ಡಿ.14ರಂದು ಸಿಎಂ ಸಭೆ
ಬೆಳಗಾವಿ / ಬಳ್ಳಾರಿ: ಕುಡತಿನಿ ಬಳಿ 361 ದಿನಗಳಿಂದ ಪ್ರತಿಭಟನಾ ನಿರತ ಭೂ ಸಂತ್ರಸ್ತರ ಹೋರಾಟದ ಕುರಿತ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಸ್ ಅವರು ಸುವರ್ಣಸೌಧದಲ್ಲಿ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿ, ಡಿಸೆಂಬರ್ 14ರ ಗುರುವಾರ ಮಧ್ಯಾಹ್ನ 3.30ಕ್ಕೆ ಕೊಠಡಿ ಸಂಖ್ಯೆ 315 ರಲ್ಲಿ ವಿಶೇಷ ಸಭೆ ಕರೆದಿದ್ದಾರೆ.
ಕುಡತಿನಿಯಲ್ಲಿ ಅರ್ಸೆಲ್ಲರ್ ಮಿತ್ತಲ್, ಉತ್ತಮ್ಗಾಲ್ವಾ ಮತ್ತು ಎನ್ಎಂಡಿಸಿ ಬೃಹತ್ ಕೈಗಾರಿಕೆಗಳ ಪ್ರಾರಂಭಕ್ಕೆ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ದಶಕಗಳು ಕಳೆದರೂ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಭೂ ನಿರಾಶ್ರಿತರು ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸದನದಲ್ಲಿ ಡಿಸೆಂಬರ್ 5, 2023 ರಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು.
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು, ಡಿಸೆಂಬರ್ 5ರಂದು ಸದನದ ಮೇಲ್ಮನೆಯಲ್ಲಿ `ಕುಡತಿನಿ ಬಳಿ 361 ದಿನಗಳಿಂದ ಪ್ರತಿಭಟನಾ ನಿರತ ಭೂ ಸಂತ್ರಸ್ತರ ಹೋರಾಟಗಾರರ ಕುರಿತು ತುರ್ತಾಗಿ ಗಮನಹರಿಸಬೇಕು’ ಎಂದು ಮನವಿ ಮಾಡಿದ್ದರು. ಈ ಕುರಿತು ಸರ್ಕಾರ ತುರ್ತು ಸ್ಪಂದನೆ ನೀಡಿರುವುದು ಸ್ವಾಗತಾರ್ಹ ಎಂದು ಸತೀಶ್ ಹೇಳಿದರು.
ಸಿಎಂ ಸಿದ್ಧರಾಮಯ್ಯ ಅವರು ಡಿಸೆಂಬರ್ 14ರ ಗುರುವಾರ ಮಧ್ಯಾಹ್ನ 3.30ಕ್ಕೆ ಕೊಠಡಿ ಸಂಖ್ಯೆ 315ರಲ್ಲಿ ವಿಶೇಷ ಸಭೆಗೆ ಸಂಡೂರು ಶಾಸಕ ಇ.ತುಕಾರಾಂ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವರು, ಆರ್ಥಿಕ, ಕಂದಾಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳು ಹಾಜರಾತಿ ಕಡ್ಡಾಯ ಮಾಡಿದ್ದಾರೆ ಎಂದು ವೈ.ಎಂ.ಸತೀಶ್ ಹೇಳಿದ್ದಾರೆ.




