ಇನ್ನೊಂದು ಮಸೀದಿ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ: ಅಸಾದುದ್ದೀನ್ ಓವೈಸಿ

2 years ago

ಲಖ್ನೋ: ಬಾಬರಿ ಮಸೀದಿ ಕಳೆದುಕೊಂಡಿದ್ದೇವೆ, ಇನ್ನೊಂದು ಮಸೀದಿ ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ವಾರಾಣಸಿಯ ಜಿಲ್ಲಾ ಕೋರ್ಟ್‌ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಐಎಂಐಎಂ ಸಂಸದ ಓವೈಸಿ, ಇದು (ಕೋರ್ಟ್ ಕ್ರಮ) ಪೂಜಾ ಸ್ಥಳಗಳ ಕಾಯ್ದೆ-1991ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಂಪೂರ್ಣ ತಪ್ಪು ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರಾಣಸಿಯ ಜಿಲ್ಲಾ ಕೋರ್ಟ್‌ ನ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿಗಳ ಸಮಿತಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಉತ್ತರ ಪ್ರದೇಶದ ಆದಿತ್ಯನಾಥ ನೇತೃತ್ವದ ಸರ್ಕಾರ ಧಾರ್ಮಿಕ ಸ್ಥಳಗಳ ಸ್ಥಿತಿ ಬದಲಿಸಲು ಯತ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಬದಲಾವಣೆ ಮಾಡುವವರು ಆಗಸ್ಟ್ 15, 1947ರ ಯಥಾಸ್ಥಿತಿಯನ್ನು ಅನುಸರಿಸಬೇಕು ಎಂದು ಪೂಜಾ ಸ್ಥಳಗಳ ಕಾಯ್ದೆ – 1991 ಹೇಳುತ್ತದೆ. ಅದನ್ನು ಮೀರಿದ್ದು ಕಂಡುಬಂದಲ್ಲಿ ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು ಎಂದರು.

Leave a Reply