ಬಿಜೆಪಿ ಅಧ್ಯಕ್ಷೆಯಾಗಿ ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕನಾಗಿ ಬಸವರಾಜ ಬೊಮ್ಮಾಯಿ, ಮೇಲ್ಮನೆ ವಿಪಕ್ಷ ನಾಯಕನಾಗಿ ರಘುನಾಥ್ ಮಲ್ಕಾಪುರೆ ಆಯ್ಕೆ ಸಾಧ್ಯತೆ

3 years ago

#Shobha #Bommai #malkapure #chance #bjp #president #opposition #leader

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರ ಹುದ್ದೆಗಾಗಿ ಸೂಕ್ತ ವ್ಯಕ್ತಿಯ ಹುಡುಕಾಟ ಮಾಡಿದ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಲಿಂಗಾಯತ, ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯದ ಸೂತ್ರಕ್ಕೆ ಕೊಟ್ಟಿದ್ದು ನಾಳೆ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸಭೆ ನಡೆಯುತ್ತಿದ್ದು, ಕಳೆದ ಕೆಲವು ದಿನಗಳಿಂದ ಖಾಲಿ ಉಳಿದಿರುವ ಪ್ರತಿಪಕ್ಷ ನಾಯಕರ ಹುದ್ದೆ ಮತ್ತು ಪಕ್ಷದ ಅಧ್ಯಕ್ಷರ ಹುದ್ದೆ ನೇಮಕ ಮಾಡುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಓಲೈಸುವ ದೃಷ್ಟಿಯಿಂದ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡುವ ಸಾಧ್ಯತೆ ಇದೆ. ಈ ಮೂಲಕ ಮಹಿಳೆ, ಒಕ್ಕಲಿಗ, ಸಂಘ ಪರಿವಾರ ಮೂಲ ಹಾಗೂ ಕರಾವಳಿ ಪ್ರಾತಿನಿಧ್ಯ ಎಂಬ ಅಂಶಗಳನ್ನು ಪರಿಗಣಿಸುವ ಲೆಕ್ಕಾಚಾರ ಹಾಕಲಾಗಿದೆ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪರಿಗಣಿಸಿದ್ದಾರೆ. ಸದ್ಯ ಸದನದಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತಿರುವ ಬೊಮ್ಮಾಯಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವದ ಗುಣ ಹೊಂದಿದ್ದಾರೆ. ಹಣಕಾಸು, ನೀರಾವರಿ, ಕಾನೂನು ಇಲಾಖೆಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು ಕಿತ್ತೂರು ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂಬುದನ್ನು ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿಯಲ್ಲಿ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ಕಲ್ಯಾಣ ಕರ್ನಾಟಕದ ಬೀದರ್ ನ ರಘುನಾಥ್ ಮಲ್ಕಾಪುರೆ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಘ ಪರಿವಾರದ ಮೂಲದ ಮಲ್ಕಾಪುರೆ ಪರಿಷತ್ ಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಸೇರಿದ ಹೊರಟ್ಟಿ ಅವರಿಗೆ ಅವಕಾಶ ನೀಡುವ ಮೂಲಕ ಹೈಕಮಾಂಡ್ ಆದೇಶಕ್ಕೆ ತಲೆ ಬಾಗಿದ್ದರು. ಜೊತೆಗೆ ಯಡಿಯೂರಪ್ಪ ಅವರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನುವುದು ಇವರ ಆಯ್ಕೆಗಿರುವ ಪ್ರಮುಖ ಮಾನದಂಡ ಎನ್ನಲಾಗಿದೆ.

ಮುಂದಿನ ವರ್ಷ ಲೋಕಸಭೆ ಚುನಾವಣೆಯಿದೆ. ಯಡಿಯೂರಪ್ಪ ಅವರ ಆಪ್ತ ವಲಯದವರನ್ನು ಉನ್ನತ ಹುದ್ದೆಗೆ ನೇಮಿಸಿದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ. ಒಂದು ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟಿದ್ದು ಲಿಂಗಾಯತ ಸಮುದಾಯವನ್ನು ಖುಷಿಯಾಗಿಸಿದರೆ ಮತ್ತೊಂದು ಶೋಭಾರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವುದರಿಂದ ಒಕ್ಕಲಿಗರ ಪ್ರೀತಿಯನ್ನು ಪಡೆದಂತಾಗುತ್ತದೆ. ಹಾಗೆಯೇ ಹಿಂದುಳಿದ ವರ್ಗಕ್ಕೂ ಮಾನ್ಯತೆ ಕೊಟ್ಟಂತಾಗುತ್ತದೆ ಎಂಬ ಅನಿಸಿಕೆಯೂ ಹೈಕಮಾಂಡ್ ನೊಳಗಿದೆ.

Leave a Reply