ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ

2 years ago

ಮೈಸೂರು: ವಯೋಸಹಜ ಕಾರಣಗಳಿಂದಾಗಿ ಇನ್ನುಮುಂದೆ ತಾವು ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೀಗ 77 ವರ್ಷ. ಇನ್ನೂ 4 ವರ್ಷ ಸಮಯವಿದೆ. ಅದು ಮುಗಿಯುವ ವೇಳೆಗೆ 81 ವರ್ಷ ಆಗಲಿದ್ದು, ಆ ಸಂದರ್ಭಕ್ಕೆ ಆರೋಗ್ಯವೂ ಉತ್ತಮವಾಗಿರುವುದಿಲ್ಲ, ಹರ್ಷದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

1978ರಲ್ಲಿ ತಾವು ರಾಜಕೀಯಕ್ಕೆ ಬಂದಿದ್ದು, 50 ವರ್ಷ ಕಳೆಯುತ್ತಿದೆ. ಇಷ್ಟು ಸಾಕು. ಮೇಲ್ನೋಟಕ್ಕೆ ನನಗೆ ವಯಸ್ಸಾಗಿದೆ ಎಂದು ಕಾಣದೇ ಇದ್ದರೂ ನನ್ನ ಒಳಗಿನ ಆರೋಗ್ಯದ ಸಾಮರ್ಥ್ಯ ನನಗೆ ಗೊತ್ತಿದೆ ಎಂದರು.

ವರುಣಾ ಕ್ಷೇತ್ರದಲ್ಲಿ ಭಾಷಣ ಮಾಡುವಾಗ ಬಿಜೆಪಿಯವರು ಅಧಿಕಾರಕ್ಕೆ ಬಂದರೆ ನಮ್ಮ ಕಾರ್ಯಕ್ರಮಗಳನ್ನು ನಿಲ್ಲಿಸಿಬಿಡುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ನಮ್ಮನ್ನು ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ ಎಂದರು.

ನಾವು ಜನರ ಬದುಕಿನ ಆಧಾರದ ಮೇಲೆ ಮತ ಕೇಳುತ್ತೇವೆ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಜನ ನಮ್ಮ ಕಾರ್ಯಕ್ರಮಗಳನ್ನು ನೋಡಿ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಎಷ್ಟೇ ಹಣಕಾಸಿನ ಅಗತ್ಯವಿದ್ದರೂ ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ. ಮೈಸೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಿಸದೇ ಇದ್ದರೂ ಸುಳ್ಳು ವರದಿಯಾಗಿದೆ. ತಮ್ಮಷ್ಟಕ್ಕೇ ತಾವು ಊಹೆ ಮಾಡಿಕೊಂಡು ವರದಿ ಮಾಡುವುದು ಅಪಾಯಕಾರಿ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ತಮ್ಮ ಪುತ್ರ ಯತೀಂದ್ರ ನೀಡಿದ್ದ ಹೇಳಿಕೆಗೆ ನೋಟೀಸ್ ಬಂದಿದೆ. ಅದಕ್ಕೆ ಉತ್ತರ ನೀಡಲಾಗಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

Leave a Reply