ಸೂರಜ್ ರೇವಣ್ಣಗೆ ಪುರುಷತ್ವ ಪರೀಕ್ಷೆ

2 years ago

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್. ಡಿ.ರೇವಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಪುರುಷತ್ವ ಪರೀಕ್ಷೆ ನಡೆಸಲಾಯಿತು.

ಬೆದರಿಕೆಯೊಡ್ಡಿ ಸಲಿಂಗಕಾಮಕ್ಕೆ ಬಳಸಿಕೊಳ್ಳುವ ಮೂಲಕ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಸಿಐಡಿ ಕಸ್ಟಡಿಯಲ್ಲಿರುವ ಸೂರಜ್ ರೇವಣ್ಣ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಿತು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಇವರ ತಮ್ಮ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಆದರೆ ಇವರಿಗೆ ಮಾಡಲಾಗದ ಪರೀಕ್ಷೆ ಮತ್ತು ಸೂರಜ್ ರೇವಣ್ಣ ಅವರಿಗೆ ಮಾಡಿದ ಪರೀಕ್ಷೆ ಸಂಪೂರ್ಣ ಭಿನ್ನವಾಗಿದೆ.

ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸೂರಜ್ ಮೇಲೆ ಬಂದಿರುವ ಆರೋಪ ಬೆದರಿಕೆ ಹಾಕಿ ಸಲಿಂಗಕಾಮ ಎಸಗಿದ್ದಾಗಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಇದು ತಮ್ಮ ಪ್ರಜ್ವಲ್ಗೆ ನಡೆಸಿದ ಪರೀಕ್ಷೆಗಳಿಗಿಂತ ಭಿನ್ನ. ಪ್ರಜ್ವಲ್ ಪ್ರಕರಣದಲ್ಲಿ ಸಂತ್ರಸ್ತರು ಮಹಿಳೆಯರಾಗಿದ್ದರು. ಸೂರಜ್ ಪ್ರಕರಣದಲ್ಲಿ ಸಂತ್ರಸ್ತ ಪುರುಷನಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಸೂರಜ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಯಿತು.

ಐಪಿಸಿ ಸೆಕ್ಷನ್ 377 ಹಾಕಿರುವ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಬಹಳ ಮುಖ್ಯವಾಗಿದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯೂ ಮುಖ್ಯವಾಗಿದೆ. ಸಂತ್ರಸ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ. ಆರೋಪಿ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿ ಇದ್ದಾರೆ.

ಪ್ರಜ್ವಲ್ ರೇವಣ್ಣಗೆ ಮೂರು ಬಾರಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, “ಪದೇ ಪದೆ ಖಾಸಗಿ ಅಂಗವನ್ನು ತೋರಿಸಲು ಮುಜುಗರವಾಗುತ್ತದೆ” ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ಅಲವತ್ತುಕೊಂಡಿದ್ದರು. ಇದೀಗ ಅಣ್ಣನೂ ಈ ಪರೀಕ್ಷೆಗೆ ಗುರಿಯಾಗಿದ್ದಾರೆ. ಸೂರಜ್ ಎಷ್ಟು ಬಾರಿ ಪರೀಕ್ಷೆಗೊಳಗಾಗಲಿದ್ದಾರೆ ಎಂದು ಕಾದುನೋಡಬೇಕಿದೆ.

ಇನ್ನು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್ ವಿರುದ್ಧವೂ ಸಂತ್ರಸ್ತ ದೂರು ದಾಖಲಿಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿದೆ. ಶಿವಕುಮಾರ್ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಗ್ರಾಮದವನು. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ದೂರು ನೀಡಿದ ಬಳಿಕ, ಶಿವಕುಮಾರ್ ನಾಪತ್ತೆಯಾಗಿದ್ದಾನೆ.

Leave a Reply