ಹಣವಿಲ್ಲದ ಮಾಜಿ ಜಿಲ್ಲಾಧಿಕಾರಿ ಎಂ.ಪಿ. ಆಗಿದ್ದು

2 years ago

ಹುಟ್ಟಿದ್ದು ತಮಿಳನಾಡಿನ ದಲಿತ ಕುಟುಂಬದಲ್ಲಿ. ಪ್ರತಿಭಾಶಾಲಿ. ಶಾಲೆಯಲ್ಲಿ ಕಾಲೇಜಿನಲ್ಲಿ ಯಾವಾಗಲೂ ಮೊದಲಿಗ. ಏನಾದರೂ ಸಾದಿಸಬೇಕೆಂದು ಐ. ಎ. ಎಸ್. ಬರೆದು ಜನರಲ್ ಮೆರಿಟ್ಟು ೯ನೆಯ ರ್ಯಾಂಕ ಪಡೆದ ದಲಿತ ಯುವಕ.

ಕರ್ನಾಟಕ ಕೇಡರ್ ಆಯ್ಕೆ ಮಾಡಿಕೊಂಡು ಉಡುಪಿಯ ಜಿಲ್ಲಾಧಿಕಾರಿಯಾಗಿ ಬಂದವರೇ ಸಸಿಕಾಂತ ಸೆಂತಿಲ್ ಎಂಬ ಐದೂವರೆ ಅಡಿಯ, ಕಪ್ಪು ಬಣ್ಣದ, ಬಟ್ಟಲುಗಣ್ಣುಗಳ, ದೊಗಲೆ ಪ್ಯಾಂಟಿನ ತರುಣ ಜಿಲ್ಲಾಧಿಕಾರಿ.

ತನ್ನಂತೆ ಕನಸಿರುವವಳೊಂದಿಗೆ ಸ್ನೇಹ, ಮದುವೆ. ದೊಡ್ಡ ದೊಡ್ಡ ಕಣ್ಣುಗಳಲ್ಲಿರುವ ಕನಸಿಗೆ ರೆಕ್ಕೆಪುಕ್ಕ ಕಟ್ಟಲಾಗದು. ಇಂತಹ ವ್ಯವಸ್ಥೆಯಲ್ಲಿ ಎಂಬ ಯೋಚನೆ ಬಲವಾಗಲಾರಂಭಿಸಿತು. “ಯಾಕೋ ಮಿಸ್ ಹೋಡಿತಿದೆ. ನಾನೆಂದುಕೊಂಡಂತೆ ಡಿ. ಸಿ. ಆಗಿರಲಾರೆ, ನನಗೆ ಅಸಹಾಕತೆ ಅನುಭವ ಆಗುತ್ತಿದೆ. ಇಡೀ ವ್ಯವಸ್ಥೆಯ ಹಿಂದಿರುವುದೇ ರಾಜಕಾರಣ. ಅದನ್ನೇ ಸರಿಪಡಿಸಬೇಕು”.

ಹೇಗೆ? ಹೇಗೆ ??

“ಮಕ್ಕಳಿದ್ದರೆ ನಮ್ಮ ಕನಸಿಗೆ ತೊಡಕಾಗುವರು. ಮಕ್ಕಳು ಬೇಡ. ನಾನು ರಾಜೀನಾಮೆ ಸಲ್ಲಿಸುತ್ತೇನೆ. ನೀನು ಕೆಲಸ ಮಾಡು ನಿನ್ನ ಸಂಬಳದಲ್ಲಿ ನನ್ನನ್ನು ಸಾಕು. ನಾನು ಡಿ.ಸಿ.ಯಾಗಿ ಗಳಿಸಿದ್ದು ಇದೊಂದು ಬುಲೆಟ್. ಇದನ್ನು ಯಾರಿಗಾದರು ಕೊಟ್ಟು ಬಿಡು. ಡಿ. ಸಿ. ಕೆಲಸವೇ ಬೇಡವೆನ್ನುವುದಾದರೆ ಅದರ ಸಂಬಳದಿಂದ ಕೊಂಡ ಈ ವಾಹನವು ಬೇಡ, ಅದನ್ನೂ ಕೊಟ್ಟು ಬಿಡು” ಎಂದು ಸೂಟಕೇಸ್ ಹಿಡಿದು ಡಿ. ಸಿ. ಬಂಗ್ಲೆಯಿಂದ ಹೊರಬಿದ್ದರು ಕಲೆಕ್ಟರ್ ಸಾಹೇಬರು.

ಹೊರಬಂದ ಡಿ. ಸಿ. ಗೆ ಬಲೆ ಬೀಸಲಾರಂಭಿಸಿದವು ರಾಜಕೀಯ ಪಕ್ಷಗಳು. ‘ಜಾತಿ ಧರ್ಮಗಳ ಆಧಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳು ಬೇಡ’. ನೆಲಕಚ್ಚಿದ ಪಕ್ಷವನ್ನು ಮೆಲೆತ್ತುವುದೆ ಚಾಲೆಂಜ್. ತಮಿಳುನಾಡಿನಲ್ಲಿ ಕಾಂಗ್ರೆಸ್ ನೆಲ ಕಚ್ಚಿದ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ನೀಡಿದ ಪಕ್ಷ, ಕೆಳಗೆ ಬಿದ್ದವರನ್ನು ಎತ್ತಿಕೊಳ್ಳುವುದೇ ಚಾಲೆಂಜ್ ಎಂದು ಕಾಂಗ್ರೆಸ್ ಸೇರಿದರು.

ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಂಬಲಸಾಧ್ಯವಾದ ಸ್ಥಾನವನ್ನು ದೂರಕಿಸಿಕೊಟ್ಟು, ರಾಹುಲ್ ಗಾಂಧಿಯವರ ಕಣ್ಣಿಗೆ ಬಿದ್ದರು. ಅವರ ನೆಚ್ಚಿನವರಾಗಿ ಬಿಟ್ಟರು. “ಕರ್ನಾಟಕದಲ್ಲಿ ನಿಮ್ಮ ಚಾಣಾಕ್ಷತನವನ್ನು ತೋರಿಸಿರಿ, ವಾರ್ ರೂಮ ಹೆಡ್ ಆಗಿರಿ” ಎಂದರು ರಾಹುಲ್ ಗಾಂಧಿ. ತಮ್ಮ ಕೈ ಚಳಕ ತೋರಿಸಿದರು ಕರ್ನಾಟಕದಲ್ಲಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಲೋಕಸಭೆಯ ಚುನಾವಣೆ ಬಂತು “ದೆಹಲಿಗೆ ಬಂದು ವಾರ್ ರೂಂ ನೋಡಿ ಕೊಳ್ಳಿ” ಎಂದಿತು ಪಕ್ಷ. “ಆಯಿತು” ಎಂದರು.

ಚುನಾವಣೆಗೆ ನಾಲ್ಕು ದಿನ ಇರುವಾಗ “ತಿರುವಳ್ಳೂರು ಕ್ಷೇತ್ರದಲ್ಲಿ ನೀವು ಅಭ್ಯರ್ಥಿ, ನೆಕ್ಸ್ಟ್ ಫ್ಲೈಟ್ ಹತ್ತಿ ತಿರುವಳ್ಳೂರಿಗೆ ಹೋಗಿ” ಎಂದಿತು ಹೈಕಮಾಂಡ್.

“ವಿಮಾನ ಟಿಕೆಟ್ ಬುಕ್ ಮಾಡಿಸು” ಎಂದರು ಹೆಂಡತಿಗೆ ಸಸಿಕಾಂತ.

ಕೈಯಲ್ಲಿ ಕಾಸಿಲ್ಲ. ‘ಕಾಸಿಲ್ಲದೆ ಕೈಲಾಸ ಇಲ್ಲ’. ದೇವರು ಮಾಡಿದ ಹಾಗೆ ಎಂದು ಹೆಂಡತಿಯ ಉಳಿತಾಯದ ಹಣದಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದರು.

ಅಲ್ಪ ಸ್ವಲ್ಪ ಹಣವಿದ್ದರೂ ಅದು ಹೆಂಡತಿಯ ಸಂಬಳದ ಹಣ. ತಿಂಗಳು ತಿಂಗಳ ತಮಗೆ ಬರುವ ಪಿಂಚಣಿ ಹಣ. ಮಕ್ಕಳಿಲ್ಲ ಮರಿಯಿಲ್ಲ, ಆದಾಯಕ್ಕೆ ಮತ್ತೊಂದು ದಾರಿಯಿಲ್ಲ. ‘ಮುಪ್ಪಿನಲ್ಲಿ ಆಸರೆಯಾಗಲಿ’ ಎಂದು ಸಂಬಳದಲ್ಲಿ ಉಳಿತಾಯ ಮಾಡಿದ ಹಣ ‘ಮ್ಯೂಚುವಲ್ ಫಂಡ’ ನಲ್ಲಿದೆ. ಇಂದಿನ ಕಾಲದಲ್ಲಿ ಉಳಿತಾಯದ ಹಣದಲ್ಲಿ ಚುನಾವಣೆ ಮಾಡಲಾದೀತೆ?

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮೋದಿ ಮುಟ್ಟುಗೋಲು ಹಾಕಿದ್ದರು. ‘ನೀವೇ ಹಣ ಹೊಂದಿಸಿಕೊಂಡು ಗೆದ್ದು ಬನ್ನಿ ಎಂದಿತ್ತು’ ಕಾಂಗ್ರೆಸ್ ಪಕ್ಷ. “ಜೀವನದಲ್ಲಿ ಯಾರೆದರೂ ಕೈ ಚಾಚಿಲ್ಲ, ಚಾಚುವುದು ಇಲ್ಲ” ಎಂದು ಬಿಟ್ಟರು ಮಾಜಿ ಜಿಲ್ಲಾಧಿಕಾರಿ.

ನಾವು ಗೆಳೆಯರೊಂದಿಗೆ ‘ನೋಡೋಣ’ ಎಂದು ಚುನಾವಣಾ ಪ್ರಚಾರಕ್ಕೆ ಹೋದೆವು. ಅಲ್ಲಿ ಕಂಡದ್ದು ಅದ್ಭುತ ಉತ್ಸಾಹ. “ಕಲೆಕ್ಟರ್ ಗೆದ್ದಂತೆ ಆದರೆ ನಾವು ಚಿಂತಿಸುತ್ತಿರುವುದು ೫ ಲಕ್ಷದ ಅಂತರವನ್ನು” ಎಂದಿದ್ದರು ಮಿತ್ರ ಪಕ್ಷವಾದ ಡಿ. ಎಮ್ ಕೆ. ಯ ಜಿಲ್ಲಾ ಅಧ್ಯಕ್ಷರು.

“ಕರ್ಚಿಗೇನು ಮಾಡತೀರಿ” ಎಂದೆ. “ಏನು ಮಾಡುವುದು ಮಾರಲು ಉರಲ್ಲೊಂದು ಮನೆಯಿದೆ ಯಾರು ತಗೆದುಕೊಳ್ಳುತ್ತಿಲ್ಲ” ಎಂದರು. ಕಣ್ಣೀರು ಬಂತು. ಬೆಂಗಳೂರಿಗೆ ಹಿಂದುರಿಗಿದೆವು.

ಇಂದು ಸೆಂತಿಲ್ ಗೆದ್ದಿದ್ದಾರೆ ಮತಗಳ ಅಂತರ ೪,೭೯,೦೦೦.

ಶುಭಾಶಯಗಳು ಕಲೆಕ್ಟರ್ ಸಾಹೇಬರೆ.

ಬಡವರೂ, ಹಿಂದುಳಿದವರೂ, ಧರ್ಮವಂತರೂ ಸಹ ರಾಜಕೀಯ ಮಾಡಬಹುದು ಎಂಬ ಭರವಸೆಯನ್ನು ಸಸಿಕಾಂತ ಸೆಂತಿಲ್ ಸಿದ್ಧಪಡಿಸಿದ್ದಾರೆ.

  • ಜಿ.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply