ಬೆಂಗಳೂರು: ಕಡಿಮೆ ವಿದ್ಯುತ್ ಬಳಸುವ ಗೃಹಜ್ಯೋತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಮೂಲಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ.
ಗೃಹ ಜ್ಯೋತಿ ಫಲಾನುಭವಿಗಳು ಮಾಸಿಕ ಇನ್ನೂರು ಯೂನಿಟ್ ವಿದ್ಯುತ್ ಬಳಕೆಯನ್ನು ಉಚಿತ ಎಂದು ಘೋಷಿಸಲಾಗಿದೆ. ಅದರಂತೆ ಪ್ರತಿ ಗ್ರಾಹಕ ವಾರ್ಷಿಕವಾಗಿ ಬಳಸುವ ವಿದ್ಯುತ್ ಲೆಕ್ಕಹಾಕಿ ಇದಕ್ಕೆ ಶೇಕಡಾ ಹತ್ತರಷ್ಟು ಹೆಚ್ಚುವರಿ ಬಳಸಲು ಅವಕಾಶ ನೀಡಿತ್ತು. ಇದರ ಮೇಲ್ಪಟ್ಟು ಬಳಕೆಗೆ ಶುಲ್ಕ ವಿಧಿಸಲಾಗುತ್ತಿದೆ.
ಇದರಿಂದ ಸರಾಸರಿ 40 ಯೂನಿಟ್ ಬಳಸುವ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಹೀಗಾಗಿ ಇದನ್ನು ಸರಿಪಡಿಸುವ ದೃಷ್ಟಿಯಿಂದ ಹೆಚ್ಚುವರಿ ಶೇಕಡಾ ಶೇ.10ರಷ್ಟಕ್ಕೆ ಬದಲಾಗಿ 10 ಯುನಿಟ್ ಹೆಚ್ಚುವರಿ ವಿದ್ಯುತ್ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹೆಚ್.ಕೆ.ಪಾಟೀಲ್, ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಯುನಿಟ್ಗಿಂತ ಶೇ. 10ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ ಶೇಕಡವಾರು ಬದಲಾಗಿ 10 ಯುನಿಟ್ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ವಿದ್ಯುತ್ ಸರಬರಾಜು ಕಂಪನಿಗಳು ಯಪಿಸಿಎಲ್ ನವರಿಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆಯಾಗಿದೆ. ಹಾಗೇ ಕೇಂದ್ರ ವಿದ್ಯತ್ ದರ ನಿಯಂತ್ರಣ ಆಯೋಗದ ಆದೇಶದ ಕುರಿತು ಚರ್ಚೆಯಾಗಿದ್ದು, ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ ಹಾಗೂ ಇದಕ್ಕೆ ದಂಡ ಶುಲ್ಕ 419 ಕೋಟಿ ರೂ. ನೀಡಬೇಕಾಗಿದೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಬಜೆಟ್ ಅಧಿವೇಶನ: ಮುಂಬರುವ ಫೆಬ್ರವರಿ 12 ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯಲಿದೆ. ಫೆಬ್ರವರಿ 12ರಂದು ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 16ರಂದು ಬಜೆಟ್ ಮಂಡನೆ ಆಗಲಿದೆ. ಫೆ. 23ರವರೆಗೆ ಉಭಯ ಸದನಗಳ ಕಲಾಪ ನಡೆಯಲಿದೆ ಎಂದರು.




