ಬೆಂಗಳೂರು: ಸುಗಮ ಆಡಳಿತ ಹಾಗೂ ಶಾಸಕರ ಅಸಮಾಧಾನ ತಣಿಸುವ ದೃಷ್ಟಿಯಿಂದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಮೊದಲ ಹಂತದಲ್ಲಿ 39 ಶಾಸಕರಿಗೆ ಅಧಿಕಾರ ಸಿಗಲಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಭಾವ್ಯರ ಪಟ್ಟಿ ಸಿದ್ದಪಡಿಸಿ, ವರಿಷ್ಠರ ಅನುಮೋದನೆಗೆ ರವಾನಿಸಲು ನಿರ್ಧಾರ ಮಾಡಿದರು.
ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಅಧಿಕಾರ ನೀಡುತ್ತಿದ್ದು, ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಅಥವಾ ಅದರ ನಂತರ ನೇಮಕ ಆದೇಶ ಹೊರಬೀಳುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಪ್ರಸಾದ್ ಅಬ್ಬಯ್ಯ, ಮಹಾಂತೇಶ ಕೌಜಲಗಿ, ರಮೇಶ್ ಬಂಡಿಸಿದ್ದೇಗೌಡ, ಪ್ರಕಾಶ್ ಕೋಳಿವಾಡ, ವಿಜಯಾನಂದ ಕಾಶಪ್ಪನವರ್, ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸನಗೌಡ ದದ್ದಲ್, ಯಶವಂತರಾಯ ಗೌಡ ವಿಠಲಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ಶ್ರೀನಿವಾಸ್ ಮಾನೆ, ಜಿ.ಎನ್.ಗಣೇಶ್, ಈ ತುಕಾರಾಮ್, ಟಿ.ರಘುಮೂರ್ತಿ, ಬೇಳೂರು ಗೋಪಾಲಕೃಷ್ಣ, ಟಿ.ಡಿ.ರಾಜೇಗೌಡ, ಡಾ.ರಂಗನಾಥ್, ಎಸ್.ಆರ್.ಶ್ರೀನಿವಾಸ್, ಕೆ.ವೈ.ನಂಜೇಗೌಡ, ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ, ಬಿ.ಶಿವಣ್ಣ, ಎಚ್.ಸಿ.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ವಿನಯ್ಕುಲಕರ್ಣಿ, ನರೇಂದ್ರಸ್ವಾಮಿ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಯ್ಕೆ ಪಟ್ಟಿ ಇನ್ನೂ ಅಂತಿಮವಾಗಿಲ್ಲದಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.




