ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಅಮೂಲ್ಯ: ಈಶ್ವರ್ ಖಂಡ್ರೆ

1 year ago

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೆಮ್ಮಗಾಡ ಬಳಿಯ ಭೀಮಗಢ ಅರಣ್ಯ ವಲಯದ ತಳೇವಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದ 27 ಕುಟುಂಬಗಳು ಸ್ವಯಂ ಇಚ್ಛೆಯಿಂದ ಅರಣ್ಯದಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದು ಪ್ರಶಂಸನೀಯ. ಇಂದು ಪ್ರತಿಯೊಬ್ಬ ಕುಟುಂಬದವರಿಗೆ ಪ್ರಥಮ ಹಂತದ 10 ಲಕ್ಷ ರೂ. ಮೊತ್ತದ ಚೆಕ್ ವಿತರಣೆ ನಡೆಸಲಾಗಿದೆ. ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉಳಿದ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಣ್ಯದಿಂದ ಹೊರ ಬರುವ ನಿರ್ಧಾರ ಒತ್ತಾಯಪೂರ್ವಕವಲ್ಲ, ಶುದ್ಧವಾಗಿ ಅವರ ಸ್ವಯಂ ಪ್ರೇರಣೆಯಿಂದ ಕೂಡಿದ್ದು. ಅರಣ್ಯವಾಸಿಗಳ ಬದುಕು ಹಸನಾಗಿಸಲು ಮತ್ತು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅರಣ್ಯ ಉಳಿದರೆ ಪರಿಸರ, ಮಳೆ ಹಾಗೂ ಕೃಷಿಯೂ ಉಳಿಯುತ್ತದೆ ಎಂದರು.

ಅರಣ್ಯ ಸಚಿವನಾಗಿ, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ಸಂತಸದ ಸಂಗತಿ. ಇತರ ತಾಂಡಾಗಳ ಜನರು ಕೂಡ ಸ್ವ ಇಚ್ಛೆಯಿಂದ ಮುಖ್ಯವಾಹಿನಿಗೆ ಬರುವ ನಿರ್ಧಾರ ಕೈಗೊಂಡರೆ, ಸರ್ಕಾರ ಸದಾ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸ್ಥಳೀಯ ಶಾಸಕ ವಿಠಲ ಹಲಗೆಕರ್, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿಗಳು ಹಾಜರಿದ್ದರು.

Leave a Reply