ನಿಧಿಯಾಸೆಗೆ ಮಗಳನ್ನೇ ಬಲಿಕೊಡಲು ಮುಂದಾದ ತಾಯಿ

5 months ago

ಬೆಂಗಳೂರು: ಗಂಡನ ಜೊತೆ ಸದಾ ಕಿರಿಕಿರಿ ಮಾಡಿಕೊಂಡು ತವರು ಮನೆ ಸೇರುತ್ತಿದ್ದ ಮಗಳ ಹಿಂಸೆಯನ್ನು ತಾಳಲಾರದೆ ಆಕೆಯನ್ನು ಅವರ ತಾಯಿಯೇ ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂಬ ಘಟನೆಗೆ ಇದೀಗ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಸಮೀಪದಲ್ಲಿ ಈ ಘಟನೆ ನಡೆದಿದ್ದು ತಾಯಿ ಬೀಸಿದ ಬಲೆಯಲ್ಲಿ ಗಾಯಗೊಂಡಿರುವ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದಾಗ ಪೊಲೀಸರಿಗೆ ಅಚ್ಚರಿಯ ಮಾಹಿತಿ ಸಿಕ್ಕಿದೆ. ಇದು ಗಂಡನ ಕಿರಿಕಿರಿ ತಾಳಲಾರದೆ ಪದೇ ಪದೇ ತವರು ಮನೆಗೆ ಬರುತ್ತಿದ್ದ ಮಗಳ ವರ್ತನೆಯಿಂದ ಬೇಸತ್ತು ತಾಯಿ ಮಾಡಿದ ಘಟನೆ ಅಲ್ಲ, ಬದಲಿಗೆ ಇದು ನಿಧಿ ಆಸೆಗಾಗಿ ನಡೆದ ಘಟನೆಯಾಗಿದೆ. ನಿಧಿಯ ಬೆನ್ನು ಹತ್ತಿ ಹಲವಾರು ಪೂಜೆ ಮಾಡಿದ ತಾಯಿ, ಅದಕ್ಕಾಗಿ ತನ್ನ ಮಗಳನ್ನೇ ನರಬಲಿ ನೀಡಲು ಯತ್ನಿಸಿದ ಘಟನೆ ಇದಾಗಿದೆ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್ ನಲ್ಲಿರುವ ಹರಿಹರೇಶ್ವರ ದೇವಸ್ಥಾನದ ಬಳಿ ತಾಯಿ ಸರೋಜಮ್ಮ ಎಂಬವರು ತನ್ನ ಮಗಳು ರಮ್ಯಾ ಎಂಬುವರನ್ನು ಹತ್ಯೆ ಮಾಡಲು ಯತ್ನಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

ಗಂಡನ ಮನೆಯಲ್ಲಿ ಸದಾ ಕಿರಿಕಿರಿ ಮಾಡಿಕೊಂಡು ತವರು ಮನೆಗೆ ಬಂದಿದ್ದ ರಮ್ಯಾ ತನ್ನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಹರಿಹರೇಶ್ವರ ದೇವಾಲಯದಲ್ಲಿ ಪೂಜೆ ಮಾಡಿಸಲಾಗುತ್ತಿತ್ತು. ಎಲ್ಲರೂ ತನ್ನ ಮಗಳಿಗೆ ಒಳಿತಾಗಲಿ ಎಂದು ತಾಯಿ ಪೂಜೆ ಮಾಡುತ್ತಿದ್ದಾರೆ ಎಂದು ನಂಬಿದ್ದರು. ಅದರಂತೆ ಇಂದು ಬೆಳಗಿನ ಜಾವ ಪೂಜೆ ಮುಗಿಸಿ ಮಗಳು ರಮ್ಯಾ ನಮಸ್ಕರಿಸುವ ವೇಳೆ ತಾಯಿ ಸರೋಜಾ ತಾವು ತಂದಿದ್ದ ಮಚ್ಚಿನಿಂದ ಆಕೆಯ ಕುತ್ತಿಗೆ ಕತ್ತರಿಸಲು ಹೋಗಿದ್ದಾರೆ. ಆಕೆ ಬೀಸಿದ ಮಚ್ಚಿನಿಂದ ಅರೆಬರೆ ಗಾಯಗೊಂಡ ಮಗಳು ರಮ್ಯಾ ಜೋರಾಗಿ ಕಿರುಚಿಕೊಂಡು ಬಿದ್ದಿದ್ದಾಳೆ. ಈ ಸದ್ದು ಕೇಳಿ ಸ್ಥಳೀಯರು ಅಲ್ಲಿಗೆ  ಬರುತ್ತಿದ್ದಂತೆ ತಾಯಿ ಸರೋಜಮ್ಮ ಸ್ಥಳದಿಂದ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಮ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಇದು ನಿಧಿಯ ಆಸೆಗಾಗಿ ನರಬಲಿ ನೀಡುವ ಘಟನೆಯಾಗಿದೆ ಎಂಬ ಅಂಶ ಪತ್ತೆಯಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಮತ್ತೊಂದು ಸ್ಫೋಟಕ ವಿಚಾರ ಪತ್ತೆಯಾಗಿದೆ. ಕಳೆದ ಒಂದು ತಿಂಗಳಿನಿಂದ ದೇವಸ್ಥಾನಕ್ಕೆ ಬಂದು ಬೆಳಗಿನಜಾವ ನಾಲ್ಕುಗಂಟೆಗೆ ಸುಜಾತ ಪೂಜೆ ಶುರು ಮಾಡುತ್ತಿದ್ದಳು. ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ಮಗಳು ರಮ್ಯಾಳನ್ನ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಕೂಡ ಮೂರ್ನಾಲ್ಕು ದಿನಗಳಿಂದ ಪೂಜೆಗೆ ಬರುತ್ತಿದ್ದರು. ಅದರಂತೆ ಬೆಳಗಿನ ಜಾವ ಕೂಡ ಇಬ್ಬರೂ ಪೂಜೆಗೆ ಬಂದಿದ್ದರು. ಸಿಸಿಟಿವಿಯಲ್ಲಿ ಮಗಳೇ ಮಚ್ಚುಗಳನ್ನ ಹಿಡಿದುಕೊಂಡು ಬಂದಿದ್ದು ಪತ್ತೆಯಾಗಿದೆ. ಈ ವೇಳೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿರುವ ಶಂಕೆ ಇದೆ. ನಮಸ್ಕರಿಸುವ ವೇಳೆ ರಮ್ಯಾ ಕುತ್ತಿಗೆಗೆ ಮಚ್ಚು ಬೀಸಿರುವ ಸುಜಾತ, ನಂತರ ರಮ್ಯಾ ಕೂಡ ಸುಜಾತ ಮೇಲೆ ಹಲ್ಲೆ ಮಾಡಿರುವ ಮಾಹಿತಿ ಇದೆ. ಹಲ್ಲೆ ಪರಿಣಾಮ ಸುಜಾತ ಹಣೆಗೆ ಗಾಯವಾಗಿದೆ. ಸುಜಾತ‌ ಗಾಯವಾಗಿ ರಕ್ತ ಸುರಿಸಿಕೊಂಡೇ ದೇವಸ್ಥಾನದಿಂದ ಕಾಲ್ಕಿತ್ತಿದ್ದಳು. ಸುಸ್ತಾಗಿ ನೇರವಾಗಿ ಮನೆಗೆ ಹೋಗಿದ್ದ ಸುಜಾತ. ಈ ಬಗ್ಗೆ ಮಾಹಿತಿ ಪಡೆದು ಸುಜಾತಳನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರಿಗೆ ಸಾಕಷ್ಟು ಅನುಮಾನ‌ ಮೂಡಿದೆ. ಇಬ್ಬರೂ ಒಬ್ಬರಿಗೊಬ್ಬರು ಬಲಿ ಕೊಟ್ಟುಕೊಳ್ಳಲು ಮುಂದಾಗಿದ್ದಾರೆ ಅನ್ನುವ ಅನುಮಾನ ಕೂಡ ಇದ್ದು  ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply