ಕನ್ನಡ ಶಾಲೆ ಉಳಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಣಯ

2 years ago

ಬೆಂಗಳೂರು: ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವುದು ಕನ್ನಡಿಗರ ಮೂಲ ಬೇಡಿಕೆಯಾಗಿದೆ. ಇದುವರೆಗೆ ಕನ್ನಡಿಗರಿಗೆ, ಕನ್ನಡ ಭಾಷೆ, ಕನ್ನಡ ಶಾಲೆಗಳ ಉಳಿವಿಗೆ ನಡೆಸಿದ ನ್ಯಾಯಯುತ ಹೋರಾಟಕ್ಕ ಜಯ ಎನ್ನುವುದು ಮರೀಚಿಕೆಯಾಗಿದೆ. ಹಾಗಂದು ರಾಜ್ಯದಲ್ಲಿ ಕನ್ನಡ ಉಳಿಯ ಬೇಕು, ಕನ್ನಡ ಬೆಳೆಯಬೇಕು ಎನ್ನುವ ದೀಕ್ಷೆ ತೊಟ್ಟ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳನ್ನು ಉಳಿಸುವುದಕ್ಕೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಸಮಸ್ತ ಕನ್ನಡಿಗರ ಒಪ್ಪಿಗೆ ಸಿಕ್ಕದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.

“ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಬೆಳೆಸುವ” ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಈಡೇರಿಕೆಗಾಗಿ, ಮುಂದಿನ ಸೂಕ್ತ ಕ್ರಮಕೈಗೊಳ್ಳುವುದರ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉನ್ನತ ಮಟ್ಟದ “ಚಿಂತನಾ ಸಭೆ” ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಎದುರಿಸುವ ಹತ್ತಾರು ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಆದರೆ ಕನ್ನಡ ಶಾಲೆಗಳ ಸ್ಥಿತಿ ಕಂಡಾಗ ದು:ಖವಾಗುತ್ತದೆ. ಕನ್ನಡ ಶಾಲೆಗಳ ಉಳಿವಿಗೆ ಪರಿಷತ್ತು ನಡೆಸುವ ನ್ಯಾಯಾಂಗ ಹೋರಾಟಕ್ಕೆ ಸಮಸ್ತ ಕನ್ನಡಿಗರ ಬೆಂಬಲ ಸಿಕ್ಕಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದರು.

ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡವನ್ನು ಬೆಳೆಸುವ “ಚಿಂತನಾ ಸಭೆಯ ನೇತೃತ್ವ ವಹಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನ್ಯಾ. ಅರಳಿ ನಾಗರಾಜ್ ಮಾತನಾಡಿ, ಸರ್ಕಾರಗಳು ನ್ಯಾಯಾಂಗಕ್ಕೆ ಅಂಜುತ್ತವೆ. ಆದ್ದರಿಂದ ಕನ್ನಡ ಶಾಲೆ ಉಳಿಸಿ ಬೆಳೆಸಲು ಅರ್ಜಿ ಸಲ್ಲಿಸಲು ಹಿರಿಯ ವಕೀಲರ ಜೊತೆ ಚರ್ಚಿಸಬೇಕಿದೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾವು ಸರ್ಕಾರಕ್ಕೆ ವಿನಂತಿಸಬೇಕು. ಪೋಷಕರಲ್ಲಿ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಕಳಿಸಲು ಮನವಿ ಮಾಡಬೇಕು. ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಓದಿಯೇ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದೆ. ಅದೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಇಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ ಮಾತನಾಡಿ, ಈಗ ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಾಳತ್ವದಲ್ಲಿ ತಜ್ಞರ ಒಂದು ನಿಯೋಗದೊಂದಿಗೆ ಕನ್ನಡ ಶಾಲೆಗಳ ಉಳಿವಿಗೆ ಸರಕಾರ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಮಾತನಾಡಿ, ಪ್ರತಿ ಜಿಲ್ಲೆಗೊಂದು ಮಾದರಿ ಕನ್ನಡ ಮಾಧ್ಯಮದ ಶಾಲೆಗಳನ್ನು ಆರಂಭಿಸಬೇಕು. ಕನ್ನಡದಲ್ಲಿ ಕಲಿತರೆ ಮಕ್ಕಳ ಮನಸ್ಸಿಗೆ ಮುಟ್ಟುತ್ತದೆ ಎನ್ನುವ ಸಂಗತಿಯನ್ನು ಬಹುತೇಕರು ಮರೆತು ಬಿಟ್ಟಿದ್ದಾರೆ. ಸರಕಾರ ಶಾಲೆಗಳ ಅಭಿವೃದ್ಧಿಗೆ ಯೋಜನಾ ಬದ್ಧ ರೂಪರೇಷೆ ಹಾಕಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಕಲಿತ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುವಂತಾಗಬೇಕು, ಅಂದಾಗ ಮಾತ್ರ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ ಎಂದರು.

ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ ಯಾವ ಸರ್ಕಾರಕ್ಕೂ ಭಾಷೆ, ಸಂಸ್ಕೃತಿ, ಶಿಕ್ಷಣದ ಬಗ್ಗೆ ಕಾಳಜಿಯೇ ಇಲ್ಲ. ಸರಕಾರ ಸಮಸ್ಯಗಳ ಕುರಿತು ವರ್ಷಕ್ಕೊಂದು ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಆ ಎಲ್ಲ ನಿರ್ಣಯಗಳು ಕಡತಕ್ಕೆ ಸೇರುವುದು ಬಿಟ್ಟರೆ ಕಾರ್ಯಗತವಾಗುವುದಿಲ್ಲ. ಕನ್ನಡ ಮಾತನಾಡುವುದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಇಂಗ್ಲಿಷ್ ಶಾಲೆಯಲ್ಲಿರುವ ಸೌಲತ್ತುಗಳನ್ನು ನೀಡಿ ಎಂದು ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ. ಕನ್ನಡ ಭಾಷೆಗಾಗಿ ಅವಶ್ಯಕತೆ ಬಿದ್ದರೆ ನಾನು ಆಮರಣಾಂತ ಉಪವಾಸ ಮಾಡಲು ಸಿದ್ಧ ಎಂದು ಘೋಷಿಸಿದರು.

ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಕನ್ನಡ ಉಳಿಸುವುದಕ್ಕೆ ವಿಧಾನ ಸೌಧ ಸುತ್ತಿದರೆ ಸಾಲದು. ಮುಖ್ಯವಾಗಿ ಕನ್ನಡ ಶಾಲೆಗಳ ಉಳಿವಿಗೆ ಆರ್ಥಿಕ ಬೆಂಬಲ ಬೇಕಾಗಿದೆ. ಮುಂದಿನ ಬಜೆಟ್ನಲ್ಲಿ ಕನ್ನಡ ಶಾಲೆಗಳಿಗಾಗಿಯೇ ಪ್ರತ್ಯೇಕ ಆಯವ್ಯಯ ಮಂಡಿಸಬೇಕು. ಮಹಿಳೆಯರಿಗೆ ಉಚಿತ ಬಸ್ ನೀಡುವುದಕ್ಕಿಂತ ಶಾಲಾ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆಯಾಗಬೇಕು ಎಂದರು.

ಹಿರಿಯ ಸಾಹಿತಿ ಡಾ. ದೊಡ್ಡರಂಗೆಗೌಡ ಮಾತನಾಡಿ, ಯಾವ ಸರ್ಕಾರಕ್ಕೂ ಕನ್ನಡ ಅದ್ಯತೆಯಾಗಿ ಉಳಿದಿಲ್ಲ. ಆಡಳಿತಕ್ಕೆ ಬೇಡದ ಮೇಲೆ ಇನ್ನಾರಿಗೆ ಬೇಕಾಗಿದೆ. ಕನ್ನಡ ಎನ್ನುವ ಸ್ಥಿತಿಗೆ ನಾವು ಬಂದಿದ್ದೇವೆ. ಪೋಷಕರು ತಮ್ಮಮಕ್ಕಳ ಭವಿಷ್ಯವನ್ನು ನೋಡುತ್ತಾರೆ. ಅದಕ್ಕಾಗಿಯೇ ಆಂಗ್ಲ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಸೂತ್ತಮುತ್ತಲಿನಲ್ಲಿ ಕನ್ನಡ ಶಾಲೆಗಳಿದ್ದರೂ ಮಕ್ಕಳನ್ನು ಕಳಿಸದ ಪರಿಸ್ಥಿತಿ ಬಂದು ಬಿಟ್ಟಿದೆ. ಅದಕ್ಕೆ ಕನ್ನಡ ಶಾಲೆಗಳನ್ನು ಮಾದರಿ ಶಾಲೆಯಾಗಿ ಮಾಡುವುದೊಂದೆ ಇದ್ದಕ್ಕೆ ಪರಿಹಾರವಾಗಿದೆ ಎಂದರು.

ಹಿರಿಯ ಲೇಖಕ ಪ್ರಧಾನ ಗುರುದತ್ತ ಮಾತನಾಡಿ, ಕನ್ನಡ ಶಾಲೆಗಳು ಸರಕಾರಿ ಅಧಿಕಾರಿಗಳಿಗೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಯಾರಿಗೂ ಬೇಕಾಗಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಇಂಗ್ಲಿಷ್ ಶೀಕ್ಷಣ ಸೂಕ್ತವಲ್ಲ. ಅದು ಕೇವಲ ಗಿಣಿ ಪಾಠ ಇದ್ದಂತೆ. ಅದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದಾದರೆ ನ್ಯಾಯಾಂಗದ ಮೂಲಕ ಸರಕಾರಕ್ಕೆ ಬರೆಹಾಕುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೇಲಿಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಪರಿಚಯಿಸಿದರು. ಆದರೆ ನಾವು ಸ್ವಾಭಿಮಾನಿ ಭಾರತೀಯರು, ಕನ್ನಡಿಗರು ವಿರೋಧಿಸುತ್ತಲೇ ಬಂದಿದ್ದೆವು. ಈ ಮಧ್ಯ ನಮ್ಮಲ್ಲಿ ಕನ್ನಡದ ತುಡಿತ ಕಡಿಮೆಯಾಗಿರುವುದು ವಿಷಾದನೀಯ. ಹೋರ ದೇಶಗಳಲ್ಲಿ ಕನ್ನಡ ಜನಪ್ರಿಯಗೊಳ್ಳುತ್ತಿದ್ದರೆ, ನಮ್ಮ ರಾಜ್ಯದಲ್ಲಿ ನಮ್ಮವರೇ ಅಸಡ್ಡೆ ತೊರಿಸುತ್ತಿದ್ದಾರೆ. ಆದ್ದರಿಂದ ಕನ್ನಡ ಶಾಲೆಗಳ ಉಳಿವಿಗೆ ಜನಾಂದೋಲನ ಒಂದೇ ಪರಿಹಾರ ಎಂದರು.

ಕನ್ನಡ ಹೋರಾಟಗಾರ ಬೀದರ್ ನ ರೇವಣ ಸಿದ್ದಪ್ಪ ಜಲಾದಿ ಮಾತನಾಡಿ, ಕನ್ನಡ ಶಾಲೆಗಳನ್ನು ಖಾಸಗಿಯವರು ಆರಂಭಿಸಲು ಮುಂದಾದರೆ ಸರಕಾರವೇ ಕತ್ತು ಹಿಚುಕುವ ಕೆಲಸ ಮಾಡುತ್ತಿದೆ. ನಿಯಮಗಳ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ತೆರಯುವಂತೆಯೂ ಇಲ್ಲ, ಇದ್ದ ಶಾಲೆಗಳನ್ನು ಉಳಿಸಿಕೊಂಡು ಹೊಗುವಂತೆಯೂ ಇಲ್ಲ ಎಂದು ಆರೋಪಿಸಿದರು.

ಮಾಜಿ ಜಿಲ್ಲಾ ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಮಾತನಾಡಿ, ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಲು ಪೋಷಕರು ಮನಸ್ಸು ಮಾಡಬೇಕು. ಅದಕ್ಕೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇರುವಂತೆ ಮಾಡಬೇಕು ಎಂದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರೆಗೆಪ್ಪ ಮಾತನಾಡಿ, ಕನ್ನಡ ಶಾಲೆಗಳು ಉಳಿಯಬೇಕು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಹೋರಾಟದಲ್ಲಿ ನಾವೇಲ್ಲಾ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಕರೆನೀಡಿದರು.

ಕನ್ನಡ ಹೋರಾಟಗಾರ್ತಿ ಕೆ.ಶರೀಫಾ ಮಾತನಾಡಿ, ಕನ್ನಡ ಶಾಲೆಗಳ ಅಧೋಗತಿಗೆ ಆಡಳಿತ ಮಾಡುವವರೇ ಕಾರಣ. ಎಲ್ಲಾ ರಾಜಕಾರಣಿಗಳು ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಕನ್ನಡ ಶಾಲೆಗಳು ಬೇಕಾಗಿಲ್ಲ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಮುಂದಾಳತ್ವದಲ್ಲಿ ಕನ್ನಡ ಶಾಲೆ ಉಳಿವಿಗೆ ಟೊಂಕ ಕಟ್ಟಿ ನಿಲ್ಲಬೇಕು. ಅದಕ್ಕೆ ಪ್ರತಿಯೊಬ್ಬರ ಬೆಂಬಲವೂ ಇರುವುದು ಎನ್ನುವ ಸರ್ವಾನುಮತದ ಅಭಿಪ್ರಾಯ ಚಿಂತನಾ ಸಭೆಯಲ್ಲಿ ಮೂಡಿ ಬಂದಿತು.

ಕನ್ನಡ ಶಾಲೆ ಉಳಿಕೆಗಾಗಿ ಮಹತ್ವದ ಎರಡು ನಿರ್ಧಾರ: ಚಿಂತನಾ ಸಭೆಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಎರಡು ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲಾಯಿತು. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕು, ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ನೇಮಕ ಮಾಡ ಬೇಕು ಎಂಬ ಅಗತ್ಯಗಳನ್ನು ಅನುಸರಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಲ್ಲಿಸ ಬೇಕು ಎಂದು ಸಭೆ ನಿರ್ಣಯಿಸಿತು. ಇದಕ್ಕೆ ಪಾಲಾದಾರರಾಗಲು ಸಭೆಯಲ್ಲಿದ್ದವರೆಲ್ಲರೂ ಒಮ್ಮೆತದಿಂದ ಒಪ್ಪಿಗೆ ಸೂಚಿಸಿದರು. ಈ ಕುರಿತು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲು ತಜ್ಞರ ಸಮಿತಿಯೊಂದನ್ನು ನೇಮಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

Leave a Reply