ಯುವಕರು ತಮ್ಮ ಮಾತೃಭಾಷೆಯನ್ನು ಸಂರಕ್ಷಿಸಬೇಕು: ಅಮಿತ್ ಶಾ

4 years ago

ಅಹಮದಾಬಾದ್: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶಅಮಿತ್ ಶಾ ಅವರು ಗಾಂಧಿನಗರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್ ಎಫ್ ಎಸ್ ಯು) ಮೊದಲ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.

ಜೊತೆಗೆ ಅವರು ಎನ್‌ಎಫ್‌ಎಸ್‌ಯು ಕ್ಯಾಂಪಸ್‌ನಲ್ಲಿ ನಾನಾ ಸೌಕರ್ಯಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಗುಜರಾತ್ ಕಾನೂನು ಸಚಿವ ರಾಜೇಂದ್ರ ತ್ರಿವೇದಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಎನ್ ಎಫ್ ಎಸ್ ಯುನ ಉಪಕುಲಪತಿ ಡಾ. ಜೆ.ಎಂ.ವ್ಯಾಸ್ ಮತ್ತಿತರ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅಮಿತ್ ಶಾ, ವಿಶ್ವದ ಮೊದಲ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಪದವಿಗಳನ್ನು ಪಡೆದ ನಂತರ ಸಮಾಜಕ್ಕೆ ಹಿಂತಿರುಗುತ್ತಿರುವ ವಿದ್ಯಾರ್ಥಿಗಳಿಗೆ ಈ ದಿನವು ಅತ್ಯಂತ ಮಹತ್ವದ್ದಾಗಿದೆ ಎಂದರು. 21 ದೇಶಗಳ 91 ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ 1,132 ವಿದ್ಯಾರ್ಥಿಗಳು ವಿಧಿ ವಿಜ್ಞಾನದ ನಾನಾ ಕ್ಷೇತ್ರಗಳಲ್ಲಿ ತಜ್ಞರಾಗಿ ಸಮಾಜಕ್ಕೆ ಹಿಂತಿರುಗುತ್ತಾರೆ ಎಂದು ಅವರು ಹೇಳಿದರು. ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಉದ್ದೇಶವನ್ನು ಈಡೇರಿಸುವಲ್ಲಿ ತಮ್ಮ ಪದವಿಯನ್ನು ಕಲಿಯುವ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಘಟಿಕೋತ್ಸವ ಸಮಾರಂಭದ ಜೊತೆಗೆ ಹೊಸ ಕ್ಯಾಂಪಸ್ ಮತ್ತು ಮೂರು ಶ್ರೇಷ್ಠತಾ ಕೇಂದ್ರಗಳನ್ನು ಉದ್ಘಾಟಿಸಲಾಯಿತು ಎಂದರು.

ಪ್ರಪಂಚದಾದ್ಯಂತ ವಿಶ್ವವಿದ್ಯಾಲಯದ ಸ್ವೀಕಾರ ಹೆಚ್ಚುತ್ತಿದೆ, ಒಂದು ದಶಕದೊಳಗೆ ಈ ವಿಶ್ವವಿದ್ಯಾಲಯವು ವಿಶ್ವದಲ್ಲೇ ಅತ್ಯುತ್ತಮ ತಾಣವಾಗುವುದು. ಮೂರು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಅವು ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಬಲವರ್ಧನೆಪಡಿಸುತ್ತದೆ ಎಂದರು.

ಡಿಎನ್‌ಎ ಕುರಿತ ಜ್ಯೇಷ್ಠತಾ ಕೇಂದ್ರ ವಿಶ್ವದ ಅತ್ಯಂತ ನವೀಕರಿಸಿದ ಡಿಎನ್‌ಎ ಕೇಂದ್ರವಾಗಿ ಹೊರಹೊಮ್ಮುತ್ತದೆ ಮತ್ತು ಸೈಬರ್ ಭದ್ರತೆ ಕುರಿತಾದ ಜ್ಯೇಷ್ಠತಾ ಕೇಂದ್ರದಿಂದ ಅಪರಾಧ ನ್ಯಾಯ ವ್ಯವಸ್ಥೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಮತ್ತು ತನಿಖೆ ಮತ್ತು ವಿಧಿ ವಿಜ್ಞಾನ ಮನಃಶಾಸ್ತ್ರದಲ್ಲಿನ ಶ್ರೇಷ್ಠತಾ ಕೇಂದ್ರದಿಂದ ಹೆಚ್ಚು ಪ್ರಯೋಜನ ಪಡೆಯುತ್ತದೆ. ಈ ಮೂರು ಕೇಂದ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಬೋಧನೆ, ತರಬೇತಿ ಮತ್ತು ಸಲಹಾ ಕೇಂದ್ರಗಳಾಗಲಿವೆ ಮತ್ತು ಭಾರತವು ವಿಧಿವಿಜ್ಞಾನ ಸಂಶೋಧನೆಯಲ್ಲಿ ಜಾಗತಿಕ ತಾಣವಾಗಿ ರೂಪುಗೊಳ್ಳಲಿದೆ. ಈ ಮೂರು ಕೇಂದ್ರಗಳ ಮೂಲಕ ಈ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ದೊಡ್ಡ ಅವಕಾಶವಿದೆ ಎಂದರು.

2002-2003ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ಅಪರಾಧ ಪ್ರಕರಣದಲ್ಲಿ ಶಿಕ್ಷೆ ಹೆಚ್ಚಾಗಲು ಸಾಕ್ಷ್ಯಗಳು ಹೆಚ್ಚಾಗಬೇಕು ಮತ್ತು ವಿಧಿ ವಿಜ್ಞಾನದ ಸಾಕ್ಷ್ಯವನ್ನು ನ್ಯಾಯಾಲಯದ ಮುಂದೆ ಇಡದವರೆಗೆ ಅಪರಾಧಗಳಲ್ಲಿನ ಶಿಕ್ಷಿತರ ಪ್ರಮಾಣವು ಹೆಚ್ಚಾಗುವುದಿಲ್ಲ ಎಂಬುದು ಅವರ ದೂರದೃಷ್ಟಿಯಾಗಿತ್ತು. ಅದಕ್ಕಾಗಿಯೇ ಅವರು ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಪೊಲೀಸ್ ಇಲಾಖೆಯಿಂದ ಸ್ವತಂತ್ರ ಗೊಳಿಸುವುದರ ಜೊತೆಗೆ ಅದನ್ನು ಬಲಪಡಿಸಲು ನಿರ್ಧರಿಸಿದ್ದರು ಮತ್ತು ಅದನ್ನು ದೇಶದ ಅತ್ಯುತ್ತಮ ವಿಧಿ ವಿಜ್ಞಾನ ಪ್ರಯೋಗಾಲಯವನ್ನಾಗಿ ಮಾಡಿದರು ಎಂದರು.

ನಂತರ ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯವು ತರಬೇತಿ ಪಡೆದ ಮಾನವ ಶಕ್ತಿಗಾಗಿ ಸ್ಥಾಪಿಸಲ್ಪಟ್ಟಿತು ಮತ್ತು ಅದರಿಂದ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದಾಗ ದೇಶದಾದ್ಯಂತ ಅಪರಾಧ ನ್ಯಾಯ ವ್ಯವಸ್ಥೆ ಬಲಪಡಿಸಲು ಮತ್ತು ವಿಧಿವಿಜ್ಞಾನದಲ್ಲಿ ಅಗತ್ಯ ಸಂಖ್ಯೆಯ ತಜ್ಞರನ್ನು ಒದಗಿಸಲು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ತೆರೆಯಲು ಮತ್ತೊಮ್ಮೆ ನಿರ್ಧರಿಸಿದರು ಎಂದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುತ್ತಿದೆ ಎಂದರು.

ಸ್ವಾತಂತ್ರ್ಯದ ನಂತರ ಈ ಕಾನೂನುಗಳನ್ನು ಯಾರೂ ಭಾರತೀಯ ದೃಷ್ಟಿಕೋನದಿಂದ ನೋಡಿಲ್ಲ. ಸ್ವತಂತ್ರ ಭಾರತದ ದೃಷ್ಟಿಕೋನದಿಂದ ಈ ಕಾನೂನುಗಳನ್ನು ಮರುರೂಪಿಸಬೇಕಾಗಿದೆ, ಆದ್ದರಿಂದ ಸರ್ಕಾರವು ಹಲವರೊಂದಿಗೆ ಚರ್ಚಿಸಿದ ನಂತರ ಈ ಮೂರು ಕಾಯ್ದೆಗಳಿಗೆ ಬದಲಾವಣೆಗಳನ್ನು ತರಲಿದೆ ಎಂದು ಅವರು ಹೇಳಿದರು. ಆರು ವರ್ಷಕ್ಕಿಂತ ಶಿಕ್ಷೆಯಾಗುವ ಎಲ್ಲಾ ಅಪರಾಧಗಳಲ್ಲಿ ವಿಧಿವಿಜ್ಞಾನ ಭೇಟಿಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯವನ್ನು ಕಡ್ಡಾಯವಾಗಿ ಮತ್ತು ಕಾನೂನು ಬದ್ಧಗೊಳಿಸಲಾಗುತ್ತದೆ. ಅದಕ್ಕಾಗಿ ತರಬೇತಿ ಪಡೆದ ಮಾನವ ಸಂಪನ್ಮೂಲ ಹಾಗೂ ಅವರ ತರಬೇತಿಗೂ ವ್ಯವಸ್ಥೆ ಮಾಡಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಈ ವಿಶ್ವವಿದ್ಯಾಲಯವು ಅನೇಕ ರಾಜ್ಯಗಳಲ್ಲಿ ತನ್ನ ಕ್ಯಾಂಪಸ್‌ಗಳನ್ನು ತೆರೆದಿದೆ ಎಂದರು.

ಗುಜರಾತ್‌ನ ಹೊರತಾಗಿ, ಭೋಪಾಲ್, ಗೋವಾ, ತ್ರಿಪುರಾ, ಮಣಿಪುರ ಮತ್ತು ಗುವಾಹಟಿಯಲ್ಲಿ ಅದರ ಕ್ಯಾಂಪಸ್‌ಗಳನ್ನು ತೆರೆಯಲಾಗಿದೆ, ಆದರೆ ಪುಣೆ ಮತ್ತು ಕರ್ನಾಟಕದಲ್ಲಿ ಚರ್ಚೆಗಳು ನಡೆಯುತ್ತಿವೆ ಮತ್ತು ಈ ಎಲ್ಲಾ ಕ್ಯಾಂಪಸ್‌ಗಳು ಒಟ್ಟಾಗಿ ಕೆಲಸ ಮಾಡಿದಾಗ, ರಾಷ್ಟ್ರವು ತರಬೇತಿ ಪಡೆದ ಮಾನವಸಂಪನ್ಮೂಲವನ್ನು ಹೊಂದಲಿದೆ ಎಂದರು.

ವಿಧಿವಿಜ್ಞಾನವನ್ನು ಬಲಪಡಿಸಲು, ವಿಧಿವಿಜ್ಞಾನ ಮೂಲಸೌಕರ್ಯ, ವಿಧಿವಿಜ್ಞಾನ ತಜ್ಞ ಮಾನವ ಸಂಪನ್ಮೂಲ, ವಿಧಿವಿಜ್ಞಾನ ತಂತ್ರಜ್ಞಾನ ಮತ್ತು ವಿಧಿವಿಜ್ಞಾನ ಈ ನಾಲ್ಕು ಸ್ತಂಭಗಳ ಮೇಲಿನ ಸಂಶೋಧನೆಗೆ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ವಿಧಿ ವಿಜ್ಞಾನದ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಅನೇಕ ರಾಜ್ಯಗಳಿಗೆ ನೆರವು ನೀಡುತ್ತಿದೆ ಮತ್ತು 2025 ರ ವೇಳೆಗೆ ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಸ್ಥಾಪಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

ವಿಧಿವಿಜ್ಞಾನ ಪ್ರಯೋಗಾಲಯ ತಂತ್ರಜ್ಞಾನವನ್ನು ಒದಗಿಸಲು ಹೆಚ್ಚಿನ ಕೆಲಸ ನಡೆದಿದೆ. ಸ್ವಾವಲಂಬಿ ಭಾರತದ ದೃಷ್ಟಿಯನ್ನು ಅರಿತು, ಎರಡು ವಿಧಿವಿಜ್ಞಾನ ಸಂಚಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಎರಡೂ ಪ್ರಯೋಗಾಲಯಗಳನ್ನು ಭಾರತೀಯ ಕಂಪನಿಗಳು ತಯಾರಿಸಿವೆ ಮತ್ತು ಅವು ಸಂಪೂರ್ಣವಾಗಿ ಸ್ಥಳೀಯವಾಗಿವೆ. ಈ ಪ್ರಯೋಗಾಲಯಗಳು ವಿಶ್ವದ ಅತ್ಯಂತ ಆಧುನಿಕವಾದವುಗಳಾಗಿವೆ. ಇಂತಹ ಸಂಚಾರಿ ಪ್ರಯೋಗಾಲಯಗಳು ಪ್ರತಿ ಜಿಲ್ಲೆಯಲ್ಲೂ ಲಭ್ಯವಾಗಲಿವೆ ಎಂದರು.

ಪ್ರತಿ ರಾಜ್ಯದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ಮಾತ್ರ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯಿದೆಯಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಇದು ಕೆಳ ದರ್ಜೆಯ ಶಿಕ್ಷೆ ನೀಡುವ (ಥರ್ಡ್ ಡಿಗ್ರಿ ಟ್ರೀಟ್ ಮೆಂಟ್) ಯುಗವಲ್ಲ, ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲಾಗುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲು ಸಾಕ್ಷ್ಯಗಳೂ ಹೆಚ್ಚಾಗುತ್ತದೆ ಎಂದರು.

ದೇಶದ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾನಿಲಯಗಳಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ರಚಿಸುವ ಮೂಲಕ ದೇಶದ ಅಭಿವೃದ್ಧಿಯೊಂದಿಗೆ ಯುವಜನರನ್ನು ಸಂಪರ್ಕಿಸುವಂತೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದರು.

ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವು ಈ ಅಂಶವನ್ನು ಪೂರೈಸುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ಅಗತ್ಯಗಳ ಆಧಾರದ ಮೇಲೆ ಯುವಕರಿಗೆ ಜ್ಞಾನ ಮತ್ತು ಕೌಶಲ್ಯ ಎರಡನ್ನೂ ನೀಡಲು ಹೆಚ್ಚಿನ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಪ್ರಮುಖ ಸಂಸ್ಥೆಯ ಸ್ಥಾನಮಾನ ನೀಡಲಾಗಿದೆ, ಇದರಿಂದಾಗಿ ಇದು ದೇಶಾದ್ಯಂತ ಹೆಚ್ಚು ಅಂಗೀಕರಿಸಲ್ಪಟ್ಟಿದೆ ಮತ್ತು ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಸಮಾನ ಶೈಕ್ಷಣಿಕ ಅವಕಾಶಗಳನ್ನು ಪಡೆಯುತ್ತಾರೆ. 70ಕ್ಕೂ ಹೆಚ್ಚು ದೇಶಗಳು ಹಾಗೂ ಹಲವು ಸಂಸ್ಥೆಗಳು ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ 158ಕ್ಕೂ ಹೆಚ್ಚು ಒಡಂಬಡಿಕೆಗಳಿಗೆ ಸಹಿ ಹಾಕಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವು ವಿಧಿ ವಿಜ್ಞಾನದಲ್ಲಿ ತಜ್ಞರನ್ನು ರೂಪಿಸುವುದು ಮಾತ್ರವಲ್ಲದೆ, ಪೊಲೀಸ್ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸೇರಿದಂತೆ ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲಾ ಅಂಗಗಳಿಗೆ ತರಬೇತಿ ನೀಡಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದರು.

ಈ ವಿಶ್ವವಿದ್ಯಾಲಯದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಗೆ ಸಂಬಂಧಿಸಿದ 28,000 ಕ್ಕೂ ಹೆಚ್ಚು ಅಧಿಕಾರಿಗಳಿಗೆ ಇದುವರೆಗೆ ತರಬೇತಿ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ ಮತ್ತು ಭಾರತವು ಜಾಗತಿಕ ಉತ್ಪಾದನಾ ತಾಣವಾಗಲಿದೆ ಎಂದರು.

ಈ ಪರಿಸ್ಥಿತಿಯಲ್ಲಿ, ಮಾದಕ ದ್ರವ್ಯ, ನಕಲಿ ಕರೆನ್ಸಿ ಮತ್ತು ಸೈಬರ್ ದಾಳಿಯಂತಹ ಅನೇಕ ಸವಾಲುಗಳು ಹೊರಹೊಮ್ಮುತ್ತಿವೆ. ವಿಧಿವಿಜ್ಞಾನವನ್ನು ಬಲಪಡಿಸಬೇಕು ಮತ್ತು ಈ ಸವಾಲುಗಳನ್ನು ಎದುರಿಸುವಲ್ಲಿ ವಿಧಿ ವಿಜ್ಞಾನ ವಿದ್ಯಾರ್ಥಿಗಳು ಬಹಳ ಮುಖ್ಯವಾದ ಕೊಡುಗೆಯನ್ನು ಹೊಂದಿರುತ್ತಾರೆ. ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಏಕೀಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಇದರಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚಿನ ಶಿಕ್ಷೆಯ ಪ್ರಮಾಣ ಸಾಧಿಸಬಹುದು ಎಂದರು.

ಪ್ರತಿ ಜಿಲ್ಲೆಯಲ್ಲೂ ವಿಧಿವಿಜ್ಞಾನ ಸಂಚಾರಿ ತನಿಖಾ ಸೌಲಭ್ಯಗಳನ್ನು ಒದಗಿಸಲು ಮತ್ತು ತನಿಖೆಯ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವನ್ನು ಕಾಪಾಡಿಕೊಳ್ಳಲು ಕಾನೂನು ಚೌಕಟ್ಟನ್ನು ರೂಪಿಸಲಾಗುವುದು ಎಂದರು.

ಗೃಹ ವ್ಯವಹಾರಗಳ ಸಚಿವಾಲಯವು ವಿಧಿವಿಜ್ಞಾನ ಸೇವೆಯ ನಿರ್ದೇಶನಾಲಯ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಿಂದ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ಕೇಂದ್ರವನ್ನು ಆರಂಭಿಸುವವರೆಗೆ ವಿಧಿ ವಿಜ್ಞಾನದಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಅಂತೆಯೇ, ಸಿಎಫ್‌ಎಸ್‌ಎಲ್ ಅನ್ನು ಬಲವರ್ಧನೆಗೊಳಿಸುವುದು, ದೇಶಾದ್ಯಂತ ಡಿಎನ್‌ಎ ಪರೀಕ್ಷೆಗಳಿಗೆ ಮೂಲಸೌಕರ್ಯ ಜಾಲ ಅಳವಡಿಸುವುದು ಮತ್ತು ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರವನ್ನು ಸ್ಥಾಪಿಸಲು ಸಹ ಕ್ರಮ ಕೈಗೊಳ್ಳಲಾಗಿದೆ. ಎನ್ ಎಎಫ್ ಐಎಸ್ ಅಡಿಯಲ್ಲಿ ದೇಶಾದ್ಯಂತ ಸುಮಾರು 2 ಕೋಟಿ ಅಪರಾಧಿಗಳ ಬೆರಳಚ್ಚು ದತ್ತಾಂಶ (ಫಿಂಗರ್‌ಪ್ರಿಂಟ್ ಡೇಟಾವನ್ನು) ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ, ನಿರ್ಭಯಾ ನಿಧಿಯು ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ಆಜಾದಿ ಕಾ ಅಮೃತ್ ಮಹೋತ್ಸವ ವರ್ಷದಲ್ಲಿ ಪದವಿಗಳನ್ನು ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಮಹತ್ವದ ದಿನವಾಗಿದೆ. ನಮ್ಮ 75 ವರ್ಷಗಳ ಪ್ರಯಾಣ ಎಷ್ಟು ಸುಂದರ, ಆಸಕ್ತಿದಾಯಕ ಮತ್ತು ಚಿಂತನಶೀಲವಾಗಿದೆಯೋ, ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟವು ಅದಕ್ಕಿಂತ ಹೆಚ್ಚು ನೋವಿನಿಂದ ಕೂಡಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಯುವಜನತೆ ಒಂದು ಕ್ಷಣವೂ ಮರೆಯಬಾರದು ಎಂದರು.

ವಿದ್ಯಾರ್ಥಿಗಳು ಅದನ್ನು ನೆನಪಿಸಿಕೊಂಡರೆ, ಅವರು ರಾಷ್ಟ್ರದ ಅಭಿವೃದ್ಧಿಗೆ ಮತ್ತು ತಮ್ಮ ಅಭಿವೃದ್ಧಿಗೂ ಗಣನೀಯ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಇಂದು ನೀಡಲಾಗುವ ಪದವಿಗಳು ವಿದ್ಯಾರ್ಥಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುವುದಿಲ್ಲ ಆದರೆ ಸಮಾಜದ ಸುಧಾರಣೆ ಮತ್ತು ಸಾಮಾಜಿಕ ಸುಧಾರಣೆಯನ್ನು ತರಲು ಬಳಸಿದರೆ ಅದು ದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಮಹಾತ್ಮಾ ಗಾಂಧೀಜಿಯವರ ಮಾತುಗಳನ್ನು ಉಲ್ಲೇಖಿಸಿದ ಅವರು, ಶಿಕ್ಷಣದ ಮಹತ್ವವು ಅದರ ಪರಿಮಳವನ್ನು ಎಲ್ಲೆಡೆ ಹರಡುತ್ತದೆ ಮತ್ತು ಇಡೀ ಸಮಾಜಕ್ಕೆ ಸುಗಂಧ ಪಸರಿಸುವಂತೆ ಮಾಡುತ್ತದೆ ಎಂದರು.

ಸಮಾಜ ಮತ್ತು ವ್ಯವಸ್ಥೆಯ ಉನ್ನತಿಗಾಗಿ ಶ್ರಮಿಸಬೇಕು. ತಮ್ಮ ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯು ತಮಗಾಗಿ ಮತ್ತು ಇತರರಿಗೆ ಮತ್ತು ದೇಶಕ್ಕಾಗಿ ಕೆಲಸ ಮಾಡಬೇಕು, ಏಕೆಂದರೆ ಅದೇ ಹೆಚ್ಚು ತೃಪ್ತಿ ಮತ್ತು ಸಂತೋಷವನ್ನು ನೀಡುತ್ತದೆ ಎಂದರು.

ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಒಬ್ಬರು ಯಾವುದೇ ಭಾಷೆಯಲ್ಲಿ ಅಧ್ಯಯನ ಮಾಡಬಹುದು, ಆದರೆ ಮನೆಯಲ್ಲಿ ತಮ್ಮ ಮಾತೃಭಾಷೆಯನ್ನೇ ಮಾತನಾಡಬೇಕು ಮತ್ತು ಈ ಪ್ರಯತ್ನವು ದೀರ್ಘಾವಧಿಯಲ್ಲಿ ದೇಶಕ್ಕೆ ಒಳ್ಳೆಯ ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದೀಗ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಕೋರ್ಸ್‌ಗಳಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದರು. ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಮಾತೃಭಾಷೆಯನ್ನು ಸಂರಕ್ಷಿಸಬೇಕು ಮತ್ತು ಮನೆಯಲ್ಲಿ ತಮ್ಮ ಭಾಷೆಗಳಲ್ಲಿ ಮಾತನಾಡಬೇಕು, ಬರೆಯಬೇಕು ಮತ್ತು ಓದಬೇಕು ಎಂದರು.

Leave a Reply