ರಾಜೀವ್ ಗಾಂಧಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಜಾರಿಗೆ ತಂದರು: ಸಿದ್ದರಾಮಯ್ಯ

2 years ago

ಬೆಂಗಳೂರು: ರಾಜೀವ್ ಗಾಂಧಿ ಹಾಗೂ ದೇವರಾಜ ಅರಸುರವರ ಬದುಕು – ಕೆಲಸಗಳು ನಮಗೆ ಮಾರ್ಗದರ್ಶಿಯಾಗಿದೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜೀವ್ ಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಆಧುನಿಕ ಭಾರತದ ಕನಸನ್ನು ಕಂಡಿದ್ದರು. ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿದ್ದರು. ಅವರು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಕಾರಣಕರ್ತರಾಗಿದ್ದರು ಎಂದರು.

ರಾಜೀವ್ ಗಾಂಧಿಯವರು ಸದಾಕಾಲ ಸಾಮಾಜಿಕ ನ್ಯಾಯದ ಪರವಿದ್ದರು. ದೇಶದಲ್ಲಿ ಬದಲಾವಣೆ ಆಗಬೇಕು. ಸಮಾನ ಅವಕಾಶ ಸಿಗಬೇಕು ಎಂದು ಹಂಬಲಿಸಿದರು. ಯಾವುದೇ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಭೇದ ಮರೆತು, ಎಲ್ಲೇ ಇದ್ದರೂ ಭಾರತೀಯರು ಒಗ್ಗಟ್ಟಾಗಿರಬೇಕು ಎಂಬ ಕನಸನ್ನು ಕಂಡಿದ್ದರು ಎಂದು ಮೆಲುಕು ಹಾಕಿದರು.

ವಿಶೇಷವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಪಾಲು ಸಿಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಜಾರಿಗೆ ತಂದರು. ಈ ದೇಶದಲ್ಲಿ ಏನಾದರೂ ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಕ್ಕಿದ್ದರೆ, ಸಂವಿಧಾನಕ್ಕೆ ತಂದ ಈ ತಿದ್ದುಪಡಿಗಳು ಕಾರಣ ಎಂದರು.

ಭಾರತೀಯ ಜನತಾ ಪಕ್ಷದವರು ತಾವು ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರ ಪರ ಎಂದು ಎಷ್ಟೇ ಹೇಳಿಕೊಂಡರೂ, ಅವರು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ಇರಲು ಸಾಧ್ಯವೇ ಇಲ್ಲ. ಬಡವರು ಯಥಾ ಸ್ಥಿತಿಯಲ್ಲಿರಬೇಕು, ಅವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರಬಾರದು ಎಂದು ಬಯಸುತ್ತಾರೆ. ಬಾಯಿ ಮಾತೇ ಬೇರೆ, ಕೃತಿಯೇ ಬೇರೆ ಎಂದರು.

ಇಂದು ದೇಶದ ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಗೆ ರಾಜೀವ್ ಗಾಂಧಿಯವರು ಕಾರಣ. ರಾಜೀವ್ ಗಾಂಧಿಯವರು ಯುವ ಶಕ್ತಿ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಆದ್ದರಿಂದ ಮತದಾನದ ವಯಸ್ಸು 21 ರಿಂದ 18ಕ್ಕೆ ಇಳಿಸಿದರು. ಅವರು ಇನ್ನೂ ಬದುಕಿರಬೇಕಾಗಿತ್ತು. ಅವರು ಇದ್ದಿದ್ದರೆ ದೇಶದಲ್ಲಿ ನಿಜವಾದ ಬದಲಾವಣೆ ಆಗಿರುತ್ತಿತ್ತು. ದೇಶ, ಸಮಾಜದ ಬಗ್ಗೆ ಕಾಳಜಿ ಇದ್ದವರು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು ಎಂದರು.

Leave a Reply