ಔಷಧೋಪಚಾರದಲ್ಲಿ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ

1 year ago

ಗರ್ಭಿಣಿ, ಬಾಣಂತಿ, ನವಜಾತ ಶಿಶುಗಳ ಚಿಕಿತ್ಸೆ, ಆರೈಕೆ, ಔಷಧೋಪಚಾರದಲ್ಲಿ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ದಿವ್ಯ ಪ್ರಭು

ಧಾರವಾಡ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಧಾರವಾಡ: ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ನೀಡಬೇಕು. ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ, ಔಷಧಿ ನೀಡಿ, ಯಾವುದೇ ಸಾವು ನೋವು ಆಗದಂತೆ ವೈದ್ಯರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಧಾರವಾಡ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ, ತಾಯಿ-ಮಕ್ಕಳ ಆಸ್ಪತ್ರೆ ಭೇಟಿ ನೀಡಿ, ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಹೆರಿಗೆ ವಿಭಾಗ, ತಾಯಿ-ಮಕ್ಕಳ ಆಸ್ಪತ್ರೆ, ರೋಗಿ ಪಾಲಕರ ವಿಶ್ರಾಂತಿ ಸ್ಥಳಗಳಿಗೆ ಭೇಟಿ ನೀಡಿ, ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳನ್ನು, ಪಾಲಕರನ್ನು ಮಾತನಾಡಿಸಿ, ಜಿಲ್ಲಾ ಆಸ್ಪತ್ರೆ ವೈದ್ಯರ ಸ್ಪಂದನೆ, ಚಿಕಿತ್ಸೆಗಳ ಬಗ್ಗೆ ಮಾಹಿತಿ  ಪಡೆದರು. ಮತ್ತು ಜಿಲ್ಲಾ ಆಸ್ಪತ್ರೆಯ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಂಡರು.

ಶೌಚಾಲಯಗಳಿಗೆ ಭೇಟಿ ನೀಡಿ, ನೀರು, ನೈರ್ಮಲ್ಯ ಕಾಪಾಡುವಂತೆ ಮತ್ತು ಶೌಚಾಲಯಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುವಂತೆ ಅವರು ತಿಳಿಸಿದರು. ಮತ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಂದ ಅಥವಾ ರೋಗಿಗಳ ಸಂಬಂಧಿಕರಿಂದ ಯಾವುದೇ ಹಣ, ಇತರೆ ವಸ್ತುಗಳನ್ನು ಪಡೆಯುತ್ತಾರೆಯೇ ಮತ್ತು ರೋಗಿಗಳಿಗೆ ಹೊರಗಿನ ಔಷಧಿಗಳನ್ನು ಸೂಚಿಸುತ್ತಾರೆಯೇ ಎಂದು ಪ್ರಶ್ನಿಸಿ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.

ಸಾರ್ವಜನಿಕರು ಅಂತಹ ಯಾವುದೇ ಘಟನೆಗಳು ನಡೆದಿರುವುದಿಲ್ಲ. ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಯನ್ನು ನೀಡುತ್ತಾರೆ. ಚಿಕಿತ್ಸೆ ನೀಡುವಲ್ಲಿ ಯಾವುದೇ ರೀತಿಯ ವಿಳಂಬ, ತೊಂದರೆ ಇರುವುದಿಲ್ಲ ಎಂದು ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ 250 ಹಾಸಿಗೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯ 100 ಹಾಸಿಗೆ ಸೇರಿ ಒಟ್ಟು 350 ಬೆಡ್ ವ್ಯವಸ್ಥೆ ಇದೆ. ಪ್ರತಿದಿನ ಸುಮಾರು 1,100 ದಿಂದ 1,700 ರಷ್ಟು ಹೊರರೋಗಿಗಳು ನೋಂದಣಿ ಮಾಡಿಕೊಳ್ಳುತ್ತಾರೆ. ಅಂದಾಜು ಪ್ರತಿದಿನ 150 ಜನರಿಗೆ ಎಕ್ಸರೇ, 35 ಜನರಿಗೆ ಓ.ಬಿ.ಜಿ ಸ್ಕ್ಯಾನ್, 80 ಜನರಿಗೆ ಜನರಲ್ ಸ್ಕ್ಯಾನ್, 25 ಜನರಿಗೆ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದರು.

ಪ್ರತಿ ತಿಂಗಳು ಸರಾಸರಿ 450 ಕ್ಕೂ ಹೆಚ್ಚು ಹೆರಿಗೆ ಆಗುತ್ತವೆ. 400 ಕ್ಕೂ ಹೆಚ್ಚು ಜನರು ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ. ಮತ್ತು ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಶೇ. 89 ರಷ್ಟು ಚಿಕಿತ್ಸಾ ಪೂರ್ವ ದೃಢೀಕರಣದಿಂದ ಆರ್ಥಿಕ ಸೌಲಭ್ಯ ಪಡೆಯಲಾಗುತ್ತಿದೆ ಎಂದರು.

ಗರ್ಭಿಣಿಯರ ಸಾವು ಪ್ರಕರಣಗಳು: ಜಿಲ್ಲೆಯಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಕಡಿಮೆ ಇದೆ. ಈಗ ಆಗುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸೂಕ್ತ ಮುಂಜಾಗೃತವಹಿಸಲಾಗುತ್ತಿದೆ ಎಂದರು.

ಧಾರವಾಡ ಜಿಲ್ಲೆಗೆ ನೆರೆಯ ಉತ್ತರಕನ್ನಡ, ಬೆಳಗಾವಿ, ಬಾಗಲಕೋಟ, ಗದಗ ಮತ್ತು ಹಾವೇರಿ ಜಿಲ್ಲೆಯ ರೋಗಿಗಳು, ಗರ್ಭಿಣಿಯರು ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿಏಪ್ರಿಲ್ 2024 ರಿಂದ ಡಿಸೆಂಬರ 2024 ರವರೆಗೆ ಧಾರವಾಡ ಜಿಲ್ಲೆಯ 11 ಜನ ಗರ್ಭಿಣಿಯರು ಹಾಗೂ ಹೊರ ಜಿಲ್ಲೆಯ 24 ಜನ ಗರ್ಭಿಣಿಯರು ಸೇರಿ ಒಟ್ಟು 35 ಜನ ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಹೊರ ಜಿಲ್ಲೆಯಿಂದ ಶಿಫಾರಸ್ಸು ಆಗುವ ಪ್ರಕರಣಗಳಲ್ಲಿ ಬಿ.ಪಿ, ರಕ್ತಸ್ರಾವ, ಎಪಿಎಚ್, ಪಿಪಿಎಚ್ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲಿನ ವೈದ್ಯರು ಪರಿಸ್ಥಿತಿ ಕೈ ಮೀರಿದಾಗ ಕೊನೆಯ ಹಂತದಲ್ಲಿ ರೋಗಿಗಳನ್ನು ಶಿಫ್ಟ್ ಮಾಡುವುದರಿಂದ ಈ ಸಮಸ್ಯೆ ಆಗುತ್ತಿದೆ. ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ, ಔಷಧೋಪಚಾರ ನೀಡಲಾಗುತ್ತಿದೆ ಎಂದರು.

ಅಪೌಷ್ಟಿಕತೆ ಮಕ್ಕಳ ಆರೈಕೆ: ಧಾರವಾಡ ಜಿಲ್ಲೆಯ ಅಪೌಷ್ಟಿಕತೆ ಅಂದಾಜು 85 ಮಕ್ಕಳಿದ್ದು, ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಕ್ತ ಚಿಕಿತ್ಸೆ, ಹಾರೈಕೆ ಮಾಡಲಾಗುತ್ತಿದೆ. ವಿವಿಧ ತಾಲೂಕುಗಳಾದ ಗ್ರಾಮೀಣ 16, ಹುಬ್ಬಳ್ಳಿ ಗ್ರಾಮೀಣ 3, ಹುಬ್ಬಳ್ಳಿ ಧಾರವಾಡ ಶಹರ 41, ಕಲಘಟಗಿ 12, ಕುಂದಗೋಳ 3 ಹಾಗೂ ನವಲಗುಂದ 10 ಮಕ್ಕಳು ಇದ್ದಾರೆ. ಈ ಎಲ್ಲ ಮಕ್ಕಳು ಪೌಷ್ಟಿಕವಾಗಿ ಬೆಳೆಯುವಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಎಚ್.ಎಂ.ಪಿ.ವಿ: ಈ ಪ್ರಕರಣಗಳ ನಿರ್ವಹಣೆಗೆ, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಅಗತ್ಯ ಬಿದ್ದರೆ ಚಿಕಿತ್ಸೆಗಾಗಿ 10 ಬೆಡ್ ಮೀಸಲಿಡಲಾಗಿದೆ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಸುಜಾತ ಹಸವೀಮಠ ಅವರು ಜಿಲ್ಲಾಧಿಕಾರಿಗಳ ಭೇಟಿ ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ, ವಿವರಣೆ ನೀಡಿದರು.

Leave a Reply