ಪ್ರಜ್ವಲ್ ರೇವಣ್ಣ ಪ್ರಕರಣ: 100 ಕೋಟಿ ಆಫರ್‌ ಆರೋಪ

2 years ago

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ 100 ಕೋಟಿ ಆಫರ್‌ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಪೆನ್ ಡ್ರೈವ್ ಪ್ರಕರಣ ಇಷ್ಟೊಂದು ಪ್ರಮುಖ ಪಾತ್ರ ನಿರ್ವಹಿಸಲು ಡಿ.ಕೆ.ಶಿವಕುಮಾರ್‌ ಮಾತ್ರವಲ್ಲದೆ, ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ ಕಾರಣ ಎಂದು ದೇವರಾಜೇಗೌಡ ಇವರೆಲ್ಲರ ಹೆಸರನ್ನೂ ಉಲ್ಲೇಖ ಮಾಡಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪ್ರಜ್ವಲ್‌ ಕಾರು ಚಾಲಕ ಕಾರ್ತಿಕ್‌ ಗೌಡ ಹತ್ತಿರ ಪೆನ್‌ಡ್ರೈವ್‌ ತರಿಸಿಕೊಂಡು ಎಲ್ಲಾ ರೆಡಿ ಮಾಡಿದ ಡಿ.ಕೆ ಶಿವಕುಮಾರ್‌ ನಾಲ್ಕು ಸಚಿವರ ಕಮಿಟಿ ಮಾಡಿ ಇದನ್ನೆಲ್ಲಾ ಹ್ಯಾಂಡಲ್‌ ಮಾಡಬೇಕು ಎಂದು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ತಮಗೆ 100 ಕೋಟಿ ರೂಪಾಯಿಗಳ ಆಫರ್ ಮಾಡಿದ್ದು, ಬೌರಿಂಗ್ ಕ್ಲಬ್ ನ ಕೊಠಡಿ ಸಂಖ್ಯೆ 110 ರಲ್ಲಿ ಇದ್ದ ತಮಗೆ 5 ಕೋಟಿ ರೂಪಾಯಿಗಳನ್ನು ರವಾನಿಸಿದ್ದರು ಎಂದು ಹೇಳಿರುವುದು ಕೋಲಾಹಲಕ್ಕೆ ಕಾರಣವಾಗಿದೆ.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಮುಖಂಡ ದೇವರಾಜೇಗೌಡ ಮಾನಸಿಕ ಅಸ್ವಸ್ಥ, ಆತನ ಆರೋಪಗಳಿಗೆ ಪ್ರತಿಕ್ರಿಸುವ ಅಗತ್ಯವಿಲ್ಲ. ಮೆಂಟಲ್ ಕೇಸ್ ಗಳನ್ನು ಆಸ್ಪತ್ರೆಗೆ ಸೇರಿಸಬೇಕು. ಇಂತಹವರ ಹೇಳಿಕೆಗಳಿಗೆ ಮಾಧ್ಯಮಗಳು ಪ್ರಾತಿನಿಧ್ಯತೆ ಕೊಡಬಾರದು ಎಂದರು.

ದೇವರಾಜೇಗೌಡನ ಜತೆ ನಾನು ಏನನ್ನೂ ಮಾತನಾಡಿಲ್ಲ. ನಾನು ಈ ರಾಜ್ಯದ ಉಪ ಮುಖ್ಯಮಂತ್ರಿ. ಸಾವಿರಾರು ಜನರು ನನ್ನನ್ನು ಭೇಟಿಮಾಡುತ್ತಾರೆ. ಅವರೆಲ್ಲರನ್ನೂ ಸ್ಕ್ಯಾನ್‌ ಮಾಡಿ ನೋಡಲು ಆಗುವುದಿಲ್ಲ. ನಾನು ಯಾರ ಜತೆಗೂ ತಪ್ಪು ಮಾತನಾಡಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ವಕೀಲ ದೇವರಾಜೇಗೌಡ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಅವರು ನೇರವಾಗಿ ಅಮಿತ್‌ ಶಾ ಜತೆ ಸಂಪರ್ಕ ಹೊಂದಿದ್ದರು. ಅಮಿತ್‌ ಶಾ ಆಶೀರ್ವಾದದಿಂದಲೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹಿಂದೆ ಹೇಳಿಕೊಂಡಿದ್ದರು. ಪೆನ್‌ ಡ್ರೈವ್‌ ಬಹಿರಂಗಕ್ಕೂ ಅಮಿತ್‌ ಶಾ ಆಶೀರ್ವಾದ ಇದ್ದಿರಬಹುದು ಎಂದರು.

100 ಕೋಟಿ ಆಮಿಷ ಒಡ್ಡಿ, 5 ಕೋಟಿ ಮುಂಗಡ ನೀಡಲಾಗಿತ್ತು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಅದು ನಿಜವೇ ಆಗಿದ್ದರೆ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಿ ಆದಾಯ ತೆರಿಗೆ, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕಿತ್ತು. ವಕೀಲರಾಗಿರುವ ಅವರು ನ್ಯಾಯಾಧೀಶರ ಮುಂದಾದರೂ ಮಾಹಿತಿ ನೀಡಬೇಕಿತ್ತು ಎಂದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ, ಕಾರ್ತಿಕ್‌ ಮತ್ತು ದೇವರಾಜೇಗೌಡ ಪ್ರಮುಖ ಆರೋಪಿಗಳು. ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ. ಬಂಧನದಲ್ಲಿರುವ ದೇವರಾಜೇಗೌಡ  100 ಕೋಟಿ ಆಮಿಷದ ಆರೋಪ ಮಾಡಿದರೆ, ಅದಕ್ಕೆ ಪ್ರಚಾರ ನೀಡುವುದು ಸರಿಯೆ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.

ಶಿವಕುಮಾರ್‌ ಈ ರಾಜ್ಯದ ಉಪ ಮುಖ್ಯಮಂತ್ರಿ. ಪ್ರಕರಣದ ಮಾಹಿತಿ ಕೊಡಲು ದೇವರಾಜೇಗೌಡ ಸಂಪರ್ಕಿಸಿರಬಹುದು. ಅದನ್ನೇ ತಿರುಚಿ ಆರೋಪ ಮಾಡುವುದು ಸರಿಯಲ್ಲ. ನಾವುಗಳು ಯಾರಾದರೂ ಇದರಲ್ಲಿ ಪಿತೂರಿ ಮಾಡಿದ್ದರೆ ಬೇಷರತ್ ಕ್ಷಮೆ ಯಾಚನೆಗೆ ಸಿದ್ದ ಎಂದರು.

ಕುಮಾರಸ್ವಾಮಿ ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಲಿ. ಎಸ್‌ಐಟಿ ಎದುರು ಶರಣಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಲಿ. ಆತ ಶರಣಾದರೆ ತನಿಖೆ ಮುಂದಕ್ಕೆ ಸಾಗುತ್ತದೆ. ಸತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದರು.

Leave a Reply