ಜನರ ಆಶೋತ್ತರಗಳಿಗೆ ಸಂವೇದನೆಯಿಂದ ಸ್ಪಂದಿಸುವುದೇ ನಿಜವಾದ ಆಡಳಿತ: ಡಾ.ಕೆ.ಸುಧಾಕರ್‌

4 years ago

ಬೆಂಗಳೂರು: ಸಾಮಾನ್ಯ ಜನರ ಆಶೋತ್ತರಗಳಿಗೆ ಸಂವೇದನೆಯಿಂದ ಸ್ಪಂದಿಸಿ, ಜನಪರ ಆಡಳಿತವನ್ನು ನೀಡುವುದೇ ನಿಜವಾದ ಪ್ರಜಾಪ್ರಭುತ್ವ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಚಿವಾಲಯದಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ, ‘ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು  ಸರ್ಕಾರದ ನಡುವಿನ ಸಮನ್ವಯತೆ’ ಗಾಗಿ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜಧರ್ಮ, ರಾಮರಾಜ್ಯ ಹಾಗೂ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆಗಳ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ಇದೆ. ಚಾಣಕ್ಯ ನೀತಿ, ಶುಕ್ರ ನೀತಿ ಸಾರ, ರಾಮಾಯಣ, ಮಹಾಭಾರತವನ್ನು ಭಾರತೀಯರು ಓದಿಕೊಂಡು ಬಂದಿದ್ದಾರೆ. ಬೌದ್ಧ ಧರ್ಮೀಯರ ಕೃತಿಗಳಲ್ಲಿ ಕೂಡ ಉತ್ತಮ ಆಡಳಿತವೆಂದರೆ ಏನು ಮತ್ತು ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸಲಾಗಿದೆ. ಹೀಗಾಗಿ ಉತ್ತಮ ಆಡಳಿತದ ಬಗ್ಗೆ ಹಿಂದಿನಿಂದಲೂ  ಭಾರತೀಯರಿಗೆ ಅನುಭವ ಇದೆ ಎಂದರು.

ರಾಜಧರ್ಮವು, ರಾಜನ ಆಡಳಿತದ ಉದ್ದೇಶ ಮತ್ತು ಅವರ ಮಂತ್ರಿಗಳ ಆಡಳಿತ ನೀತಿಯ ಬಗ್ಗೆ ತಿಳಿಸಿಕೊಡುತ್ತಿತ್ತು. ಕರ್ನಾಟಕವೂ ಆಡಳಿತ ನೀತಿಗೆ ಸಾಕಷ್ಟು ಕೊಡುಗೆ ಕೊಟ್ಟಿದೆ. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರಾಗಿ ಅನುಭವ ಮಂಟಪದ ಮೂಲಕ ನಿಜವಾದ ಪ್ರಜಾಪ್ರಭುತ್ವದ ಮಾದರಿಗೆ ಬುನಾದಿ ಹಾಕಿ ಕೊಟ್ಟಿದ್ದರು. ಪ್ರಜಾಪ್ರಭುತ್ವದ ಬಗ್ಗೆ ಭಾರತ ಬೇರೆಲ್ಲೂ ನೋಡಬೇಕಿಲ್ಲ. ಭಾರತದ ಕಡೆ ಎಲ್ಲರೂ ನೋಡುವಂತಹ ಇತಿಹಾಸವಿದೆ ಎಂದರು.

ಬಸವಣ್ಣನವರ ʼಕಾಯಕವೇ ಕೈಲಾಸʼ ಎನ್ನುವುದು ಕೆಲಸದ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಬಜೆಟ್‌ ಭಾಷಣದಲ್ಲಿ ʼಕಾಯಕವೇ ಕೈಲಾಸʼ ಎಂಬುದನ್ನು ಪ್ರಸ್ತಾಪ ಮಾಡಿದ್ದರು. ಉತ್ತಮ ಆಡಳಿತ ಎಂದರೆ, ಸಾಮಾನ್ಯ ಮನುಷ್ಯನಿಗೆ ಏನು ಅಗತ್ಯವಿದೆ, ಸಮಸ್ಯೆಗಳೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಸುಧಾರಿಸಲು ಕೈಗೊಳ್ಳುವ ಕ್ರಮವೇ ಆಗಿದೆ ಎಂದರು.

ಸ್ವಚ್ಛ ಭಾರತ್‌ -ವಿಶ್ವಕ್ಕೆ ಮಾದರಿ

ನ್ಯಾಯ ವಿಳಂಬವಾಗಿದೆ ಎಂದರೆ, ನ್ಯಾಯ ನಿರಾಕರಿಸಲಾಗಿದೆ ಎಂದೇ ಅರ್ಥ. ಪ್ರಾಮಾಣಿಕತೆ, ಪಾರದರ್ಶಕತೆ ಆಡಳಿತದಲ್ಲಿ ತುಂಬಾ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಮಾದರಿ ಆಡಳಿತ ನೀಡುತ್ತಿದ್ದು, ಜನರ ಆಶೋತ್ತರಗಳಿಗಾಗಿ ಆಡಳಿತ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛ ಭಾರತ ಮಿಷನ್‌ನಂತಹ ಕಾರ್ಯಕ್ರಮ ಇಡೀ ದೇಶಕ್ಕೆ ಮಾತ್ರವಲ್ಲದೆ, ವಿಶ್ವಕ್ಕೇ ಮಾದರಿಯಾಗಿದೆ. 10 ಕೋಟಿ ಶೌಚಾಲಯಗಳನ್ನು ಕಟ್ಟಿರುವುದು ಕೇವಲ ಬದಲಾವಣೆಯಲ್ಲ, ಅದು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದರು.

ನಾಯಕ ಕನಸು ಕಾಣಬೇಕು ಹಾಗೂ ಅದು ಅಭಿವೃದ್ಧಿಗೆ ಪೂರಕವಾಗಿರಬೇಕು.  ಸಿಎಂ ಬಸವರಾಜ ಬೊಮ್ಮಾಯಿ ಕೂಡ ಈ ದೃಷ್ಟಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಾಭಿವೃದ್ಧಿ ಕಡೆ ಸಾಕಷ್ಟು ಗಮನ ಕೊಡುತ್ತಿದ್ದಾರೆ. 10ನೇ ತರಗತಿ ಉತ್ತೀರ್ಣರಾದ ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿರುವುದು ಇದಕ್ಕೆ ಉತ್ತಮ ಉದಾಹರಣೆ.  ಆರೋಗ್ಯ ವಲಯವೂ ಸಾಕಷ್ಟು ಅಭಿವೃದಿಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಆದ ಅಭಿವೃದ್ಧಿಯೇ ಇದಕ್ಕೆ ದೊಡ್ಡ ಉದಾಹರಣೆ. ಭಾರತ ಆರೋಗ್ಯ ಅಭಿವೃದ್ಧಿಯಲ್ಲಿ ವಿಶ್ವದ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ 30%-40% ಲಸಿಕೆ ನೀಡಿವೆ. ಆದರೆ ಭಾರತದಲ್ಲಿ 90% ಕ್ಕೂ ಅಧಿಕ, ಅಂದರೆ ಸುಮಾರು 200 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಜನರು ಸರ್ಕಾರದ ಜೊತೆ ಕೈ ಜೋಡಿಸಿದಾಗ ಮಾತ್ರ ಇಂತಹ ಕಾರ್ಯ ನಡೆಯಲು ಸಾಧ್ಯ ಎಂದರು.

ನವೋದ್ಯಮಗಳ ಹಾಟ್‌ ಸ್ಪಾಟ್‌ ಬೆಂಗಳೂರು

ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಹೀಗೆ ಹತ್ತು ಹಲವು ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಆಡಳಿತ ವಿಕೇಂದ್ರಿಕರಣದ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಮಾದರಿಯಾಗಿದೆ. ಇಂದು ನವೋದ್ಯಮಗಳು ಬೆಂಗಳೂರನ್ನು ʼಹಾಟ್‌ ಸ್ಪಾಟ್‌ʼ ಆಗಿ ಪರಿಗಣಿಸಿ ಆಯ್ಕೆ ಮಾಡಿಕೊಳ್ಳುತ್ತಿವೆ. ಬೆಂಗಳೂರಲ್ಲೇ 13 ಸಾವಿರ ಹೊಸ ಕಂಪನಿಗಳಿವೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಿದೆ. ಆರ್‌& ಡಿ ಯಿಂದ ಆರಂಭವಾಗಿ ಎಲ್ಲಾ ರೀತಿಯಲ್ಲೂ ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿದೆ. ಉತ್ತಮ ಆಡಳಿತದಲ್ಲಿ accountability, efficiency, effectivenecy ಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಸುಧಾರಿಸಿದರೆ, ದೇಶ ಸುಧಾರಿಸುತ್ತದೆ. ಜನರ ಆರೋಗ್ಯವೇ ಬಹುಮುಖ್ಯ. ಫಿಟ್‌ ಇಂಡಿಯಾದಿಂದ ಮಾತ್ರ ಹೊಸ ಭಾರತ ಸೃಷ್ಟಿಯಾಗುತ್ತದೆ ಎಂದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಹಾಜರಿದ್ದರು.

Leave a Reply