ಹೈದರಾಬಾದ್: ಐದು ಬಾರಿ ಶಾಸಕನಾಗಿರುವ ಮತ್ತು ಮಾಜಿ ಸಚಿವ ಡಾ.ಎ.ಚಂದ್ರಶೇಖರ್ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾದ್ದಾರೆ.
ಈ ಕುರಿತು ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಜಿ.ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದಿರುವ ಚಂದ್ರಶೇಖರ್, ತೆಲಂಗಾಣದಲ್ಲಿ ಪಕ್ಷ ಮುನ್ನಡೆಯುತ್ತಿರುವ ಬಗ್ಗೆ ಸಮಾಧಾನವಿಲ್ಲ ಮತ್ತು ಇದೇ ಕಾರಣದಿಂದ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಪಕ್ಷದ ನಾಯಕತ್ವ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದು, ಕಳೆದ ತಿಂಗಳು ವಾರಂಗಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಪಾಸ್ ನಿರಾಕರಿಸಿರುವುದನ್ನು ಉಲ್ಲೇಖಿಸಿದ್ದಾರೆ.
1985 ರಿಂದ 2008ರವರೆಗೆ ಸತತ ಐದು ಅವಧಿಗೆ ವಿಕಾರಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಾ. ಚಂದ್ರಶೇಖರ್ ತೆಲಂಗಾಣದ ಹಿರಿಯ ದಲಿತ ನಾಯಕರಾಗಿದ್ದು, ಎನ್. ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ದ ಆಡಳಿತದ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ತೆಲಂಗಾಣ ಚಳವಳಿಯ ಸಮಯದಲ್ಲಿ, ಅವರು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಗೆ ಸೇರಿದರು ಆದರೆ ನಂತರ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರೊಂದಿಗೆ ಭಿನ್ನಾಭಿಪ್ರಾಯದ ಕಾರಣ ಅವರಿಗೆ ಸಚಿವ ಸ್ಥಾನ ತಪ್ಪಿಹೋಗಿತ್ತು. ಅವರು ಪೆದ್ದಪಲ್ಲಿಯಿಂದ ಸಂಸತ್ ಸದಸ್ಯರಾಗಿ ಸ್ಪರ್ಧಿಸಲು ಬಯಸಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದರು. ಅದಾದ ತರುವಾಯ ಬಿಜೆಪಿ ಸೇರಿದ್ದರು.
ಹಲವು ತಿಂಗಳಿಂದ ಬಿಜೆಪಿಯಲ್ಲಿ ಅತೃಪ್ತಿ ಹೊಂದಿದ್ದ ಮಾಜಿ ಸಚಿವರು, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಯೊಂದಿಗೆ ಜನರು ಕೈಜೋಡಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ. ಬಿಆರ್ಎಸ್ ವಿರುದ್ಧ ಹೋರಾಡಲು ಬಿಜೆಪಿಗೆ ಸೇರ್ಪಡೆಗೊಂಡ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಯ ವರ್ತನೆಯಿಂದ ಹತಾಶರಾಗಿದ್ದಾರೆ ಮತ್ತು ಬಹಳಷ್ಟು ಜನರು ಶೀಘ್ರದಲ್ಲೇ ಬಿಜೆಪಿ ತೊರೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರ ಮತ್ತು ದುರಾಡಳಿತದ ಭಾರೀ ಆರೋಪಗಳ ಹೊರತಾಗಿಯೂ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಮತ್ತು ಬಿಆರ್ಎಸ್ ಸರ್ಕಾರದ ಬಗ್ಗೆ ಏಕೆ ಮೃದುವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಈಟಾಳ ರಾಜೇಂದರ್ ಅವರನ್ನು ಸಮಾಧಾನಪಡಿಸಲು ಭೇಟಿಯಾದಾಗ ಡಾ.ಚಂದ್ರಶೇಖರ್ ಅವರು ಬಿಆರ್ಎಸ್ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಮುಖ್ಯಮಂತ್ರಿಗಳ ಮೇಲೆ ಕ್ರಮ ತೆಗೆದುಕೊಳ್ಳುವವರೆಗೆ ಜನ ಅದನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಡಾ. ಚಂದ್ರಶೇಖರ್ ಅವರು ಈ ಹಿಂದೆ ನೀಡಿರುವ ಹಲವು ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗುತ್ತಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ, ಎ. ರೇವಂತ್ ರೆಡ್ಡಿ ಅವರನ್ನು ಕಾಂಗ್ರೆಸ್ಗೆ ಕರೆತರುವ ಪ್ರಯತ್ನಗಳನ್ನು ಕೂಡ ಅವರು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.




