ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾವು ಬಿಜೆಪಿ ಸಂಘಟನೆ ಮಾಡಿದ್ದೇವೆ: ಬಸನಗೌಡ ಪಾಟೀಲ್ ಯತ್ನಾಳ್

1 year ago

ಬೆಂಗಳೂರು: ಪಕ್ಷದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾವು ಬಿಜೆಪಿ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕೆ? ಎಂದು ಕಿಡಿಕಾರಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಕುರಿತು ನಾನು ವಿಜಯೇಂದ್ರನಂತಹ ಬಚ್ಚಾ ಅವರಿಂದ ನಾನು ಕಲಿಯಬೇಕಿಲ್ಲ. ಏಕೆಂದರೆ ಅವರಪ್ಪ ಯಡಿಯೂರಪ್ಪನವರ ಜೊತೆ ಪಕ್ಷ ಕಟ್ಟಿದ್ದೇನೆ. ನಾನು ಬಿಜೆಪಿಯಲ್ಲಿ ಸಂಘಟನೆ ಮಾಡುತ್ತಿದ್ದಾಗ ವಿಜಯೇಂದ್ರ ಚಡ್ಡಿ ಹಾಕಿ ತಿರುಗಾಡುತ್ತಿದ್ದ ಎಂದರು.

ನೀವು ನಮನ್ನು ಪಕ್ಷದಿಂದ ಹೊರ ಹಾಕುವುದಿದ್ದರೆ ಹಾಕಿ ನಮ್ಮದೇನೂ ತಕರಾರು ಇಲ್ಲ. ಎಲ್ಲದಕ್ಕೂ ನಾವು ಸಜ್ಜಾಗಿದ್ದೇವೆ. ನಮಗೆ ಯಾರ ಭಯವೂ ಇಲ್ಲ. ನಿಮಪ್ಪನ ಮನೆಯಲ್ಲಿ ಭಯ ಇರಬಹುದೇ ಹೊರತು ನಮಗೇನೂ ಭಯವಿಲ್ಲ ಎಂದರು.
 
ನಾವು ಎಲ್ಲದಕ್ಕೂ ಸಿದ್ದರಾಗಿಯೇ ಯುದ್ಧ ಸಾರಿದ್ದೇವೆ. ಮುಂದೇನಾಗುತ್ತದೆಯೋ ಗೊತ್ತಿಲ್ಲ. ಬಿಜೆಪಿಯೊಳಗೆ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು. ವಿಜಯೇಂದ್ರ ಕಾರ್ಯ ವೈಖರಿ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಪಕ್ಷದ ಹಿರಿಯರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅವರ ಚೇಲಾಗಳಿಗೆ ಸಮಾಧಾನ ಇದ್ದರೂ ಇರಬಹುದು ಎಂದರು.

ವಿಜಯೇಂದ್ರ ಅವರ ಅಸಲಿ ಬಣ್ಣ ಬಯಲಾಗುತ್ತಿದೆ. ಜಿಲ್ಲಾಧ್ಯಕ್ಷರ ನೇಮಕ ಹೇಗೆ ಆಗಿದೆ ಎಲ್ಲಾ ವಿಚಾರಗಳೂ ಗೊತ್ತಾಗುತ್ತಿವೆ. ವಿಜಯೇಂದ್ರ ಅವರಿಗೆ ಸಲಹೆ ಕೊಡುತ್ತೇನೆ ಯಾಕೆ ಸುಮನೆ ಸರ್ಕಸ್ ಮಾಡಿತ್ತೀರಿ. ನೇರವಾಗಿ ರಾಧಾ ಮೋಹನ್ ದಾಸ್ ಅವರ ಬಳಿ ಮಾತಾಡಿ. ಯಾವ ನಿಟ್ಟಿನಲ್ಲಿ ಪಕ್ಷ ಹೋಗುತ್ತಿದೆ ನೋಡಿ. ಅಪ್ಪ, ಮಗ ಮತ್ತೊಬ್ಬ ಮಗ ನೀವೆ ಎಲ್ಲಾ ಇದ್ದು ಬಿಡಿ ಎಂದರು.

ನಡೆಯಲಿರುವ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ. ವಿಜಯೇಂದ್ರ ಅವರ ಅಧ್ಯಕ್ಷತೆಯನ್ನೂ ಒಪ್ಪಲು ಸಾಧ್ಯವಿಲ್ಲ. ಸುತಾರಾಂ ಒಪ್ಪುವುದಿಲ್ಲ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದರು.

ಮುಡಾ ಪ್ರಕರಣದಲ್ಲಿ ಮೈಸೂರಿಗೆ ಪಾದಯಾತ್ರೆ ತಲುಪುವುದರೊಳಗೆ ರಾಜೀನಾಮೆ ಕೊಡಬೇಕು ಅಂತ ವಿಜಯೇಂದ್ರ ಹೇಳಿದ್ರು. ಆದರೆ, ವಿಜಯೇಂದ್ರ ಮೇಲಿರುವ ಆರೋಪ ಹೊರ ತೆಗೆದುಬಿಟ್ರೆ ಅವರ ಕಥೆ ಮುಗಿದೇ ಹೋಗುತ್ತದೆ. ಅದ್ಯಾಕೆ ಸಿದ್ದರಾಮಯ್ಯನವರು ಸುಮ್ಮನಿದ್ದಾರೋ? ಇಲ್ಲ, ಸಿದ್ದರಾಮಯ್ಯರದ್ದು ಏನಾದ್ರೂ ವಿಜಯೇಂದ್ರ ಹತ್ರ ಇದೆಯೋ ಗೊತ್ತಿಲ್ಲ. ಅದಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣ್ತಿದೆ ಎಂದರು.

Leave a Reply