ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ: ಬೊಮ್ಮಾಯಿ

4 years ago

ಬೆಂಗಳೂರು: ಮುಂದಿನ ವರ್ಷ ಸರ್ಕಾರದ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಆಯೋಜಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ ಹಾಗೂ ಕರ್ನಾಟಕ ಇಂಜಿನಿಯರುಗಳ ಸಂಘದ ಸಹಭಾಗಿತ್ವದಲ್ಲಿ ಕೆ.ಆರ್.ವೃತ್ತದ ಬಳಿ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದ ನಂತರ ಪ್ರತಿಕ್ರಿಯೆ ನೀಡಿದ ಅವರು, ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ ಭಾರತ ಸರ್ಕಾರ ಕೂಡ ಅಧ್ಯಯನ ಮಾಡಿ ಎಲ್ಲಾ ರಾಜ್ಯ ಗಳಲ್ಲಿ ಸರ್ಕಾರವೇ ಅಭಿಯಂತರರ ದಿನಾಚರಣೆ ಆಚರಿಸಲು ಸೂಚಿಸಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯ ಕನ್ನಡನಾಡಿನ ಅತ್ಯಂತ ಹೆಮ್ಮೆಯ ಪುತ್ರ. ಅವರು ಸದಾ ಕಾಲ ನಮಗೆ ಪ್ರೇರಣೆ. ಕನ್ನಡ ನಾಡು ಕಟ್ಟಿದ ಧೀಮಂತ ವ್ಯಕ್ತಿ ಎಂದರು.

ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿಯೇ ಸ್ಫೂರ್ತಿ ಇದೆ. 90 ವರ್ಷಕ್ಕಿಂತ ಹೆಚ್ಚು ಕಾಲ ಬಾಳಿ, ಬದುಕಿದ ಅವರ ಬದುಕಿನ ಪ್ರತಿ ಕ್ಷಣವೂ ನಾಡಿನ, ದೇಶನ ಅಭಿವೃದ್ಧಿ, ಜನರ ಒಳಿತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಷ್ಟು ವೈವಿಧ್ಯಮಯ ಜ್ಞಾನ ಮತ್ತು ಬದ್ಧತೆ ಇರುವ ವ್ಯಕ್ತಿಗಳು ಬಹಳ ಕಡಿಮೆ. ನಿಜವಾದ ದೇಶಭಕ್ತರು, ನಾಡು ಕಟ್ಟಿದವರು ಅವರು. ಕೇವಲ ಅಣೆಕಟ್ಟುಗಳನ್ನು, ರಸ್ತೆಗಳನ್ನು ಮಾತ್ರ ನಿರ್ಮಾಣ ಮಾಡಲಿಲ್ಲ. ಇಂಧನ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ. ಬೃಹತ್ ಕಾರ್ಖಾನೆಗಳ ನಿರ್ಮಾಣವನ್ನು ಕೂಡ ಮಾಡಿದರು ಎಂದು ಹೇಳಿದರು.

ಕರ್ನಾಟಕ ರಾಜ್ಯದ ಅಧೀನದಲ್ಲಿರುವ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ, ಸಿಮೆಂಟ್, ಕಾಗದ ಮುಂತಾದ ಕಾರ್ಖಾನೆಗಳನ್ನು ಮೈಸೂರು ಮಹಾರಾಜರ ಆಶ್ರಯದಲ್ಲಿ ಆರಂಭಿಸಿದರು. ಕೆ.ಆರ್.ಎಸ್ ಅಣೆಕಟ್ಟು ಕಟ್ಟಿ ನಮ್ಮ ಕಾವೇರಿ ಜಲಾನಯನ ಭಾಗದ ರೈತರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಬದ್ಧತೆಯನ್ನು ಸಹ ಮೆರೆದ ಅವರು ಹೆಣ್ಣುಮಕ್ಕಳಿಗೆ ವಿಶೇಷವಾಗಿ ಕಾಲೇಜುಗಳ ನಿರ್ಮಾಣ, ಆರ್ಥಿಕ ವಲಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಾರಂಭಿಸಿದರು ಎಂದರು.

ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕೆ.ಇ.ಎಸ್.ಎ. ಅಧ್ಯಕ್ಷ ಪೀತಾಂಬರಸ್ವಾಮಿ ಮೊದಲಾದವರು ಹಾಜರಿದ್ದರು.

Leave a Reply