ಪವರ್ ಪೊಲಿಟಿಕ್ಸ್ ಬೇಡ, ಪೀಪಲ್ಸ್  ಪೊಲಿಟಿಕ್ಸ್ ಮಾಡಿ: ಬಸವರಾಜ ಬೊಮ್ಮಾಯಿ

4 months ago

ಬೆಂಗಳೂರು: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯದ ಮಕ್ಕಳ ಭವಿಷ್ಯ ಬರೆಯಬೇಕೆಂದರೆ ಎನ್ ಇ ಪಿ ಜಾರಿಯಾಗಬೇಕು. ರಾಜಕೀಯ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ಶಿಕ್ಷಣ ರಾಜಕೀಯ ಮುಕ್ತವಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ  ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ  ಸುಶಾಸನ ದಿನಾಚರಣೆ ಅಟಲ್ ಪುರಸ್ಕಾರ 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಆರು ದಶಕಗಳ ಕಾಲ ಪರಿಶುದ್ಧ ರಾಜಕಾರಣ ಮಾಡಿದ್ದರು. ಅವರ ನಡೆ ನುಡಿಯಲ್ಲಿ ವ್ಯತ್ಯಾಸ ಇರಲಿಲ್ಲ. ಅಧಿಕಾರಕ್ಜೆ ಬರುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಸುಮಾರು ನಲವತ್ತೈದು ವರ್ಷ ಹೋರಾಟ ಮಾಡಿಕೊಂಡು ಬಂದಿದ್ದರು. ಅಂತವರ ಕೈಯಲ್ಲಿ ಅಧಿಕಾರ ಬಂದಾಗ ಯಾವರೀತಿ ನಡೆಸುತ್ತಾರೆ ಎಂದು ನಿರೀಕ್ಷೆ  ಇತ್ತು. ಜನನಾಯಕನ ಕೈಯಲ್ಲಿ ಅಧಿಕಾರ ಬಂದಾಗ ಹೇಗೆ ನಡೆಸುತ್ತಾರೆ ಎಂದು ವಾಜಪೇಯಿಯವರು ತೋರಿಸಿಕೊಟ್ಟರು ಎಂದರು.

ಮಹಾತ್ಮಾ ಗಾಂಧಿ ರಾಮರಾಜ್ಯ ಸ್ವರಾಜ್ಯದ ಕಲ್ಪನೆ ಕೊಟ್ಟು ಹೋಗಿದ್ದಾರೆ. ವಾಜಪೇಯಿ ಅವರು ಈಗ ಬೇಕಾಗಿರುವುದು ಸುರಾಜ್ಯ ಎಂದು ಅವರು ಸುರಾಜ್ಯದ ಕಲ್ಪನೆ ಕೊಟ್ಟರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಅಂದರು. ಸ್ವಾತಂತ್ರ್ಯ ಬಂದ ಮೇಲೆ ದೇಶದ ವಿಭಜನೆ ಮತ್ತೆ ನಮ್ಮ ಮೇಲೆ ಯುದ್ಧ ಸಾರಿದ್ದರು‌‌. ಲಾಲ್ ಬಹದ್ದೂರು ಶಾಸ್ತ್ರಿಯವರು ಜೈ ಜವಾನ್ ಜೈಕಿಸಾನ್ ಅಂದರು. ಆಗ ಆಹಾರದ ಕೊರತೆ ಇತ್ತು. ಹೀಗಾಗಿ ಸೈನಿಕ ಮತ್ತು ರೈತರ ಅಗತ್ಯ ಇತ್ತು. ಇವತ್ತಿನ ಭಾರತ ಹಿಂದುಳಿಯಬಾರದು ಎಂದು ವಾಜಪೇಯಿ ಅವರು  ಜೈ ವಿಜ್ಞಾನ ಎಂದರು. ಅವರ 101ನೇ ಜಯಂತಿ ಕಾರ್ಯಕ್ರಮ ಮಾಡಿರುವುದು ಅತ್ಯಂತ ಸುಸ್ತ್ಯ ಕಾರ್ಯ ಎಂದರು.

ಚಾಲುಕ್ಯರ ಆರನೇ ವಿಕ್ರಮಾದಿತ್ಯ ಆಡಳಿತ ಮಾಡುವುದು ಮತ್ತು ಆಳ್ವಿಕೆ ಮಾಡುವುದು ಬೇರೆ ಅಂತ ಹೇಳಿದ್ದಾನೆ. ಆಡಳಿತ ಮಾಡುವವರು ಆಳ್ವಿಕೆ ಮಾಡುತ್ತಿದ್ದಾರೆ. ಕಟ್ಟುವುದು ಬಹಳ ಕಷ್ಟ ಕೆಡುವುವುದು ಬಹಳ ಸುಲಭ‌. ಮೊದಲು ಯಾರ ಬಳಿ ಭೂಮಿ ಇತ್ತು ಅವರು ಜಗತ್ತನ್ನು ಆಳುತ್ತಿದ್ದರು. ನಂತರ ಯಾರ ಬಳಿ ದುಡ್ಡಿದೆ, ಬ್ರಿಟೀಷರು ಕರ್ನಾಟಕಕ್ಕಿಂತ ಸಣ್ಣ ದೇಶ 139 ದೇಶಗಳನ್ನು ಆಳಿದರು. 21 ನೆ ಶತಮಾನ ಜ್ಞಾನ ಇದ್ದವರ ಶತಮಾನ ಎಂದರು.

ಪ್ರಧಾನಿ, ಸಿಎಂಗಳು ಜ್ಞಾನ ಇದ್ದವರನ್ನು ಭೇಟಿಯಾಗಲು ಬಯಸುತ್ತಾರೆ. ಮೊದಲು ಪಿಎಂಗಳು ದೆಹಲಿಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೆ ಬರುತ್ತಾರೆ. ಇನ್ಫೋಸಿಸ್, ವಿಪ್ರೊಗಳಿಗೆ ಭೇಟಿ ನೀಡುತ್ತಾರೆ. ನಮ್ಮ ದೇಶದ ಮಕ್ಕಳು ಇತರ ದೇಶಗಳ ಮಕ್ಕಳಿಗೆ  ಪೈಪೋಟಿ ಕೊಡಲು ಕಲಿಸಬೇಕು ಎಂದರು.

ಎನ್ ಇ ಪಿಯಲ್ಲಿ ಕಲಾ ವಿಷಯಗಳ ಜೊತೆಗೆ ವಿಜ್ಞಾನವನ್ನು ಕಲಿಯಲು ಅವಕಾಶ ಇದೆ‌. ಆದರೆ,  ಎನ್ ಇಪಿ ಮುಂದುವರೆಯಲಿಲ್ಲ. ಅದಕ್ಕೆ ಪರ್ಯಾಯ ಮಾಡಲಿಲ್ಲ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯದ ಮಕ್ಕಳ ಭವಿಷ್ಯ ಬರೆಯಬೇಕೆಂದರೆ ಎನ್ ಇಪಿ ಜಾರಿಯಾಗಬೆಕು ರಾಜಕೀಯ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ರಾಜಕೀಯ ಮುಕ್ತವಾಗಬೇಕು ಎಂದರು.

ಹಳ್ಳಿ ಮಕ್ಕಳು ಬಹಳ ಕಷ್ಟದಲ್ಲಿ ಇದ್ದಾರೆ. ಕೇಂದ್ರ ಸಚಿವ  ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹಳ್ಳಿಗಳಲ್ಲಿ ಪಬ್ಲಿಕ್ ಶಾಲೆಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ಇನ್ನಷ್ಟು ಪಬ್ಲಿಕ್ ಶಾಲೆಗಳನ್ನು ಮಾಡಲು ಹೊರಟಿದೆ ಒಳ್ಳೆಯದು. ನಮ್ಮ ಮಕ್ಕಳಿಗೆ ಪ್ರತಿಭೆ ಕೊರತೆಯಿಲ್ಲ. ನಾನು ಸಿಎಂ ಆಗಿದ್ದಾಗ 30 ಸಾವಿರ ಶಾಲಾ ಕೊಠಡಿ ನಿರ್ಮಿಸಲು ತೀರ್ಮಾನಿಸಿ 10 ಸಾವಿರ ಕೊಠಡಿ ನಿರ್ಮಿಸಿದ್ದೆವು. ಈಗ ಯೋಜನೆ ನಿಂತಿದೆ ಎಂದರು.

ಕಂಠಪಾಠದ ಶಿಕ್ಷಣ ನಿಲ್ಲಬೇಕು. ಶಿಕ್ಷಣದಲ್ಲಿ ಕ್ರಾಂತಿಯಾದರೆ ದೇಶದಲ್ಲಿ ಕ್ರಾಂತಿಯಾಗುತ್ತದೆ. ಎಲ್ಲ ಶಿಕ್ಷಣವನ್ನು ನೌಕರಿಗೆ ಮಾಡುತ್ತೇವೆ ಉದ್ಯೋಗ ಅರಸುವ ಶಿಕ್ಷಣ ಬಹಳ ದಿನ ಇರುವುದಿಲ್ಲ. ಉದ್ಯೊಗ ಕೊಡುವ ಶಿಕ್ಷಣ ಆರಂಭಿಸಬೇಕು ಎಂದರು.

ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿಯಾನ ಆರಂಭಿಸಿ ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚುವ ಕೆಲಸ ಮಾಡಿದರು. ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ರಾಜ್ಯ ಸರ್ಕಾರದ ಜವಾಬ್ದಾರಿ. ಶಿಕ್ಷಣ ದುಬಾರಿಯಾಗಬಾರದು‌‌. ಕೆಂಪೇಗೌಡ ಫೌಂಡೇಶನ್ ಅವರು ಬದಲಾವಣೆಯ ಬೀಜ ಬಿತ್ತಬೇಕು. ಕೆಂಪೇಗೌಡರು ಸುಶಾಸನ ಮಾಡಿದ್ದರು. ಅದೇ ರೀತಿ ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯಿತು. ರಾಜ್ಯದಲ್ಲಿ ಜನಕೇಂದ್ರಿತ ಆಡಳಿತ ನಡೆಯಬೇಕು. ಪವರ್ ಪೊಲಿಟಿಕ್ಸ್ ಬೇಡ, ಪೀಪಲ್ಸ್  ಪೊಲಿಟಿಕ್ಸ್ ಮಾಡಿ ಎಂದು ಜನ ಸಾಮನ್ಯರು ಈ ಪ್ರಶ್ನೆ ಕೇಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೃಷ್ಣೇಗೌಡ ಹಾಜರಿದ್ದರು. ಈ ಸಂದರ್ಭದಲ್ಲಿ ಐಐಎಸ್ಸಿ ನಿರ್ದೇಶಕ ಪ್ರೊ ಗೋವಿಂದ ರಂಗರಾಜನ್, ನಿವೃತ್ತ ಕುಲಪತಿ ಡಾ ಚಂದ್ರಶೇಖರ ಶೆಟ್ಟಿ, ಬೇಸ್ ಸಂಸ್ಥೆ ಸಂಸ್ಥಾಪಕ ಡಾ. ನಾಗರಾಜ್ ಅವರಿಗೆ ಅಟಲ್ ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Reply