ದೇಶಭಾಷಾ ದಿನ, ನಾಡನುಡಿ ದಿನ, ನಾಡಭಾಷೆ ದಿನ ಆಚರಣೆಗೆ ಸಲಹೆ
ಒಕ್ಕೂಟ ಮತ್ತು ರಾಜ್ಯ ಸರ್ಕಾರಕ್ಕೆ KRS ಪಕ್ಷದ ಆಗ್ರಹ ಮತ್ತು ರಾಜ್ಯದ ಜನತೆಗೆ ಕರೆ
ಬೆಂಗಳೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತೀಯರು ಬ್ರಿಟಿಷರಿಗೆ ಎಲ್ಲಾ ಹಂತಗಳಲ್ಲಿಯೂ ಅಸಹಕಾರ ತೋರಬೇಕು, ಬ್ರಿಟಿಷ್ ಸರ್ಕಾರದ ನೌಕರಿಗಳನ್ನು ತೊರೆಯಬೇಕು, ಹಾಗೆಯೇ ಬ್ರಿಟಿಷರ ಭಾಷೆಯಾದ ಇಂಗ್ಲಿಷ್ ಬದಲಿಗೆ ಅಂದು ಭಾರತದ ಅತಿ ಹೆಚ್ಚು ಜನ ಮಾತನಾಡುವ ಭಾಷೆಯಾಗಿದ್ದ ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರಾಷ್ಟ್ರವಾದ ಬೆಳೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಅಂದಿನ ಚಾರಿತ್ರಿಕ ಸಂದರ್ಭದ ತುರ್ತು ಮತ್ತು ಉದಾತ್ತ ಧೋರಣೆಯಿಂದ ಮಹಾತ್ಮ ಗಾಂಧಿಯವರು ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಅದೇ ಸಮಯದಲ್ಲಿ ಮಹಾತ್ಮ ಗಾಂಧಿಯವರು ಮಾತೃಭಾಷೆಯ ಉಗ್ರ ಪ್ರತಿಪಾದಕರೂ ಆಗಿದ್ದರು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಸೆಪ್ಟಂಬರ್ 14ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿ ದಿವಸ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇದು ಸ್ವಾತಂತ್ರ್ಯ ಹೋರಾಟದ ಸಂದರ್ಭವೂ ಅಲ್ಲ, ಈಗ ಹಿಂದಿಯೇತರರು ಹಿಂದಿಯನ್ನು ಕಲಿಯಲೇಬೇಕಾದ ಅಗತ್ಯ/ಅನಿವಾರ್ಯತೆಯೂ ಇಲ್ಲ. ಸರ್ಕಾರಗಳೇ ಮುಂದೆ ನಿಂತು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವ ಸಂದರ್ಭದಲ್ಲಿ ಇಂಗ್ಲಿಷ್ ಅನ್ನು ವಿರೋಧಿಸುವ ವಿಚಾರವೇ ಅರ್ಥಹೀನ ಎಂದಿದ್ದಾರೆ.
ತ್ರಿಭಾಷಾ ಸೂತ್ರ ಎನ್ನುವುದು ದಕ್ಷಿಣ ಭಾರತದ ರಾಜ್ಯಗಳಿಗೆ ಅಥವಾ ಹಿಂದಿಯೇತರ ಆಡಳಿತ ಭಾಷೆ ಹೊಂದಿರುವ ರಾಜ್ಯಗಳಿಗೆ ಮಾತ್ರ ಅನ್ವಯವಾಗುವುದು ಹಿಂದಿಯೇತರ ಭಾಷೆಗಳ ಜನರಿಗೆ ಅವಮಾನಕಾರಿ ಮತ್ತು ಒಪ್ಪಿತವಲ್ಲದ್ದು. ಹಿಂದಿ ರಾಜ್ಯಭಾಷೆಯಾಗಿರುವ ಯಾವ ರಾಜ್ಯಗಳಲ್ಲಿ ಕನ್ನಡವೂ ಸೇರಿದಂತೆ ಯಾವ ದ್ರಾವಿಡ ಭಾಷೆಯನ್ನು ಅಲ್ಲಿ ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ? ಇದು ತಾರತಮ್ಯ ನಡವಳಿಕೆ ಮತ್ತು ವಿಶೇಷವಾಗಿ ದ್ರಾವಿಡ ಭಾಷೆಗಳ ಜನರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ಹೊರೆ ಎಂದಿದ್ದಾರೆ.
ಭಾರತದ ಒಕ್ಕೂಟ ಸರ್ಕಾರವು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 14ರಂದು ಬಹಳ ಉಮೇದಿನಿಂದ ನಡೆಸುವ ಸರ್ಕಾರಿ ಪ್ರಾಯೋಜಿತ “ಹಿಂದಿ ದಿವಸ್” ಆಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಕನ್ನಡಿಗರಿಗಂತೂ ಇದು ಒಪ್ಪಿತವಲ್ಲದ ವಿಚಾರ. ವೈಯಕ್ತಿಕ ಇಚ್ಚೆಯಿಂದ ಯಾರು ಯಾವುದನ್ನು ಬೇಕಾದರೂ ಕಲಿಯಬಹುದು. ಆದರೆ ಕೃತಕ ಅನಿವಾರ್ಯತೆಯನ್ನು ಸೃಷ್ಟಿಸಿ ಬಲವಂತವಾಗಿ ಹೇರಿಕೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಜೊತೆಗೆ ಜನರ ತೆರಿಗೆ ಹಣದ ದುರ್ಬಳಕೆ ಎಂದಿದ್ದಾರೆ.
ದೇಶವಾಸಿಗಳೆಲ್ಲ ಹಿಂದಿ ಕಲಿಯುವ ಅಥವ “ಹಿಂದಿ ದಿವಸ್” ಆಚರಣೆ ಮಾಡಬೇಕಾದ ಚಾರಿತ್ರಿಕ ಹಿನ್ನೆಲೆ ಈಗ ಅಪ್ರಸ್ತುತವಾಗಿರುವ ಕಾರಣ ಭಾರತದ ಒಕ್ಕೂಟ ಸರಕಾರವು ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ವಿರೋಧಿ ಭಾವ ಬೆಳೆಯುವಂತೆ ಮಾಡುವ ಬದಲಿಗೆ ದೇಶಭಾಷೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಹಿಂದಿ ದಿವಸ್ ಅನ್ನು “ದೇಶಭಾಷಾ ದಿನ” ಎಂದು ಘೋಷಿಸಬೇಕು. ಅಂದು ರಾಜ್ಯ ಸರ್ಕಾರಗಳು “ನಾಡಭಾಷೆ ದಿನ” ಆಚರಿಸಿ ಆಯಾ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಸರ್ಕಾರದ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಎರಡೂ ಸರ್ಕಾರಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆಗ್ರಹ. ಹಾಗೆಯೇ, ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ “ಹಿಂದಿ ದಿವಸ್” ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ ಅಂದು ಅದಕ್ಕೆ ಪರ್ಯಾಯವಾಗಿ “ನಾಡಭಾಷೆ ದಿನ” ಆಚರಿಸಬೇಕು ಮತ್ತು ಸರ್ಕಾರದ ಜೊತೆ ನಡೆಸುವ ಎಲ್ಲಾ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡಲು ಮುಂದಾಗಬೇಕು ಎಂದು ರಾಜ್ಯದ ಜನತೆಗೆ KRS ಪಕ್ಷ ಈ ಮೂಲಕ ಕರೆ ನೀಡಿದ್ದಾರೆ.
ಮುಂದುವರೆದ ಭಾಗವಾಗಿ KRS ಪಕ್ಷ ಇದೇ ಸೆಪ್ಟೆಂಬರ್ 14ರಂದು ಪಕ್ಷದ ಕಚೇರಿಯಲ್ಲಿ ಫೇಸ್ಬುಕ್ ಲೈವ್ ಕಾರ್ಯಕ್ರಮದ ಮೂಲಕ ಮತ್ತಷ್ಟು ವಿಚಾರಗಳನ್ನು ಜನರ ಮುಂದೆ ಇಡಲಿದೆ. ರಾಜ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುವ ಪ್ರತಿಯೊಬ್ಬರೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕು ಎನ್ನುವ ವಿಚಾರವೂ ಸೇರಿದಂತೆ ಕನ್ನಡ ಭಾಷೆಯ ವಿಚಾರದಲ್ಲಿ ಮತ್ತು ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಈ ಸಂದರ್ಭದಲ್ಲಿ KRS ಪಕ್ಷವು ಘೋಷಿಸುತ್ತದೆ ಎಂದಿದ್ದಾರೆ.
ಭಾಷಾ ವಿಚಾರವಾಗಿ ಕನ್ನಡಿಗರಿಗೆ ಒಪ್ಪಿತವಲ್ಲದ ರಾಜಕಾರಣ ಮಾಡುವ ರಾಷ್ಟ್ರೀಯ ಪಕ್ಷಗಳನ್ನು, ಅವುಗಳ ಪುಕ್ಕಲು ಹಾಗೂ ಅಭಿಮಾನಹೀನ ರಾಜಕಾರಣಿಗಳನ್ನು, ಹಾಗೆಯೇ ಅವಕಾಶವಾದಿ ರಾಜಕಾರಣ ಮಾಡುವ ಭ್ರಷ್ಟ ಪಕ್ಷಗಳನ್ನು ತಿರಸ್ಕರಿಸಬೇಕು ಮತ್ತು ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ, ಕನ್ನಡಪರ ರಾಜಕಾರಣ ಮಾಡುತ್ತಿರುವ KRS ಪಕ್ಷವನ್ನು ರಾಜ್ಯದ ಜನತೆ ಸಕ್ರಿಯವಾಗಿ ಬೆಂಬಲಿಸಬೇಕು ಎಂದು ಈ ಮೂಲಕ KRS ಪಕ್ಷವು ಸವಿನಯದಿಂದ ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತದೆ ಎಂದಿದ್ದಾರೆ.



