ಪಾರದರ್ಶಕವಾಗಿ ಕೌನ್ಸಿಲಿಂಗ್ ನಡೆಸಿ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ: ದಿನೇಶ್ ಗುಂಡೂರಾವ್

10 months ago

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮೊದಲ ಬಾರಿಗೆ ಪಾರದರ್ಶಕವಾಗಿ ಕೌನ್ಸಿಲಿಂಗ್ ನಡೆಸಿ 55,000 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ವೈದ್ಯರ ನಿಯೋಜನೆಯನ್ನು ರದ್ದು ಮಾಡಿದ್ದು, ಹೊಸದಾಗಿ ನಿಯೋಜನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ ಶಾಸಕ ಕೆ.ಎಸ್‍.ಆನಂದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಬಾರಿಗೆ ಯಾವುದೇ ಶಿಫಾರಸ್ಸಿಲ್ಲದೇ ಮೆರಿಟ್ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಕೆಲವು ಸಮಸ್ಯೆಗಳು ಆಗಿವೆ. ವರ್ಗಾವಣೆಯಾದ ಸ್ಥಾನಕ್ಕೆ ವೈದ್ಯರು ಬಂದಿಲ್ಲ. ಬಹಳಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ಬೇರುಬಿಟ್ಟಿದ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ ಎಂದರು.

ತಾಲ್ಲೂಕು ಆಸತ್ರೆಗಳು 24*7 ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಈ ಆಸ್ಪತ್ರೆಗಳಲ್ಲಿ ಇರುವ ತಜ್ಞ ವೈದ್ಯರ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗುವುದು. ಅಂದರೆ ಇಬ್ಬರು ಅರವಳಿಕೆ, 2 ಪ್ರಯೋಗ ತಜ್ಞರು, ಇಬ್ಬರು ಮಕ್ಕಳ ವೈದ್ಯರನ್ನು ಒದಗಿಸಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆಯೂ ಚೆನ್ನಾಗಿ ನಡೆಯಬೇಕು. ಮೇಲ್ದರ್ಜೆಗೇರಿಸಿದ ವೈದ್ಯಕೀಯ ಸಿಬ್ಬಂದಿ ಯಾವಾಗಲೂ ದೊರೆಯಬೇಕು ಎಂಬುದು ತಮ ಉದ್ದೇಶವಾಗಿದೆ. ಕಡೂರು-ಬೀರೂರು ಆಸ್ಪತ್ರೆಗಳ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದರು.

2011ರಲ್ಲಿ ಜಾರಿಯಾಗಿದ್ದ ಕಾಯ್ದೆಯನ್ನು ಈ ವರ್ಷ ಜಾರಿಗೆ ತಂದು ವೈದ್ಯಕೀಯ ಸಿಬ್ಬಂದಿಯನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಕ್ರಿಟಿಕಲ್ ಹುದ್ದೆಗಳ ಭರ್ತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದರು.

ಶೀಘ್ರವೇ ವೈದ್ಯರ ಕೊರತೆ ನಿವಾರಣೆ: ಕಡ್ಡಾಯ ಗ್ರಾಮೀಣ ವೈದ್ಯಕೀಯ ಸೇವೆಯಡಿ 400 ವೈದ್ಯರು ನೋಂದಣಿಯಾಗಿದ್ದು, ಶೀಘ್ರವೇ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಗುತ್ತಿಗೆ ವೈದ್ಯರ  ವೇತನವನ್ನು 50-60 ಸಾವಿರ ರೂ.ಗೆ ತಜ್ಞ ವೈದ್ಯರ ವೇತನವನ್ನು 1.10-2ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ ಎಂದರು.

ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ ಸಮಯದಲ್ಲೇ ಸಿಬ್ಬಂದಿ ಹಾಗೂ ಸಲಕರಣೆಗಳಿಗೆ ಅನುದಾನ ದೊರೆಯದಿರುವುದರಿಂದ 30 ಆಸ್ಪತ್ರೆಗಳು ಮೇಲ್ದರ್ಜೆಗೇರಿಸಲಾಗಿಲ್ಲ. ಅದರ ಅಗತ್ಯತೆ  ಇದೆ. ಇಂತಹ ಆಸ್ಪತ್ರೆಗಳಿಗೆ ಸಿಬ್ಬಂದಿ ಮತ್ತು ಸಲಕರಣೆ ಒದಗಿಸಲು ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಒಪ್ಪಿಗೆ ದೊರೆತ ನಂತರ ಸೌಲಭ್ಯ ಒದಗಿಸಲಾಗುವುದು ಎಂದರು.

ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಕಾಮಗಾರಿಯ ಅಂದಾಜು ವೆಚ್ಚ 115-146 ಕೋಟಿಗೆ ಹೆಚ್ಚಳವಾಗಿದೆ. ಅಲ್ಲದೇ ಮೂಲಸೌಕರ್ಯ ಕಾಮಗಾರಿ 4500 ಕೋಟಿ ರೂ. ಆಗತ್ಯವಿದ್ದು, ತಾವು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಹಣದ ಕೊರತೆಯಿದ್ದರೆ ಸರಿಪಡಿಸಲಾಗುವುದು. ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.

Leave a Reply