ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 14,500 ಅತಿಥಿ ಉಪನ್ಯಾಸಕರು ಕಳೆದ ಡಿಸೆಂಬರ್ 10ರಿಂದ ಸೇವಾಭದ್ರತೆ ಮತ್ತು ಖಾಯಂಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಒಂದು ಹಂತ ತಲುಪಿದೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ತುಸು ಖುಷಿಯ ಸಂಗತಿಯನ್ನು ನೀಡಿದೆ. ವೇತನದ ಪ್ರಮಾಣವನ್ನು ಎರಡುಪಟ್ಟು ಮಾಡಿದ್ದು, ಸೆಮಿಸ್ಟರ್ ಪ್ರಕಾರದ ನೇಮಕಕ್ಕೆ ತಡೆ ಹಾಕಿ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ.
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ.
— Basavaraj S Bommai (@BSBommai) January 14, 2022
ವಿಧಾನಸೌಧದಲ್ಲಿ ಶುಕ್ರವಾರ ಈ ಕುರಿತು ಮಾತಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಯುಜಿಸಿ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಇದ್ದು, 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ. ಹಾಗೂ 5 ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವ ಅತಿಥಿ ಉಪನ್ಯಾಸಕರಿಗೆ 30 ಸಾವಿರ ರೂ. ಗೌರವ ಧನ ನೀಡುವುದಾಗಿ ಘೋಷಿಸಿದರು.
ನಮ್ಮೆಲ್ಲ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಯ ಒಳಗೆ ಸಿಹಿ ಸುದ್ದಿ ಕೊಡುವ ಭರವಸೆ ನೀಡಿದ್ದೆವು. ಅಂತೆಯೇ ಮಾನ್ಯ ಮುಖ್ಯಮಂತ್ರಿ @BSBommai ಅವರ ನೇತೃತ್ವದ ನಮ್ಮ @BJP4Karnataka ಸರ್ಕಾರ ಸಂಕ್ರಾಂತಿ ಹಬ್ಬವಾದ ಇಂದು ಆ ಭರವಸೆಯನ್ನು ನೆರವೇರಿಸಿದೆ.
ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. https://t.co/q1p4GZJGoP pic.twitter.com/WSbC5s4tAX
— Dr. C.N. Ashwath Narayan (@drashwathcn) January 14, 2022
5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿಯೂ ಯುಜಿಸಿ ಅರ್ಹತೆ ಇಲ್ಲದವರಿಗೆ ವೇತನವನ್ನು ರೂ. 28 ಸಾವಿರಕ್ಕೆ ಏರಿಸಲಾಗಿದೆ. ಅತಿಥಿ ಉಪನ್ಯಾಸಕರ ಕಾರ್ಯಭಾರದ ಅವಧಿಯನ್ನು ಈಗಿನ 8 ರಿಂದ 10 ಗಂಟೆಯಿಂದ 15 ಗಂಟೆಗಳಿಗೆ ಹೆಚ್ಚಿಸಲಾಗಿದೆ ಎಂದರು.




