನಾಟಕ ಸಾರಿಗೆ ಇಲಾಖೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ
ಡಾ.ಲೀಲಾ ಸಂಪಿಗೆ, ಲೇಖಕರು, ಮಾನವ ಬಂಧುತ್ವ ವೇದಿಕೆ ಮುಖಂಡರು
ಪದ್ಮಾ ಶಿವಮೊಗ್ಗ, ಪತ್ರಕರ್ತೆ ಹಾಗೂ ಚಲನಚಿತ್ರ ಕಲಾವಿದರು
ಡಾ.ವಿದ್ಯಾಧರ, ಬರಹಗಾರರು, ಮಡಿಕೇರಿ
ಬಸವರಾಜ ಸೂಳಿಬಾವಿ, ಲಡಾಯಿ ಪ್ರಕಾಶನ, ಗದಗ
ಹೆಚ್ ಆರ್ ಸ್ವಾಮಿ, ಪರಿಸರ ತಜ್ಞರು, ಅರಸೀಕೆರೆ
ನಾ.ದಿವಾಕರ, ಪ್ರಸಿದ್ಧ ಅಂಕಣಕಾರರು, ಮೈಸೂರು
ಲಕ್ಷಣ ಕೊಡಸೆ, ಪತ್ರಕರ್ತರು
ಶಿವಲಿಂಗಮ್, ಅಧ್ಯಕ್ಷರು, ಸ್ವಾಭಿಮಾನಿ ದಲಿತ ಶಕ್ತಿ, ಹಾವೇರಿ
ಜೆ.ಎಸ್.ಪಾಟೀಲ್, ಸಾಮಾಜಿಕ ಮುಖಂಡರು, ಬಿಜಾಪುರ
ರಾಮಣ್ಣ ಕೋಡಿಹೊಸಳ್ಳಿ, ಮುಖಂಡರು, ಕನ್ನಡ ಸಂಘರ್ಷ ಸಮಿತಿ
ಆರ್.ಜಿ. ಹಳ್ಳಿ ನಾಗರಾಜ್, ಬಂಡಾಯ ಸಾಹಿತ್ಯ ಸಂಘಟನೆ ಮುಖಂಡರು
ಪ್ರಕಾಶ್ ಮೂರ್ತಿ, ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್
ಶ್ರೀಪಾದ್ ಭಟ್, ಬರಹಗಾರರು
ಕುಚ್ಚಂಗಿ ಪ್ರಸನ್ನ, ಸಂಪಾದಕರು, ಬೆವರ ಹನಿ ಪ್ರಾದೇಶಿಕ ದಿನಪತ್ರಿಕೆ
ಮೋಹನ್ ಕುಮಾರ್, ಹೈಕೋರ್ಟ್ ವಕೀಲರು, ಸಾಮಾಜಿಕ ಮುಖಂಡರು
ಡಾ.ರೀಟಾ ರೀನಿ, ಪತ್ರಕರ್ತರು, ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘಟನೆ ಮುಖಂಡರು
ನಟರಾಜಪ್ಪ, ಚಿಂತಕರು, ಸಾಮಾಜಿಕ ಕಾರ್ಯಕರ್ತರು
ರವಿ ಸಿರಿವರ, ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ
ಮಂಜುನಾಥ್ ತೋವಿನಕೆರೆ, ಸಂಪಾದಕರು, ಕೆಂಧೂಳಿ ವಾರಪತ್ರಿಕೆ
ಚಳ್ಳಕೆರೆ ಬಸವರಾಜ್, ಬಿಸಿ ಸುದ್ದಿ ಡಾಟ್ ಕಾಮ್, ಸಂಪಾದಕ, ಚಿತ್ರದುರ್ಗ
ಭಾಸ್ಕರ್ ಪ್ರಸಾದ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರು
ಯೋಗೇಶ್ ಮಾಸ್ಟರ್, ರಂಗ ನಿರ್ದೇಶಕರು ಹಾಗೂ ಬರಹಗಾರರು
ಪಾಲನೇತ್ರ, ಕರ್ನಾಟಕ ವಿಚಾರ ವೇದಿಕೆ
ಪಾರ್ವತೀಶ ಬಿಳಿದಾಳೆ, ಸಂಚಾಲಕರು, ಹಿಂದಿ ವಿರೋಧಿ ವೇದಿಕೆ, ಕರ್ನಾಟಕ

Leave a Reply