ಬೆಂಗಳೂರು: ಬಂಜಾರ ಸಮುದಾಯ ಸ್ವಾಭಿಮಾನಿಗಳಾಗಿ, ಸ್ವತಂತ್ರವಾಗಿ ಒಂದು ಕಡೆ ನೆಲೆಸಿ ಅಭಿವೃದ್ಧಿ ಕಾಣುವಂತೆ ಪ್ರೇರೇಪಿಸಿದವರು ಸಂತ ಸೇವಾಲಾಲ್ ಅವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಮೊದಲು ಆದೇಶಿಸಿದ್ದೇ ನಮ್ಮ ಸರ್ಕಾರ. ಬಾಕಿ ಉಳಿದಿರುವ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಎನ್ನುವ ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದರು.
ನಮ್ಮ ಸರ್ಕಾರ ಇದ್ದಾಗಲೇ ಸರ್ಕಾರವೇ ಸೇವಾಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದೆವು. ಸೇವಾಲಾಲ್ ಅವರು ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅವರು ಮನುಷ್ಯ ಸಮಾಜದ ಬೆಳಕು ಎಂದರು.
ಬಂಜಾರ ಸಮುದಾಯ ವಿದ್ಯಾವಂತರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಪ್ರೇರಣೆ ಆದ ದಾರ್ಶನಿಕ ಸೇವಾಲಾಲ್ ಅವರನ್ನು ಸರ್ಕಾರವೇ ಮುಂದೆ ನಿಂತು ಗೌರವಿಸಬೇಕು ಎನ್ನುವ ಉದ್ದೇಶದಿಂದಲೇ ನಮ್ಮ ಸರ್ಕಾರ ಸೇವಲಾಲ್ ದಿನಾಚರಣೆಯನ್ನು ಆರಂಭಿಸಿತು ಎಂದರು.
ಸೇವಾಲಾಲ್ ಅವರ ಜನ್ಮಸ್ಥಳ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರದಲ್ಲೂ ಅಗತ್ಯ ಅನುದಾನ ಒದಗಿಸಲಾಗುವುದು. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಅಗತ್ಯ ಅನುದಾನ ನೀಡಿದ್ದೆ ಎಂದರು.
ವಾಸಿಸಿರುವವನೇ ಮನೆಯ ಒಡೆಯ ಎನ್ನುವ ಕಾನೂನು ತಂದಿದ್ದು ನಮ್ಮ ಸರ್ಕಾರ. ಇದರಿಂದ ತಾಂಡಾಗಳಲ್ಲಿ ನೆಲೆಸಿದ್ದ ಬಂಜಾರ ಸಮುದಾಯಕ್ಕೆ ಭೂಒಡೆತನದ ಹಕ್ಕು ದೊರೆತು ಸಾಕಷ್ಟು ಅನುಕೂಲವಾಯಿತು ಎಂದರು.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಮೊದಲಾದವರು ಹಾಜರಿದ್ದರು.




