ಎಸ್ ಡಿ ಪಿ ಐ ಹಾಸನ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಜಂಟಿ ಸಭೆ

2 years ago

ಲೋಕಸಭಾ ಚುನಾವಣೆಯ ಬಗ್ಗೆ ಮಹತ್ವಪೂರ್ಣ ಚರ್ಚೆ

ಹಾಸನ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ನಗರ ಜಿಲ್ಲೆ ಮತ್ತು ಹಾಸನ ಗ್ರಾಮಾಂತರ ಜಿಲ್ಲಾ ಸಮಿತಿಯ ಜಂಟಿ ಸಭೆಯು ಜಿಲ್ಲಾ ಕಛೇರಿಯಲ್ಲಿ ಜರುಗಿತು.

ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಗಳಾದ ಅಫ್ಸರ್ ಕೊಡ್ಲಿಪೇಟೆಯವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು? ಎಂಬ ಪಕ್ಷದ ನಿಲುವಿನ ಕುರಿತು ಮಹತ್ವಪೂರ್ಣ ನಿರ್ಧಾರಗಳನ್ನು ಕೈಗೊಂಡು ರಾಜ್ಯ ಸಮಿತಿಯ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ ಹಾಸನ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕೇವಲ ಎಲ್ಲಾ ಪಕ್ಷಗಳ ಓಟ್ ಗುದ್ದುವ ಮಿಷನ್ ಗಳು ಮಾತ್ರವೇ? ವಿಧಾನಸಭಾ ಚುನಾವಣೆ ಇರಲಿ ಲೋಕಸಭಾ ಚುನಾವಣೆ ಇರಲಿ ಹಾಸನ ಜಿಲ್ಲೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಎಲ್ಲಾ ರಾಜಕೀಯ ಪಕ್ಷಗಳ ನಿರ್ಲಕ್ಷಿಸುತ್ತಾ ಬಂದಿರುವುದು ಶೋಚನೀಯ ಸಂಗತಿ. ಈ ಲೋಕಸಭಾ ಚುನಾವಣೆಯಲ್ಲಿ ದಲಿತ ಮತ್ತು ಅಲ್ಪ ಸಂಖ್ಯಾತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಹೊಂದಿದ್ದು ಈ ಸಮುದಾಯಗಳು ಬಹಳ ಜಾಗರೂಕತೆಯಿಂದ ಮತವನ್ನು ಚಲಾಯಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಪಕ್ಷ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸದಿರಲು ತೀರ್ಮಾನಿಸಿದ್ದು, ರಾಜ್ಯಾದ್ಯಂತ ಯಾವ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬ ಬಗ್ಗೆ ಎಲ್ಲಾ ಜಿಲ್ಲಾ ಸಮಿತಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುತಿದ್ದು, ಇನ್ನಷ್ಟೇ ಅಂತಿಮ ತೀರ್ಮಾನವಾಗಬೇಕಿದೆ ಎಂದರು.

ಮುಂದಿನ ದಿನಗಳಲ್ಲಿ ಗುಲಾಮಿ ರಾಜಕೀಯದಿಂದ ಮುಕ್ತಿ ಪಡೆಯಲು ಚಿಂತಿಸಿ ಘನತೆಯ ರಾಜಕೀಯಕ್ಕಾಗಿ ಎಸ್ಡಿಪಿಐ ಪಕ್ಷವನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದ ಅವರು ಇದೇ ತಿಂಗಳ 26 ನೇ ತಾರೀಖಿನಂದು ನಡೆಯುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಚಲಾವಣೆಯ ಪರ್ಸೆಂಟೇಜ್ ಅನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸುವ ಸಲುವಾಗಿ ದಿನಾಂಕ 12/4/204 ರಂದು ಹಾಸನ ನಗರದಲ್ಲಿ ಮತ್ತು ದಿನಾಂಕ 14/4/2024 ರಂದು ಸಕಲೇಶಪುರದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಹಾಸನ ಗ್ರಾಮಾಂತರ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ, ಹಾಸನ ಗ್ರಾಮಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಜಿದ್ ಟೋಲ್ಗೇಟ್, ಜಿಲ್ಲಾ ಖಜಾಂಚಿ ಶಂಶುದ್ದೀನ್ ಜಿಲ್ಲಾ ಸಮಿತಿ ಸದಸ್ಯ ಸಾದಿಕ್, ಹಾಸನ ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್, ಉಪಾಧ್ಯಕ್ಷ ಅಮಾನುಲ್ಲಾ, ಜಿಲ್ಲಾ ಕಾರ್ಯದರ್ಶಿ ಇರ್ಫಾನ್ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿ ಅದ್ಯಕ್ಷ ಶಜೀಲ್ ಅಹ್ಮದ್, ಅರಸಿಕೆರೆ ವಿಧಾನಸಭಾ ಕ್ಷೇತ್ರ ಸಮಿತಿ ಅದ್ಯಕ್ಷ ಸೈಯದ್ ಅಜ್ಗರ್ ಮತ್ತು ಜಿಲ್ಲಾ ಸಮಿತಿಗಳ ಸದಸ್ಯರು ಹಾಜರಿದ್ದರು.

Leave a Reply