ಅಂಬೇಡ್ಕರ್, ಗಾಂಧಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು: ಸಿದ್ದರಾಮಯ್ಯ

3 months ago

ಬೆಂಗಳೂರು: ದಲಿತರು ಪತ್ರಕರ್ತರಾಗುವುದು ಬಹಳ ಅಪರೂಪ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಯವರು ಪತ್ರಕರ್ತರಾಗಿದ್ದರು. ಎಲ್ಲರೂ ಅವರಂತಾಗಲು ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಅದನ್ನು ಶಿವಕುಮಾರ್ ಅವರು ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸಿ ಪರಿಹಾರಗಳನ್ನು ಹುಡುಕುವ ಕೆಲಸವನ್ನು ಪತ್ರಕರ್ತರಾಗಿ ಶಿವಕುಮಾರ್ ಸದಾ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ ನೂತನ ಸದಸ್ಯ ಡಾ.ಕೆ.ಶಿವಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ದಲಿತರ ಪರವಾಗಿ ವಿಧಾನ ಪರಿಷತ್ ನಲ್ಲಿ ಶಿವಕುಮಾರ್ ಕೆಲಸ ಮಾಡಬೇಕು. ಧ್ವನಿಯಿಲ್ಲದವರ, ಅವಕಾಶಗಳಿಂದ ವಂಚಿತರಾದವರ ಪರವಾಗಿ ಶಿವಕುಮಾರ್ ಕೆಲಸ ಮಾಡಲಿ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು  ವರ್ಷಗಳಾದರೂ ಎಸ್.ಸಿ.ಎಸ್.ಪಿ/ಟಿ.ಎಸ್‌.ಪಿ ಯೋಜನೆಯನ್ನು ರೂಪಿಸಿಲ್ಲ. ಬಡ್ತಿಯಲ್ಲಿ ಮೀಸಲಾತಿಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ರಾಜ್ಯದಲ್ಲಿ ಸಮಿತಿ ರಚಿಸಿ ವರದಿಯನ್ನು ಜಾರಿ ಮಾಡಲಾಯಿತು, ಊರ್ಜಿತವೂ ಆಯಿತು. ಕೇಂದ್ರ  ಸರ್ಕಾರ ಏಕೆ ಇದನ್ನು ಜಾರಿ ಮಾಡಬಾರದು? ದಲಿತ ಸಮುದಾಯಕ್ಕೆ ಸೇರಿದವರೇ ಇದರ ವಿರುದ್ಧವಾಗಿ ವಾದ ಮಾಡುವುದು ಇದೆ ಎಂದರು.

ಮನರೇಗಾ ಯೋಜನೆಯನ್ನು ಕೈಬಿಟ್ಟು ವಿಬಿ ಜಿ ರಾಮ್ ಜಿ ಎಂದು ತಂದಿದ್ದಾರೆ. ನಮ್ಮಲ್ಲಿ ಎಸ್.ಸಿ ಹಾಗೂ ಎಸ್ ಟಿ ಸಮುದಾಯದ ಫಲಾನುಭವಿಗಳು ಮಾತನಾಡಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೃತ್ತ ನೌಕರರ ಪಿಂಚಣಿ ನೀಡಲು ಅನುದಾನ ಬಿಡುಗಡೆ ಜೊತೆಗೆ ಮೈಸೂರು ವಿವಿ ಸರಿಪಡಿಸಲು ವಿಶೇಷ ಗಮನ ಹರಿಸಿ, ಕ್ರಮ ವಹಿಸಲಾಗುವುದು ಎಂದರು.

Leave a Reply