ಜಾತಿ ಗಣತಿ ಕುರಿತು ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದೇನು?

3 years ago

#HCMahadevappa #castecensus

ಬೆಂಗಳೂರು: ಜಾತಿ ಗಣತಿಗೆ ಸಂಬಂಧಿಸಿದಂತೆ ಇದೀಗ ದೇಶದಲ್ಲಿ ಚರ್ಚೆಗಳು ಮೊದಲಾಗಿದ್ದು, ಜಾತಿ ಗಣತಿಯಿಂದಾಗಿ ಜಾತಿ ಜಾತಿಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಅತ್ಯಂತ ತಪ್ಪಾದ ಮತ್ತು ವಾಸ್ತವಕ್ಕೆ ದೂರವಾದ ಸಂಗತಿಯನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಕರಾರು ತೆಗೆದಿರುವುದು ಮತ್ತು ಇತರರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ಸಿ.ಮಹದೇವಪ್ಪ, ಭಾರತವು ಸಂವಿಧಾನಾತ್ಮಕ ದೇಶವಾಗಿದ್ದರೂ ಸಹ ಇಲ್ಲಿ ಜಾತಿಯ ಮೇಲರಿಮೆ ಪ್ರಜ್ಞೆಯೇ ಮೇಲುಗೈ ಸಾಧಿಸಿರುವುದು ಅತಿದೊಡ್ಡ ವಾಸ್ತವವಾಗಿದ್ದು, ತುಳಿತಕ್ಕೆ ಒಳಪಟ್ಟ ವರ್ಗಗಳು ಅದೇ ರೀತಿ ಇರಬೇಕು ಎಂಬ ಮನಸ್ಥಿತಿಯು ಇವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಅಸಮಾನತೆಗಳ ಸಂದರ್ಭದಲ್ಲಿ ಸಮಾನ ಅವಕಾಶಗಳ ಸೃಷ್ಟಿ ಮಾಡುವುದು ಸಂವಿಧಾನದ ಆಶಯವಾಗಿದೆ. ಅದರಲ್ಲೂ ಸಾಮಾಜಿಕವಾಗಿ ಹಲವಾರು ಜಾತಿಯ ಅಸಮಾನತೆಗಳನ್ನು ಈಗಲೂ ಎದುರಿಸುತ್ತಿರುವ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಯಾವ ಜಾತಿಯ ಜನರ ಪರಿಸ್ಥಿತಿ ಏನಾಗಿದೆ, ಅವರ ಬದುಕಿನ ಸ್ಥಿತಿ ಗತಿ ಏನು? ಸಮಾನ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ಅವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು? ಜನರ ಹಕ್ಕುಗಳು ಮತ್ತು ಅವಕಾಶಗಳು ಅವರಿಗೆ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಮಾಡುತ್ತಿರುವುದೇ ಈ ಜಾತಿ ಗಣತಿ ಎಂದಿದ್ದಾರೆ.

ಈ ಜಾತಿ ಗಣತಿಯಿಂದಾಗಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ತುಳಿತಕ್ಕೆ ಒಳಪಟ್ಟ ಸಮುದಾಯಗಳ ಸ್ಥೂಲವಾದ ಚಿತ್ರಣವು ಸಿಗಲಿದೆ. ಆದರೆ ಜಾತಿಯೇ ರಾಜಕೀಯಕ್ಕೆ ಪ್ರಬಲ ಅಸ್ತ್ರ ಆಗಿರುವ ಈ ವೇಳೆ, ತಳ ವರ್ಗಗಳ ಏಳಿಗೆಯ ಕುರಿತು ಆರೋಗ್ಯಕರವಾಗಿ ಚಿಂತಿಸದ ಕೆಲವು ಕುತ್ಸಿತ ಮನಸುಗಳು ಜಾತಿ ಗಣತಿಯ ಕುರಿತು ತಪ್ಪಾಗಿ ಬಿಂಬಿಸಲು ಹೊರಟಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಉತ್ತಮ ಉದ್ದೇಶ ಹೊಂದಿರುವ ಜಾತಿ ಗಣತಿಯನ್ನು ಮಾಡುವುದರಿಂದ ಜಾತಿಗಳ ನಡುವೆ ಕಂದರ ಹೆಚ್ಚಾಗುತ್ತದೆ ಎಂದು ಹೇಳುತ್ತಿರುವ ಜನರು ದಲಿತರ ಮೇಲೆ ದೌರ್ಜನ್ಯಗಳು ಆಗುವಾಗ, ಸಾಮಾಜಿಕ ಶೋಷಣೆಯ ಕಾರಣಕ್ಕೆ ಅವರ ಘನತೆಯ ಬದುಕುವ ವಾತಾವರಣ ಹಾಳಾದಾಗ ಎಲ್ಲಿರುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಹೀಗಾಗಿ ರಾಜಕೀಯದ ಕಾರಣಕ್ಕಾಗಿ ಯಾರು ಏನೇ ಹೇಳಿದರೂ ಕೂಡಾ ಜಾತಿ ಗಣತಿ ಎಂಬುದು ನಮ್ಮ ಸಮುದಾಯಗಳ ಸಾಮಾಜಿಕ ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಯನ್ನು ತಿಳಿದು ಅವರಿಗೆ ನೆರವಾಗಲು ಇರುವ ಸಮಾನ ಅವಕಾಶಗಳ ಕೀಲಿಕೈಯೇ ಹೊರತು, ಸಾಮಾಜಿಕ ವಿಭಜನೆಯ ಸಂಗತಿ ಅಲ್ಲ ಎಂದಿದ್ದಾರೆ.

ಇದನ್ನು ನಮ್ಮ ಜನ ಸಮುದಾಯಗಳು ಅರ್ಥ ಮಾಡಿಕೊಂಡು ಹೆಚ್ಚು ಗಟ್ಟಿಯಾದ ದನಿಯಲ್ಲಿ ಇದರ ಬಗ್ಗೆ ಮಾತನಾಡಬೇಕು ಜಾಗೃತರಾಗಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply