ಬೆಂಗಳೂರು: ತಮಿಳುನಾಡಿನಲ್ಲಿ ತಮಿಳು ಕಡ್ಡಾಯ ಮಾಡಿದಂತೆ ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡುವಂತೆ ರಾಜ್ಯ ಸರಕಾರದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಲಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮೂಲಕ ಅವರು, ತಮಿಳುನಾಡಿನಲ್ಲಿ ತಮಿಳು ಭಾಷೆಯನ್ನು ಕಡ್ಡಾಯವನ್ನಾಗಿಸಿ ಕಾನೂನು ಮಾಡಿದಂತೆ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಿ ಕಾಯ್ದೆಯನ್ನು ಜಾರಿಯಾಗಬೇಕು. ಎಲ್ಲಕ್ಕಿಂತ ಮೊದಲು ಕನ್ನಡಿಗರಾದ ನಾವು ನಾಡ ಭಾಷೆಯ ಉಳಿವಿಗೆ ಹೋರಾಟ ಮಾಡುತ್ತ ಬಂದರೂ ಇನ್ನೂ ಕಾನೂನು ಅಗದಿರುವುದು ಕಳವಳಕಾರಿ ಸಂಗತಿ. ತಕ್ಷಣದಲ್ಲಿ ಇದರ ಗಂಭೀರತೆ ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಗ್ರಿವಾಜ್ಞೆ ಮೂಲಕ ಕನ್ನಡ ಕಡ್ಡಾಯ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡು ಸರಕಾರ 2016ರ ತಮಿಳುನಾಡು ರಾಜ್ಯ ಸಾರ್ವಜನಿಕ ಸೇವಾ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಅಲ್ಲಿನ ವಿಧಾನಸಭೆ ಶುಕ್ರವಾರ ಧ್ವನಿ ಮತದ ಮೂಲಕ ಅನುಮೋದಿಸುವುದರೊಂದಿಗೆ ತಮಿಳುನಾಡು ರಾಜ್ಯ ಸರಕಾರಿ ಸೇವೆಗಳ ನೇಮಕಾತಿಗೆ ತಮಿಳು ಭಾಷಾ ಪತ್ರಿಕೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ತಿದ್ದುಪಡಿಯ ಅನುಸಾರ, ತಮಿಳು ಭಾಷೆಯ ಅಗತ್ಯ ಜ್ಞಾನವಿದ್ದರೂ, ಅಂತಹ ವ್ಯಕ್ತಿ ನೇರ ನೇಮಕಾತಿ ಮೂಲಕ ಯಾವುದೇ ಸೇವೆಗೆ ಅರ್ಹನಾಗಿರುವುದಿಲ್ಲ. ಬದಲಿಗೆ ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸರಕಾರಿ ಸೇವೆ ಮತ್ತು ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಮಾಡಲು ಅರ್ಹರು ಎಂದು ತಮಿಳುನಾಡು ಸರಕಾರ ಕಾನೂನು ಮಾಡಿ ಪ್ರಕಟಣೆ ಹೊರಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮಿಳು ಭಾಷೆ ಕುರಿತು ಸೂಕ್ತ ಜ್ಞಾನವಿಲ್ಲದ ಅಭ್ಯರ್ಥಿಗಳು ಒಂದು ವೇಳೆ ಅರ್ಹತೆ ಪಡೆದುಕೊಂಡರೂ, ಅವರು ತಮ್ಮ ನೇಮಕಾತಿಯ ದಿನಾಂಕದಿಂದ ಎರಡು ವರ್ಷಗಳ ಒಳಗೆ ತಮಿಳಿನಲ್ಲಿ ‘ದ್ವಿತೀಯ ತರಗತಿ ಭಾಷೆ ಪರೀಕ್ಷೆ’ಯ ತಮಿಳು ಭಾಷೆಯಲ್ಲಿ ಶೇ 40ಕ್ಕಿಂತ ಕಡಿಮೆ ಅಂಕಗಳು ಇಲ್ಲದಂತೆ ಉತ್ತೀರ್ಣರಾಗಬೇಕಾಗುತ್ತದೆ ಎಂಬ ನಿಯಮವನ್ನು ಕಾನೂನಿನಲ್ಲಿ ನೀಡಿದೆ. ಇದರಲ್ಲಿ ಅವರು ವಿಫಲರಾದರೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟ ಪಡಿಸಿದೆ ಎಂದಿದ್ದಾರೆ.
ತಮಿಳುನಾಡು ಸರಕಾರಿ ಸೇವೆಗಳಿಗೆ ಸ್ಥಳೀಯ ತಮಿಳರನ್ನು ಮಾತ್ರವೇ ನೇಮಕಾತಿ ಮಾಡಿಕೊಳ್ಳಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಲು ವಿಧೇಯಕವನ್ನು ಮರು ಪರಿಶೀಲನೆ ನಡೆಸಬೇಕು ಎಂದು ಡಿಎಂಕೆ ಪಕ್ಷದ ಟಿ. ವೇಲ್ಮುರುಗನ್ ಮನವಿ ಮಾಡಿದ್ದರು. ತಮಿಳಿಗರಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿಸಿಕೆ ಪಕ್ಷದ ಸದಸ್ಯ ಜೆ. ಮೊಹಮ್ಮದ್ ಶಾನವಾಸ್ ಒತ್ತಾಯಿಸಿದ್ದರು. ಹೀಗೆ ತಮಿಳುನಾಡು ಸರಕಾರ ಈ ವಿಧೇಯಕವನ್ನು ಧ್ವನಿಮತದಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕ ಮೇಲೆ ಕಾನೂನಾಗಿ ಅಂಗೀಕರಿಸಿದ್ದಾರೆ ಎಂದಿದ್ದಾರೆ.
ಆದರೆ ನಮ್ಮ ರಾಜ್ಯದಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼ ಜಾರಿಗೆ ತರಬೇಕೆಂದು ಕಳೆದ ಒಂದು ವರ್ಷದಿಂದ ಸಮಸ್ತ ಕನ್ನಡಿಗರು ಸೇರಿದಂತೆ, ಕನ್ನಡ ನಾಡಿನ ಹೆಮ್ಮೆಯ ಕನ್ನಡದ ಅಸ್ಮಿತೆಯ ಸಾಕ್ಷಿಪ್ರಜ್ಞೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯ ಮಾಡುತ್ತಲೇ ಬಂದಿತ್ತು.ವಾಸ್ತವದಲ್ಲಿ ನಮ್ಮ ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡುವುದಕ್ಕೆ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼ ಸಿದ್ದಪಡಿಸಲಾಗದೆ. ತಕ್ಷಣದಲ್ಲಿ ಕರಡು ವಿಧೇಯಕ ಕಾನೂನಾಗಿದ್ದರೆ ಕನ್ನಡ ನಾಡು ಮೊದಲು ಕನ್ನಡ ಕಡ್ಡಾಯ ಮಾಡಿದ ಹೆಮ್ಮೆಗೆ ಪಾತ್ರವಾಗುತ್ತಿತ್ತು. ಆದರೆ ಕಳೆದ ಎರಡು ಅಧಿವೇಶನಗಳಲ್ಲಿ ಈ ವಿಷಯನ್ನು ಚರ್ಚೆ ನಡೆಸಬೇಕೆಂದು ಒತ್ತಾಯ ಮಾಡುತ್ತಲೇ ಬಂದಿತ್ತು. ಜೊತೆಗೆ ರಾಜ್ಯದ ಎಲ್ಲಾ ಶಾಸಕರಿಗೆ ಸಚಿವರಿಗೆ ಪಕ್ಷಬೇದ ಮರೆತು ನಾವೆಲ್ಲಾ ಕನ್ನಡಿಗರು ಎನ್ನುವ ಭಾವನೆಯಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼ ಕಾನೂನಾಗಲು ಬೆಂಬಲ ಸೂಚಿಸುವಂತೆ ಪರಿಷತ್ತು ಎಲ್ಲರ ಶಾಸಕರಲ್ಲಿಯೂ ಮನವಿ ಮಾಡಿಕೊಂಡಿತ್ತು ಎಂದಿದ್ದಾರೆ.
ಆದರೆ ಕಳೆದ ಎರಡು ಅಧಿವೇಶನಗಳಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼನ್ನು ಚರ್ಚೆಗೆ ತೆಗೆದುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಏನೆ ಆದರೂ ಇನ್ನೂ ಸಮಯ ಮಿಂಚಿಲ್ಲ, ಬಸವರಾಜ ಬೊಮ್ಮಾಯಿ ಅವರು ಕನ್ನಡ ಭಾಷೆಯ ಹಿತ ಕಾಯುವುದಕ್ಕೆ ಮುಂದಾಗಬೇಕಾಗಿದೆ. ಅದಕ್ಕಾಗಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼವನ್ನು ಕಾನೂನು ಮಾಡುವುದಕ್ಕೆ ಸುಗ್ರಿವಾಜ್ಞೆಯ ಮೂಲಕ ಜಾರಿ ತರುವಂತೆ ಒತ್ತಾಯಿಸಿದ್ದಾರೆ.



