ಟ್ಯಾಂಕರ್ ಮಾಫಿಯಾಗೆ ಸಂಪೂರ್ಣ ಶರಣಾಗಿ ಸುಲಿಗೆ ಮಾಡಲು ಕೈಜೋಡಿಸಿದಂತಿದೆ: ಆರ್.ಅಶೋಕ

2 years ago

ಬೆಂಗಳೂರು: ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲಾವಾಗಿರುವ ಸಿಎಂ @siddaramaiah ಹಾಗೂ ಡಿಸಿಎಂ @DKShivakumar ಅವರು ಟ್ಯಾಂಕರ್ ಮಾಫಿಯಾಗೆ ಸಂಪೂರ್ಣ ಶರಣಾಗಿ ಜನರನ್ನು ಸುಲಿಗೆ ಮಾಡಲು ತಾವೂ ಕೈಜೋಡಿಸಿದಂತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗಡುವು ಮುಗಿದಿದ್ದರೂ ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಅರ್ಧಕ್ಕರ್ಧದಷ್ಟು ಖಾಸಗಿ ಟ್ಯಾಂಕರ್ ಗಳು ಇನ್ನೂ ನೋಂದಣಿಯೇ ಮಾಡಿಕೊಂಡಿಲ್ಲ. ಕಾಟಾಚಾರಕ್ಕೆ ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್ ಗಳು ಸರ್ಕಾರ ನಿಗದಿ ಮಾಡಿರುವ ದರಕ್ಕೆ ನೀರು ಕೊಡುತ್ತಿಲ್ಲ ಎಂದಿದ್ದಾರೆ.

ಇಷ್ಟೆಲ್ಲಾ ಗೊಂದಲಗಳಿಂದ ನೀರಿಲ್ಲದೆ ಬೆಂಗಳೂರಿನ ಜನತೆ ಪರದಾಡುತ್ತಿದ್ದರೆ @INCKarnataka ಸರ್ಕಾರ ಏನೂ ಆಗಿಲ್ಲವೆಂಬಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರಕ್ಕೆ ನಿಜವಾಗಲೂ ನೀರಿನ ಸಮಸ್ಯೆ ಬಗೆಹರಿಸುವ ಬದ್ಧತೆ ಇದ್ದರೆ ನೊಂದಣಿ ಮಾಡಿಕೊಳ್ಳದ, ಸರ್ಕಾರದ ನಿಯಮ ಪಾಲಿಸದ ಟ್ಯಾಂಕರ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ವಾರ್ಡ್ ಗಳಲ್ಲೂ ಮಾರ್ಷಲ್ ಗಳನ್ನು ನೇಮಿಸಿ ಟ್ಯಾಂಕರ್ ಗಳ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದ್ದಾರೆ.

ಈಗಿರುವ ಸಹಾಯವಾಣಿ ಜನರಿಗೆ ಸ್ಪಂದಿಸಲು ವಿಫಲವಾಗಿದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಸಹಾಯದಿಂದ ಒಂದು ವಾರ್ಡ್ ಗೆ ಒಂದರಂತೆ ಕನಿಷ್ಠ 200 ದೂರವಾಣಿ ಲೈನ್ ಗಳ ಸಂಪರ್ಕ ಹೊಂದಿರುವ ಕಾಲ್ ಸೆಂಟರ್ ತೆರೆದು ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದಿದ್ದಾರೆ.

Leave a Reply