ಪಿಂಚಣಿ ಹಣವನ್ನು ಕಾಲಕಾಲಕ್ಕೆ ತಪ್ಪದೇ ನೀಡಿ

2 years ago

ರಾಜ್ಯ ಸರ್ಕಾರ ನೀಡುವ ಸಾಮಾಜಿಕ ಭದ್ರತೆಯ ಯೋಜನೆಗಳ ಪಿಂಚಣಿ ಹಣವನ್ನು ಯಾವುದೇ ಕಾರಣಕ್ಕೂ ಪ್ರತಿ ತಿಂಗಳು ತಪ್ಪದೇ ಫಲಾನುಭವಿಗಳಿಗೆ ತಲುಪಿಸಿ.

ಅಂಗವಿಕಲರು, ಬುದ್ಧಿಮಾಂದ್ಯರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಹಣವನ್ನು ಪ್ರತಿ ತಿಂಗಳು ತಪ್ಪದೇ ನೀಡಬೇಕಾಗುತ್ತದೆ. ಏಕೆಂದರೆ ಇವರು ಈ ಹಣವನ್ನು ನಂಬಿ ಬದುಕು ನಡೆಸುತ್ತಿದ್ದಾರೆ. ಈ ಹಣದಿಂದ ತಮ್ಮ ಅಗತ್ಯಗಳಾದಂತಹ ಮಾತ್ರೆ ಔಷಧಿ ಮತ್ತು ಹೋಟೆಲ್ ಗಳಲ್ಲಿ ಕಾಫಿ ಹಾಗೂ ತಿಂಡಿ ಇವುಗಳಿಗೆ ಈ ಮೊತ್ತವನ್ನೇ ನಂಬಿರುತ್ತಾರೆ. ಆದುದರಿಂದ ಇವರಿಗೆ ಪ್ರತಿ ತಿಂಗಳು ಇಂತಹ ಮೊತ್ತಗಳು ಬಾರದೆ ಮೂರು ತಿಂಗಳು ಅಥವಾ ನಾಲ್ಕು ತಿಂಗಳಿಗೊಮ್ಮೆ ತಲುಪಿಸುವುದರಿಂದ ಯಾವ ಅನುಕೂಲವಾಗುವುದಿಲ್ಲ.

ಇವರು ತಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳಲು ಅನ್ಯರನ್ನ ಅವಲಂಬಿಸಲು ಸಾಧ್ಯವಿರುವುದಿಲ್ಲ. ಈ ವರ್ಗದ ಬಹಳಷ್ಟು ಜನ ಯಾರ ನೆರವೂ ಇಲ್ಲದೆ ಬದುಕುತ್ತಿರುವಂತಹ ಸ್ಥಿತಿಯಲ್ಲಿದ್ದಾರೆ. ಸ್ವಾಭಿಮಾನವು ಸಹ ಇವರನ್ನು ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಎಷ್ಟೇ ಕಷ್ಟವಾದರೂ ಸರಿಯೇ, ಬೇಕಾದರೆ ಕೆಲವೊಂದು ಅನಗತ್ಯ ವೆಚ್ಚಗಳನ್ನು ಮಾಡದೆ ಪಿಂಚಣಿ ಹಣಕ್ಕೆ ಮಾತ್ರ ತೊಂದರೆಯಾಗದಂತೆ ಕಾಲಕಾಲಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ವರ್ಗಾವಣೆ ಮಾಡಿ.

ಇಂತಹ ಪಿಂಚಣಿಯನ್ನ ಅವಲಂಬಿಸಿಕೊಂಡು ಬಂದಿರುವ ಹಿರಿಯ ನಾಗರಿಕರು ಪದೇ ಪದೇ ಕಚೇರಿ ಮತ್ತು ಬ್ಯಾಂಕುಗಳಿಗೆ ಅಲೆದಾಡುವ ಸ್ಥಿತಿ ಬರಬಾರದು. ಅದೇ ರೀತಿಯಲ್ಲಿ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತಿರುವ ಪೋಷಕರು ಪಿಂಚಣಿ ಹಣಕ್ಕಾಗಿ ಸರ್ಕಾರದ ಕಚೇರಿಗಳ ಬಾಗಿಲನ್ನು ಪದೇ ಪದೇ ತಟ್ಟುತ್ತಿರುವ ಸಂಗತಿಯು ನೋವಿನ ವಿಚಾರವಾಗಿರುತ್ತದೆ.

ಇವರುಗಳು ಯಾರು ಸಹ ಸಂಘಟಿತರಾಗಿರುವುದಿಲ್ಲ. ಆದುದರಿಂದ ಗಟ್ಟಿಯಾಗಿ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಒತ್ತಾಯಿಸಲು ಧ್ವನಿಯೇ ಇರುವುದಿಲ್ಲ.

ಮತ್ತೊಂದು ಗಂಭೀರವಾದಂತ ಮಾನವೀಯ ನೆಲೆಯಲ್ಲಿ ಚಿಂತಿಸಬೇಕಾದಂತಹ ಸಂಗತಿ ಏನೆಂದರೆ, ವಿಧವೆಯರಿಗೆ ಮನಸ್ವಿನಿ, ಮೈತ್ರಿ, ಅಂಗವಿಕಲರು ಮತ್ತು ಬುದ್ಧಿಮಾಂದ್ಯರ ಪಿಂಚಣಿ ಹಾಗೂ ಹಿರಿಯ ನಾಗರಿಕರ ಪಿಂಚಣಿಯನ್ನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡು ಕಡ್ಡಾಯ ಮಾಡಿರುವುದು ಸಹ ಸರಿಯಾದಂತಹ ಮಾನದಂಡವಲ್ಲ.

ಬಹಳಷ್ಟು ಮಂದಿ ಬಿಪಿಎಲ್ ಕಾರ್ಡ್ ಇಲ್ಲದ ಕಾರಣದಿಂದ ಆರ್ಥಿಕವಾಗಿ ಕಡುಕಷ್ಟದಲ್ಲಿದ್ದರೂ ಸಹ ಇಂತಹ ಪಿಂಚಣಿಗಳನ್ನ ಪಡೆದುಕೊಳ್ಳಲಾಗುತ್ತಿಲ್ಲ. ರಾಜ್ಯ ಸರ್ಕಾರ ವಿಶೇಷವಾಗಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಆಲೋಚಿಸಿ ಆಧಾರ್ ಮತ್ತು ಪಾನ್ ಕಾರ್ಡ್ ಗಳ ಮಾಹಿತಿಯ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಹ ಆರ್ಥಿಕವಾಗಿ ಸಬಲರಲ್ಲದ ಜನರಿಗೆ ಪಿಂಚಣಿ ಯೋಜನೆ ತಲುಪಿಸುವ ಕಾರ್ಯಕ್ರಮವನ್ನು ಜಾರಿಗೆ ತರಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply