ರಾಜ್ಯದಲ್ಲಿ ಭವಿಷ್ಯದ ಸಿಎಂ, ಶ್ಯಾಡೋ ಸಿಎಂ, ಸೂಪರ್ ಸಿಎಂ ಸೇರಿದಂತೆ ಹಲವು ಸಿಎಂಗಳಿಂದ ಅಧಿಕಾರ: ಮೋದಿ

2 years ago

ಶಿವಮೊಗ್ಗ: ರಾಜ್ಯದಲ್ಲಿ ಹಲವು ರೀತಿಯ ಮುಖ್ಯಮಂತ್ರಿಗಳಿದ್ದಾರೆ. ಭವಿಷ್ಯದ ಸಿಎಂ, ಶ್ಯಾಡೋ ಸಿಎಂ, ಸೂಪರ್ ಸಿಎಂ ಸೇರಿದಂತೆ ಹಲವು ರೀತಿಯ ಮುಖ್ಯಮಂತ್ರಿಗಳು ಅಧಿಕಾರ ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಕರ್ನಾಟಕ, ವಿಕಸಿತ ಭಾರತ, ಬಡತನ ಕಡಿಮೆ ಮಾಡಲು ಈ ಬಾರಿ 400ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಸಿಗಂಧೂರು ಚೌಡೇಶ್ವರಿ ದೇವಿಗೆ ನಮನಗಳು. ಶಿವಮೊಗ್ಗ ಯಾರಿಗೂ ಗೊತ್ತಿಲ್ಲದ ಪ್ರದೇಶವಾಗಿದ್ದು. ಪಂಚಾಯತ್, ಜಿಲ್ಲಾ ಪಂಚಾಯತ್ನಲ್ಲೂ ನಮಗೆ ಅಭ್ಯರ್ಥಿಗಳಿರಲಿಲ್ಲ. ಆದರೆ ಬಿಎಸ್ ಯಡಿಯೂರಪ್ಪ ಇಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದರು. ಇದೀಗ ಶಿವಮೊಗ್ಗ ದೇಶದ ಪ್ರಮುಖ ಭೂಪಟವಾಗಿದೆ ಎಂದರು.

ಕಾಂಗ್ರೆಸ್ಗೆ ಪ್ರತಿ ದಿನ ಬೆಳಗ್ಗೆ ಎದ್ದು ಸುಳ್ಳು ಹೇಳುವುದೇ ಕಾರ್ಯವಾಗಿದೆ. ಸಿಕ್ಕಿಬಿದ್ದರೆ ಇನ್ನೊಬ್ಬರ ಮೇಲೆ ಹಾಕುವುದು ಕಾಂಗ್ರೆಸ್ ಪದ್ಧತಿಯಾಗಿದೆ. ಇಲ್ಲಿ ಸಿಎಂ ಕುರ್ಚಿಗೆ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಸಿಎಂ, ಮತ್ತೊಬ್ಬರು ಸಿಎಂ ಕುರ್ಚಿಗಾಗಿ ಕಾಯುತ್ತಿದ್ದಾರೆ. ಇನ್ನೊಬ್ಬರು ಸೂಪರ್ ಸಿಎಂ, ಮತ್ತೊಬ್ಬರು ಶ್ಯಾಡೋ ಸಿಎಂ ಎಂದರು.

ರಾಷ್ಟ್ರಕವಿ ಕುವೆಂಪು ಶಕ್ತಿ ಕುರಿತು ಮಹತ್ವದ ವಿಚಾರ ಹೇಳಿದ್ದಾರೆ. ಕುವೆಂಪು ಮಂತ್ರಕಣ, ಶಕ್ತಿ ಕಣ, ತಾಯಿ ದೇವಿ ಕಣ ಎಂದಿದ್ದಾರೆ. ಕುವೆಂಪು ಮಾತೆಯರಿಗೂ, ದೇವತೆಗೂ ಶಕ್ತಿ ಕಣ ಎಂದು ಉಲ್ಲೇಖಿಸಿದ್ದಾರೆ. ಆದರೆ ಭಾರತದ ಮಾತಾ ಶಕ್ತಿ ಇಂಡಿಯಾ ಒಕ್ಕೂಟಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾರಿ ಶಕ್ತಿ, ಮಾ ಭಾರತ್ ಮಾತಾ ಶಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಹಕ್ಕಿಪಿಕ್ಕಿ ಸಮುದಾಯದ ಜೊತೆ ಮಾತನಾಡಿದ್ದೆ. ಪ್ರತಿ ವಂಚಿತ ಸಮುದಾಯದ ಏಳಿಗೆಗೆ ಬಿಜೆಪಿ ಕೆಲಸ ಮಾಡಲಿದೆ. ಎಸ್ಟಿ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದೆ. ಇದೀಗ ವಿಶ್ವವೇ ಭಾರತದ ಆಧುನಿಕ ಮೂಲಭೌತ ಸೌಕರ್ಯದ ಕುರಿತು ಚರ್ಚೆ ಮಾಡುತ್ತಿದೆ. ವಂದೇ ಭಾರತ್, ಮೆಟ್ರೋ, ಅಂಡರ್ ವಾಟರ್ ಮೆಟ್ರೋ, ಹೈ ಸ್ಪೀಡ್ ಇಂಟರ್ನೆಟ್, ಪ್ರತಿ ಗಾಮದಲ್ಲಿ ಯುಪಿಐ ಪಾವತಿ, ಗ್ರೀನ್ ಕಾರಿಡಾರ್, ಎಕ್ಸ್ಪ್ರೆಸ್ ವೇ ಮೂಲಕ ಇದೀಗ ಭಾರತ ವಿಶ್ವಪಟದಲ್ಲಿ ಗುರುತಿಸಿಕೊಂಡಿದೆ ಎಂದರು.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಿಂದ ದೂರ ಉಳಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಜಿಲ್ಲೆಯ ಪ್ರಮುಖ ಮಠಗಳಿಗೆ ಭೇಟಿಗೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಬಿಳಕಿ, ಗೋಣಿಬೀಡು, ತೊಗರ್ಸಿ, ಹಿರೇಮಾಗಡಿ, ಜಡೇ-ಮೂಡಿ, ಶಾಂತಪುರ, ಹಾರ್ನಹಳ್ಳಿ ಚೌಕಿಮಠ, ಮೂಲೆಗದ್ದೆ, ಹುಂಚಾ ಜೈನಮಠ, ಶಿಕಾರಿಪುರದ ಸಾಲೂರು ಸೇರಿದಂತೆ 10ಕ್ಕೂ ಹೆಚ್ಚು ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಕೋರಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಕಳೆದ 10 ತಿಂಗಳಲ್ಲಿ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಕ್ಷದ ವೇದಿಕೆ ಏರಿದರು.

ಕುಮಾರ್ ಬಂಗಾರಪ್ಪ ಬರುತ್ತಿದ್ದಂತೆ ನೆರೆದವರು ಚಪ್ಪಾಳೆ, ಶಿಳ್ಳೆ, ಕೇಕೆ ಹಾಕಿ ಸ್ವಾಗತಿಸಿದರು. ಮಾಜಿ ಶಾಸಕರಿಗೆ ಮೀಸಲಿದ್ದ ಎರಡನೇ ಸಾಲಿನಲ್ಲಿ ಕುಳಿತ ಕುಮಾರ್ ಬಂಗಾರಪ್ಪ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಕರೆತಂದು ಮುಂದಿನ ಸಾಲಿನಲ್ಲಿ ಕೂರಿಸಿದರು.

Leave a Reply