ಚೆನ್ನೈ: ಚಲಿಸುತ್ತಿದ್ದ ಬಸ್ ನಲ್ಲಿ ಆಯ ತಪ್ಪಿ ಬಿದ್ದದ್ದರಿಂದ ಮಹಿಳೆ ಸ್ಥಳದಲ್ಲೇ ಬಲಿಯಾಗಿರುವ ಘಟನೆ ತಮಿಳುನಾಡಿನ ತೆಂಕಸಿ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
ಬಲಿಯಾದ ಮಹಿಳೆಯನ್ನು ಮಹೇಶ್ವರಿ ಎಂದು ಗುರುತಿಸಲಾಗಿದೆ. ಇವರು ಶಂಕರನ್ ಕೋವಿಲ್ ಪ್ರದೇಶದವರು ಎಂದು ವರದಿಯಾಗಿದೆ. ಮಗಳ ಮದುವೆಗೆ ವಸ್ತುಗಳನ್ನು ಕೊಳ್ಳಲು ಮಹಿಳೆ ಖಾಸಗಿ ಮಿನಿ ಬಸ್ ಮೂಲಕ ಊರಿಗೆ ಹಿಂದಿರುಗತ್ತಿದ್ದರು. ಬಸ್ ನಿಲ್ದಾಣ ಸಮೀಪಿಸಿದ ವೇಳೆ ಇಳಿಯಲು ಸಜ್ಜಾಗಿದ್ದರು. ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಮಹಿಳೆ ಆಯ ತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಮಹೇಶ್ವರಿ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.



