ಬೆಂಗಳೂರು: ಮನುಷ್ಯನ ಶರೀರ ಮತ್ತು ಮನಸ್ಸು ದೇವರು ಕೊಟ್ಟಿದ್ದು. ಮನಸ್ಸು ಸರಿಯಿದ್ದರೆ, ಶರೀರ ಆರೋಗ್ಯವಾಗಿ ಇರುತ್ತದೆ. ಮನಸ್ಸು ಹಾಳಾದರೆ, ಮನುಷ್ಯನ ಶರೀರ ಹಾಳಾಗುತ್ತದೆ ಎಂದು ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು ಹೇಳಿದರು.
ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರ 44ನೇ ಚಾತುರ್ಮಾಸ್ಯ ಪ್ರಯುಕ್ತ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಪಲಿಮಾರು ಮಠದ ಪಟ್ಟದ ದೇವರೊಂದಿಗೆ ಮೆರವಣಿಗೆ ಮೂಲಕ ಶ್ರೀ ಪಲಿಮಾರು ಮಠ ಬರಲಾಯಿತು. ಇದೇ ವೇಳೆ ಮಾತಾಡಿದ ಅವರು, ಜನ್ಮ, ಜನ್ಮಾಂತರದಲ್ಲಿ ಮನಸ್ಸು ನಮ್ಮ ಜೊತೆಯಲ್ಲಿ ಇರುತ್ತದೆ. ಮನಸ್ಸು ಚನ್ನಾಗಿದ್ದರೆ ಇಡಿ ಪ್ರಪಂಚ ಸುಂದರವಾಗಿರುತ್ತದೆ, ಮನಸ್ಸು ಹಾಳಾದರೆ ವಿಶ್ವವೆ ಹಾಳಾಗಿ ಹೋಗುತ್ತದೆ. ಮನಸ್ಸು ಚನ್ನಾಗಿದ್ದರೆ ಅವನಷ್ಟು ಶ್ರೀಮಂತ ಯಾರು ಇಲ್ಲ, ಮನಸ್ಸು ಸರಿ ಇಲ್ಲದೇ ಹೋದರೆ ಅವನಷ್ಟು ದರಿದ್ರ ಯಾರು ಇಲ್ಲ. ಮನಸ್ಸು ಕೆಟ್ಟರೆ ಆ ದೇವರಿಂದ ಮಾತ್ರ ಸರಿಪಡಿಸಲು ಸಾಧ್ಯ. ಎಲ್ಲರು ಸುಖ, ಶಾಂತಿ ನೆಮ್ಮದಿಯಿಂದ ಬದುಕಲು ಮನಸ್ಸುಗಳನ್ನು ಶುಭ್ರವಾಗಿ ಇಟ್ಟುಕೊಳ್ಳಿ ಆಗ ಜೀವನ ಸುಂದರವಾಗಿರುತ್ತದೆ ಎಂದು ಸಲಹೆ ನೀಡಿದರು.
ನಿವೃತ್ತ ಪೂಲೀಸ್ ಅಧಿಕಾರಿ ಬಿ.ಕೆ.ಶಿವರಾಮ್, ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಕಾಡುಮಲ್ಲೇಶ್ವರ ಗೆಳಯರ ಬಳಗದ ಕಾರ್ಯಕರ್ತರು, ಭಕ್ತಾದಿಗಳು ಪಾಲ್ಗೊಂಡಿದ್ದರು.




